ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತುಹೋಗಿದ್ದ 10 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು, ಚಾಲಕ ಸಿದ್ದರಾಜು ಮತ್ತು ಕಂಡಕ್ಟರ್ ನಾಗೇಂದ್ರ ಅವರು ಪ್ರಾಮಾಣಿಕವಾಗಿ ಹಿಂತಿರುಗಿಸಿದ್ದಾರೆ. ಹಿರಿಯ ಅಧಿಕಾರಿಗಳ ಮೂಲಕ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.

ಮಾನವೀಯತೆ ಮೆರೆದ ಬಿಎಂಟಿಸಿ ಸಿಬ್ಬಂದಿ; 10 ಲಕ್ಷದ ಚಿನ್ನ ಸುರಕ್ಷಿತ!

ಬೆಂಗಳೂರು (ಮಾ.21): ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಬಿಎಂಟಿಸಿ ಡ್ರೈವರ್ ಮತ್ತು ಕಂಡಕ್ಟರ್ ಪ್ರಾಮಾಣಿಕತೆಯಿಂದ ವಾಪಸ್ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿನ್ನದ ಬ್ಯಾಗ್ ಮರೆತುಹೋಗಿದ್ದ ಪ್ರಯಾಣಿಕ

ನಿನ್ನೆ ರಾತ್ರಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅವಸರದಲ್ಲಿ ತಮ್ಮ ಬ್ಯಾಗ್ ಅನ್ನು ಕುಳಿತ ಸೀಟಿನಲ್ಲೇ ಬಿಟ್ಟು ಇಳಿದಿದ್ದರು. ಆ ಬ್ಯಾಗ್‌ನಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದವು. ಮನೆಗೆ ತಲುಪಿದ ನಂತರವಷ್ಟೇ ಬ್ಯಾಗ್ ಕಳೆದುಹೋದ ವಿಷಯ ಪ್ರಯಾಣಿಕರಿಗೆ ತಿಳಿದು ಆತಂಕಕ್ಕೊಳಗಾಗಿದ್ದರು.

ಚಾಲಕ ಸಿದ್ದರಾಜು, ಕಂಡಕ್ಟರ್ ನಾಗೇಂದ್ರ ಅವರ ಪ್ರಾಮಾಣಿಕತೆಗೆ ಸಲಾಂ!

ಬಸ್ಸಿನ ಸೀಟಿನ ಮೇಲೆ ಬ್ಯಾಗ್ ಇರುವುದು ಗಮಿಸಿದ ಕಂಡಕ್ಟರ್ ನಾಗೇಂದ್ರ, ಈ ವಿಚಾರ ಡ್ರೈವರ್ ಸಿದ್ದರಾಜು ಅವರ ಗಮನಕ್ಕೂ ತಂದಿದ್ದಾರೆ. ಬಳಿಕ ಕೂಡಲೇ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಚಿನ್ನಾಭರಣಗಳಿರುವುದು ಪತ್ತೆಯಾಗಿದೆ. ಯಾವುದೇ ಆಮಿಷಕ್ಕೆ ಒಳಗಾಗದ ಇಬ್ಬರೂ ಸಿಬ್ಬಂದಿ ತಕ್ಷಣವೇ ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರಿಗೆ ಚಿನ್ನಾಭರವಿದ್ದ ಬ್ಯಾಗ್ ಹಸ್ತಾಂತರಿಸಿದ ಅಧಿಕಾರಿಗಳು

ಘಟನೆಯ ಬಗ್ಗೆ ಮಾಹಿತಿ ಪಡೆದ ಬಿಎಂಟಿಸಿ ಹಿರಿಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾದರು. ಸರಿಯಾದ ದಾಖಲೆಗಳನ್ನು ಪರಿಶೀಲಿಸಿದ ನಂತರ, ಬ್ಯಾಗ್‌ನ ವಾರಸುದಾರರನ್ನು ಪತ್ತೆಹಚ್ಚಿ ಅವರ ಸಮ್ಮುಖದಲ್ಲೇ 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹಸ್ತಾಂತರಿಸಲಾಯಿತು. ತಮ್ಮ ಕಳೆದುಹೋದ ಸಂಪತ್ತನ್ನು ವಾಪಸ್ ಪಡೆದ ಪ್ರಯಾಣಿಕರು ಬಿಎಂಟಿಸಿ ಸಿಬ್ಬಂದಿಯ ಪ್ರಾಮಾಣಿಕತೆಗೆ ಕಣ್ಣೀರಿಡುತ್ತಾ ಧನ್ಯವಾದ ಅರ್ಪಿಸಿದರು.