ರಾಮಮಂದಿರವಲ್ಲ, RSS ಮಂದಿರ ಎಂದ ಮುಖಂಡನ ವಿರುದ್ಧ ಕ್ರಮಕ್ಕೆ ಗೃಹ ಸಚಿವ ಸೂಚನೆ
ರಾಮಮಂದಿರ ಮತ್ತು ಆರ್ ಎಸ್ಎಸ್ ವಿರುದ್ಧ ಪಿಎಫ್ ಐ ನಾಯಕ ನೀಡಿದ ಹೇಳಿಕೆಗೆ ಗೃಹ ಸಚಿವರು ಗರಂ ಆಗಿದ್ದಾರೆ.
ಬೆಂಗಳೂರು, (ಫೆ.19): ಅದು ರಾಮಮಂದಿರವಲ್ಲ, RSS ಮಂದಿರ. ಅದಕ್ಕೆ 1 ಪೈಸೆಯೂ ಕೊಡಬೇಡಿ ಎಂದು ಕರೆ ನೀಡಿರುವ ಪಿಎಫ್ಐ ಮುಖಂಡನ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಗೃಹ ಸಚಿವ ಬಸವರಾಜ ಮೊಬ್ಬಾಯಿ ಸೂಚನೆ ನೀಡಿದ್ದಾರೆ.
ಅದು ರಾಮಮಂದಿರ ಅಲ್ಲ. RSS ಮಂದಿರ. ಅದಕ್ಕೆ 1 ಪೈಸೆಯೂ ಕೊಡಬೇಡಿ ಎಂದು ಮಂಗಳೂರಿನ ಉಲ್ಲಾಳದಲ್ಲಿ PFI ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದರು.
'ಅದು ರಾಮಮಂದಿರವಲ್ಲ, RSS ಮಂದಿರ: 1 ಪೈಸೆಯೂ ಕೊಡಬೇಡಿ'
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಂಗಳೂರಿನ ಉಲ್ಲಾಳದಲ್ಲಿ ಪಿಎಫ್ ಐ ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕ. ದೇಶದ ಜನತೆಯನ್ನು ಒಡೆಯುವ ಪ್ರಯತ್ನದ ಹೇಳಿಕೆಯಾಗಿದೆ ಎಂದರು.
ಆರ್ ಎಸ್ಎಸ್ ಸಂಘಟನೆ ಒಂದು ದೇಶಭಕ್ತಿಯ ಪ್ರತೀಕ. ರಾಮ ಮಂದಿರ ನಿರ್ಮಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಬಗ್ಗೆ ಪಿಎಫ್ ಐ ನಾಯಕರು ಮಾತನಾಡಿರುವುದು ಆಕ್ಷೇಪಾರ್ಹ. ಪಿಎಫ್ ಐ ತನ್ನ ನಿಜ ಬಣ್ಣವನ್ನು ಹಲವು ಬಾರಿ ತೋರಿಸಿದೆ. ದೇಶ ವಿರೋಧಿ ಹೇಳಿಕೆ ನೀಡಿರುವ ಪಿಎಫ್ ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದು ಹೇಳಿದರು.