ಪೊಲೀಸರು ತಮ್ಮ ಖುಷಿಗಾಗಿ ಲಾಠಿ ಬೀಸುತ್ತಿಲ್ಲ: ವಕೀಲಗೆ ಬಿತ್ತು 1000 ದಂಡ
- ಲಾಕ್ಡೌನ್ ಜಾರಿ ವೇಳೆ ನಿಯಮ ಉಲ್ಲಂಘಿಸಿದವರ ವಿರುದ್ಧ ಲಾಠಿ ಚಾರ್ಜ್
- ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ
- ಹೈಕೋರ್ಟ್, ಅರ್ಜಿದಾರರಾದ ವಕೀಲ ಬಾಲಕೃಷ್ಣನ್ ಎಂಬುವರಿಗೆ ಒಂದು ಸಾವಿರ ರು.ಗಳ ದಂಡ
ಬೆಂಗಳೂರು (ಮೇ.20): ರಾಜ್ಯದಲ್ಲಿ ಲಾಕ್ಡೌನ್ ಜಾರಿ ವೇಳೆ ನಿಯಮ ಉಲ್ಲಂಘಿಸಿದವರ ವಿರುದ್ಧ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಾದ ವಕೀಲ ಬಾಲಕೃಷ್ಣನ್ ಎಂಬುವರಿಗೆ ಒಂದು ಸಾವಿರ ರು.ಗಳ ದಂಡ ವಿಧಿಸಿ ಆದೇಶಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಕೋವಿಡ್ ಟೆಸ್ಟ್ ವರದಿ ಒಂದೇ ದಿನದಲ್ಲಿ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ...
ಪೊಲೀಸರು ತಮ್ಮ ಖುಷಿಗಾಗಿ ಲಾಠಿ ಎತ್ತುವುದಿಲ್ಲ. ಕೆಲವು ಪೊಲೀಸರಿಗೆ ಸಕಾಲಕ್ಕೆ ನೀರು, ಊಟ ಸಿಗುತ್ತಿಲ್ಲ. ಆದರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಡೀ ಪ್ರಪಂಚ ಕೊರೋನಾ ಸೋಂಕಿನಿಂದ ನರಳುತ್ತಿದೆ. ಜೀವ ಭಯವಿದ್ದರೂ ಜನ ಮನೆಯಲ್ಲಿರಬೇಕೆಂದು ಪೊಲೀಸರು ಕರ್ತವ್ಯ ಮಾಡುತ್ತಿದ್ದಾರೆ. ಒಂದೆರಡು ಕಡೆ ಪೊಲೀಸರು ಚೌಕಟ್ಟು ಮೀರಿರಬಹುದು. ಅದಕ್ಕಾಗಿ ಎಲ್ಲ ಪೊಲೀಸರ ಮೇಲೆ ವಿಚಾರಣೆ ಸಾಧ್ಯವೇ ಎಂದು ನ್ಯಾಯಪೀಠ ಅರ್ಜಿದಾರನ್ನು ಪ್ರಶ್ನಿಸಿತು.
ಪೊಲೀಸರು ಬಾಯಿ ಮಾತಿನಲ್ಲಿ ಹೇಳಿದರೆ ಜನರು ಕೇಳುತ್ತಾರೆಯೇ? ನಮ್ಮ ಜನರು ಅಷ್ಟುನಾಗರಿಕರಾಗಿದ್ದಾರಾ? ಕೊರೋನಾದಿಂದ ಎಷ್ಟುಪೊಲೀಸರು ಮೃತಪಟ್ಟಿದ್ದಾರೆ ತಿಳಿದಿದೆಯೇ? ಎಂದ ನ್ಯಾಯಪೀಠ, ನಿಮ್ಮ ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆ ಒದಗಿಸಿಲ್ಲ. ಹಲ್ಲೆ ನಡೆಸಿದರೆ ಖಾಸಗಿ ದೂರು ದಾಖಲಿಸಬಹುದು ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿ, ಅನಗತ್ಯವಾಗಿ ಅರ್ಜಿ ಸಲ್ಲಿಸಿದ್ದಾರೆಂಬ ಕಾರಣಕ್ಕೆ ಒಂದು ಸಾವಿರ ದಂಡ ವಿಧಿಸಿತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona