Asianet Suvarna News Asianet Suvarna News

ಇನ್ಸ್‌ಪೆಕ್ಟರ್‌ ಸಸ್ಪೆಂಡ್‌ಗೂ ಸಾವಿಗೂ ಸಂಬಂಧವಿಲ್ಲ: ಸಚಿವ ಆರಗ ಜ್ಞಾನೇಂದ್ರ

ಕೆ.ಆರ್‌.ಪುರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ನಂದೀಶ್‌ ಅವರ ಸಾವು ದುರದೃಷ್ಟಕರವಾಗಿದ್ದು, ಅವರ ಸಾವಿನ ಘಟನೆಯನ್ನು ಅನ್ಯ ಕಾರಣಗಳಿಗೆ ತಳುಕು ಹಾಕಿ ಮಾತನಾಡುವುದು ಸರಿಯಲ್ಲ ಎಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. 

Home Minister Araga Jnanendra Reaction On Inspector Nandish Death Case gvd
Author
First Published Oct 30, 2022, 2:15 AM IST

ಬೆಂಗಳೂರು (ಅ.30): ಕೆ.ಆರ್‌.ಪುರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ನಂದೀಶ್‌ ಅವರ ಸಾವು ದುರದೃಷ್ಟಕರವಾಗಿದ್ದು, ಅವರ ಸಾವಿನ ಘಟನೆಯನ್ನು ಅನ್ಯ ಕಾರಣಗಳಿಗೆ ತಳುಕು ಹಾಕಿ ಮಾತನಾಡುವುದು ಸರಿಯಲ್ಲ ಎಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೃದಯಾಘಾತದಿಂದಲೇ ಇನ್ಸ್‌ಪೆಕ್ಟರ್‌ ನಂದೀಶ್‌ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಅವರ ಸಾವಿನ ಬಳಿಕ ಏನೇನೋ ವಿಷಯಗಳಿಗೆ ತಳುಕು ಹಾಕಿ ಮಾತನಾಡುವುದು ಸರಿಯಲ್ಲ ಎಂದರು. ಮೃತ ಇನ್ಸ್‌ಪೆಕ್ಟರ್‌ ನಂದೀಶ್‌ ಅವರಿಗೆ ಚಿಕ್ಕ ಮಕ್ಕಳಿದ್ದಾರೆ. ಅವರ ಸಾವು ನನಗೂ ನೋವು ತಂದಿದೆ. 

ಸಚಿವ ಎಂ.ಟಿ.ಬಿ. ನಾಗರಾಜ್‌ ಯಾವ ಹಿನ್ನೆಲೆಯಲ್ಲಿ ನಂದೀಶ್‌ ಅವರ ಸಾವಿನ ಬಗ್ಗೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸಚಿವರನ್ನು ಕರೆದು ಮಾತನಾಡುತ್ತೇನೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು. ಕೆ.ಆರ್‌.ಪುರ ಠಾಣಾ ವ್ಯಾಪ್ತಿಯಲ್ಲಿ ಅವಧಿ ಮೀರಿ ಪಬ್‌ ವಹಿವಾಟು ನಡೆಸುತ್ತಿತ್ತು. ಆ ಪಾರ್ಟಿಯಲ್ಲಿ ಸುಮಾರು 20 ಜನ ಸೂಡಾನ್‌ ಪ್ರಜೆಗಳು ಹಾಗೂ 30ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಸಹ ಇದ್ದರು. ಈ ಮಾಹಿತಿ ಪಡೆದು ಆ ಪಬ್‌ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್‌ ನಂದೀಶ್‌ ಅವರನ್ನು ಆಯುಕ್ತರು ಅಮಾನತು ಮಾಡಿದ್ದರು. ಈ ಪ್ರಕರಣದ ಬಗ್ಗೆ ನನಗೂ ಆಯುಕ್ತರು ಮಾಹಿತಿ ನೀಡಿದ್ದರು. ಹೀಗಾಗಿ ನಂದೀಶ್‌ ಅವರ ಸಾವಿಗೂ ಅಮಾನತು ಕ್ರಮಕ್ಕೂ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕ್ರೀಡಾ ಸಾಧಕರು ಪೊಲೀಸ್‌ ಇಲಾಖೆಗೆ ಸೇರಲು ಶೇ.2 ಮೀಸಲಾತಿ

ನಾನು ಗೃಹ ಸಚಿವನಾದ ಕೂಡಲೇ ಬೆಂಗಳೂರಿನಲ್ಲಿ ಲೇಡಿಸ್‌ ಬಾರ್‌ಗಳು, ಕ್ಯಾಬರೆ, ಇಸ್ಪೀಟ್‌ ಕ್ಲಬ್‌ ಹಾಗೂ ಕ್ಯಾಸಿನೊ ಬಂದ್‌ ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೆ. ಆದರೆ ಇತ್ತೀಚೆಗೆ ಕೆಲ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕ್ಲಬ್‌ ಹಾಗೂ ಪಬ್‌ಗಳ ವಹಿವಾಟಿಗೆ ಅವಕಾಶ ನೀಡಲಾಗಿತ್ತು. ಈ ರೀತಿ ಕಾನೂನುಬಾಹಿರವಾಗಿ ಕ್ಲಬ್‌, ಬಾರ್‌ಗಳು ಹಾಗೂ ಪಬ್‌ಗಳಿಗೆ ಅವಕಾಶ ನೀಡದೆ ಬಂದ್‌ ಮಾಡುವಂತೆ ಅಧಿಕಾರಿಗಳಿಗೆ ಪೊಲೀಸ್‌ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಆ ರೀತಿ ವಹಿವಾಟು ನಡೆದಿದ್ದರೆ ಸ್ಥಳೀಯ ಠಾಣಾಧಿಕಾರಿಯನ್ನು ಹೊಣೆ ಮಾಡಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ ಕೆಲವು ಕಡೆ ಅಕ್ರಮಗಳು ನಡೆದಿದ್ದವು ಎಂದು ಸಚಿವರು ಹೇಳಿದರು.

ಆಮದು ಅಡಕೆ ಗುಣಮಟ್ಟಸರಿಯಿಲ್ಲ: ಆಮದು ಅಡಕೆಯ ಗುಣಮಟ್ಟಸರಿ ಇಲ್ಲ ಎಂಬುದನ್ನು ಅಧ್ಯಯನ ವರದಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ನಗರದ ಪರಿವಾರ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಡಕೆ ಆಮದು ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದರಿಂದ ಈ ಒಪ್ಪಂದ ಮುರಿಯಲು ಕೇಂದ್ರ ಸರ್ಕಾರಕ್ಕೂ ಕಷ್ಟವಾಗುತ್ತದೆ. ಆದರೆ, ಈ ಒಪ್ಪಂದದ ದೋಷಗಳ ಬಗ್ಗೆ ನಾವು ಮನವರಿಕೆ ಮಾಡಿಕೊಡಬೇಕಾಗಿದೆ. ಆಮದು ಮಾಡಿಕೊಳ್ಳುವ ಪ್ರತಿ ಕೆಜಿ ಕೆಂಪಡಿಕೆಗೆ .409, ಚಾಲಿ ಅಡಕೆಗೆ .360 ದರ ವಿಧಿಸಬೇಕು ಎಂದು ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡಲಾಗುತ್ತಿದೆ ಎಂದರು.

ಗ್ರಾಪಂ ಪ್ರತಿನಿಧಿಗಳ ಅಧಿಕಾರ ಮೊಟಕಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಗ್ರಾಮೀಣ ಭಾಗದಲ್ಲಿ ಅಡಕೆಗೆ ಬೆಲೆ ಬಂದ ಬಳಿಕ ಕ್ರಾಂತಿಕಾರಕ ಬೆಳವಣಿಗೆ ಆಗಿದೆ. ಬೆಳೆಗೆ ಬೆಲೆ ಬಂದಾಗ ಕೇವಲ ರೈತ ಮಾತ್ರನಲ್ಲ, ಸುತ್ತಲಿನ ಸಮುದಾಯವೆಲ್ಲ ಪ್ರಗತಿ ಆಗುತ್ತದೆ ಎಂದರು. ಅಡಕೆ ಕ್ಷೇತ್ರ ವಿಸ್ತರಣೆ ಆಗಿದೆ. ಆದರೆ, ದರ ಬಿದ್ದರೆ ನಮ್ಮ ಜೀವನ ಬೀಳುತ್ತದೆ. ಅಡಕೆಗೆ ಈಗಲೂ ತಲೆ ಮೇಲೆ ಕತ್ತಿ ಇದೆ. ಸುಪ್ರಿಂ ಕೋರ್ಚ್‌ಗೆ ಸಲ್ಲಿಸಿದ ಅಫಿಡವಿಟ್‌ ಇನ್ನೂ ಇದೆ. ಸ್ಥಳೀಯ ಅಡಕೆಗೆ ಔಷಧೀಯ ಗುಣ ಇದೆ ಎಂಬುದನ್ನು ಸಂಶೋಧನೆ ಮಾಡಲಾಗುತ್ತಿದ್ದು, ಎರಡು ತಿಂಗಳಲ್ಲಿ ಸಂಪೂರ್ಣ ವರದಿ ಬರಲಿದೆ. ಅದನ್ನು ಸುಪ್ರಿಂ ಕೋರ್ಚ್‌ಗೆ ಸಲ್ಲಿಸುತ್ತೇವೆ ಎಂದರು. ಸಹಕಾರಿ ಕ್ಷೇತ್ರ ನಮ್ಮ ಆರ್ಥಿಕ ಪರಿಸ್ಥಿತಿ ಗಟ್ಟಿಗೊಳಿಸಿದೆ. ಇಲ್ಲಿಯ ಪ್ರತಿ ಕುಟುಂಬಗಳ ಗೌರವವನ್ನು ಜಾಸ್ತಿಗೊಳಿಸುವ ಕಾರ್ಯವನ್ನು ಸಹಕಾರಿ ಸಂಘಗಳು ಮಾಡಿವೆ. ಶಾಸಕ, ಮಂತ್ರಿ ಪದವಿಗಿಂತ ಸಹಕಾರಿ ಕ್ಷೇತ್ರದಲ್ಲಿ ನಾನು ಸಲ್ಲಿಸುತ್ತಿರುವ ಸೇವೆ ನೆಮ್ಮದಿ ನೀಡಿದೆ ಎಂದರು.

Follow Us:
Download App:
  • android
  • ios