ಸಿಎಎ ಜನಜಾಗೃತಿಗೆ ಬಂದವರಿಗೆ ಘೇರಾವ್‌| ಹೊಸಪೇಟೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ

ಹೊಸಪೇಟೆ[ಜ.07]: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿಗೆ ಬಂದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಗೋ ಬ್ಯಾಕ್‌, ಗೋ ಬ್ಯಾಕ್‌ ಎಂದು ಕೂಗಿ ಘೇರಾವ್‌ ಹಾಕಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆಯ ಚಲವಾದಿ ಕೇರಿಯಲ್ಲಿ ಸೋಮವಾರ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಲತ್ವಾಡ ಮತ್ತು ಬಿಜೆಪಿ ಮಹಿಳಾ ಮುಖಂಡರಾದ ಕವಿತಾ ಈಶ್ವರ್‌ ಸಿಂಗ್‌ ನೇತೃತ್ವದಲ್ಲಿ ನಗರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಜನಜಾಗೃತಿ ಅಭಿಯಾನ ನಡೆಸಲು ಚಲವಾದಿ ಕೇರಿ ದ್ವಾರ ಬಾಗಿಲು ಬಳಿ ಹೋದಾಗ ಸ್ಥಳೀಯ ವಾರ್ಡ್‌ ಮುಖಂಡರು, ಯುವಕರು, ಅಲ್ಪಸಂಖ್ಯಾತ ಮುಖಂಡರು ಬಿಜೆಪಿಯವರನ್ನು ತಡೆದು ನಿಲ್ಲಿಸಿ, ನಮ್ಮ ಓಣಿಗೆ ಬರುವುದು ಬೇಡ, ನಮಗೆ ಪೌರತ್ವದ ಬಗ್ಗೆ ತಿಳಿದಿದೆ ಎಂದು ಹೇಳಿದರು.

ಆಗ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಾತನಾಡಿ, ನಾವು ಪೌರತ್ವ ಕಾಯ್ದೆಯ ಕುರಿತು ಕರಪತ್ರಗಳನ್ನು ಕೊಟ್ಟು ಹೋಗಲು ಬಂದಿದ್ದೇವೆ. ಅದಕ್ಕೆ ನೀವ್ಯಾಕೆ ತಡೆಯುತ್ತೀರಿ? ನಮಗೆ ಅವಕಾಶ ಕಲ್ಪಿಸಿಕೊಡಿ ಎಂದು ಸ್ಥಳೀಯ ಯುವಕರಿಗೆ ಹೇಳಿದರು. ಪರಸ್ಪರ ವಾಗ್ವಾದ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಮಧ್ಯಪ್ರವೇಶಿಸಿ, ಪರಿಸ್ಥಿತಿ ನಿಭಾಯಿಸಿ, ಗುಂಪು ಚದುರಿಸಿದರು. ಬಿಜೆಪಿ ಮುಖಂಡರು ವಾಪಸ್‌ ಹೋದರು.