Asianet Suvarna News Asianet Suvarna News

ಮೋದಿ ಜತೆಗಿನ ನೀತಿ ಆಯೋಗದ ಸಭೆಯಲ್ಲಿ ಬಿಎಸ್ ವೈ ಭಾಷಣದ ಮುಖ್ಯಾಂಶಗಳು

ಪ್ರಧಾನಮಂತ್ರಿ ನೇತೃತ್ವದಲ್ಲಿ ಇಂದು (ಶನಿವಾರ) ನೀತಿ ಆಯೋಗದ ಆಡಳಿತ ಮಂಡಳಿಯ ಸಭೆ ನಡೆಯಿತು.  ಇನ್ನು ನೀತಿ ಆಯೋಗದ ಸಭೆಯದಲ್ಲಿ ಸಿಎಂ ಬಿಎಸ್ ವೈ ಅವರ ಭಾಷಣದ ಮುಖ್ಯಾಂಶಗಳು ಈ ಕೆಳಗಿನಂತಿದೆ.

Here Is highlights Of CM BSY In NITI Aayog meeting With PM Modi rbj
Author
Bengaluru, First Published Feb 20, 2021, 6:00 PM IST

ಬೆಂಗಳೂರು, (ಫೆ.20): ಪ್ರಧಾನಮಂತ್ರಿ ನೇತೃತ್ವದಲ್ಲಿ ಇಂದು (ಶನಿವಾರ) ನೀತಿ ಆಯೋಗದ ಆಡಳಿತ ಮಂಡಳಿಯ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು.

 ಅಲ್ಲದೇ ಇವರ ಜೊತೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಹ ಭಾಗಹಿಸಿದ್ದರು. ಇನ್ನು ನೀತಿ ಆಯೋಗದ ಸಭೆಯದಲ್ಲಿ ಸಿಎಂ ಬಿಎಸ್ ವೈ ಅವರ ಭಾಷಣದ ಮುಖ್ಯಾಂಶಗಳು ಈ ಕೆಳಗಿನಂತಿದೆ.

ಸಿಎಂ ಭಾಷಣದ ಮುಖ್ಯಾಂಶಗಳು
Here Is highlights Of CM BSY In NITI Aayog meeting With PM Modi rbj

*ಕೋವಿಡ್ 19 ಸಾಂಕ್ರಾಮಿಕದ ಹೊರತಾಗಿಯೂ ರಾಜ್ಯದ ಹಣಕಾಸು ಪರಿಸ್ಥಿತಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002  ರಲ್ಲಿ ನಿಗದಿಪಡಿಸಿದ ಮಾನದಂಡದ ಮಿತಿಯಲ್ಲಿಯೇ ಇದೆ.

* ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳಲ್ಲಿ ಮುಖ್ಯವಾಗಿ ನೂತನ ಕೈಗಾರಿಕಾ ನೀತಿ 2020-25, ಅಫೀಡವಿಟ್ ಆಧಾರಿತ ಅನುಮೋದನಾ ವ್ಯವಸ್ಥೆ, ರಫ್ತು ಉತ್ತೇಜನಕ್ಕೆ ಕೈಗೊಂಡಿರುವ ಕ್ರಮಗಳು, ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಕುರಿತು ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದ ಮೊದಲಾದ ಉಪಕ್ರಮಗಳ ಕುರಿತು ವಿವರಿಸಲಾಯಿತು.

* ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ಕೈಗಾರಿಕೋದ್ಯಮಿಗಳ ಸಹಯೋಗದೊಂದಿಗೆ ತರಬೇತಿ ವ್ಯವಸ್ಥೆಯ ಉನ್ನತೀಕರಣದ ಮೂಲಕ ನೂತನ ತಂತ್ರಜ್ಞಾನ, ಕೌಶಲ್ಯಗಳ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

* ರಾಜ್ಯದಲ್ಲಿ ನಿರುದ್ಯೋಗ ದೇಶದಲ್ಲೇ ಅತ್ಯಂತ ಕನಿಷ್ಠ ಪ್ರಮಾಣ ಅಂದರೆ ಸುಮಾರು ಶೇ. 3.6 ರಷ್ಟಿದೆ.

* ಸಮಗ್ರ ಕೃಷಿ ಪದ್ಧತಿ ಅಳವಡಿಸುವ ಕುರಿತು ಕಾರ್ಯಪಡೆ ರಚಿಸಲಾಗಿದ್ದು, ಪೌಷ್ಟಿಕತೆಯ ಮಟ್ಟ ಹೆಚ್ಚಿಸಲು ಸಿರಿ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.

* ಆಯಾ ಪ್ರಾದೇಶಿಕ ಸಂಪನ್ಮೂಲಗಳಿಗೆ ಅನುಗುಣವಾಗಿ ರೈತರಿಗೆ ಬೆಳೆ ಬೆಳೆಯಲು ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ...

* ಸ್ಥಳೀಯ ಜಾನುವಾರು ತಳಿಗಳನ್ನು ಸಂರಕ್ಷಿಸಲು ಸಹ ಉದ್ದೇಶಿಸಲಾಗಿದೆ...

* ವೈಜ್ಞಾನಿಕ ಮಾರುಕಟ್ಟೆ ಮಾಹಿತಿ ಕೋಶವನ್ನು ಸ್ಥಾಪಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ಆದಾಯ ಆಧಾರಿತ ಸಿದ್ಧಾಂತದೆಡೆಗೆ ಗಮನ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ.

* ಆತ್ಮನಿರ್ಭರ್ ಯೋಜನೆಯಡಿ ಹೆಚ್ಚುವರಿಯಾಗಿ ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಆನ್ ಲೈನ್ ಮಾರುಕಟ್ಟೆ ಹಾಗೂ ಪೂರಕ ಮೂಲಸೌಕರ್ಯ ಒದಗಿಸಲು ಉದ್ದೇಶಿಸಲಾಗಿದೆ.

* ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಕೊರತೆ ಇರುವ 41 ತಾಲ್ಲೂಕುಗಳಲ್ಲಿ ಜಲ ಸಂರಕ್ಷಣೆ ಯೋಜನೆ ಅನುಷ್ಠಾನ

* ರಾಜ್ಯದ 114 ಹಿಂದುಳಿದ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಯನ್ನು ನೀತಿ ಆಯೋಗದ 49 ಮಹತ್ವಾಕಾಂಕ್ಷೆಯ ಮಾನದಂಡಗಳ ಅನ್ವಯ ಕೈಗೊಳ್ಳಲಾಗುತ್ತಿದೆ.

* ಹಿಂದುಳಿದ ತಾಲ್ಲೂಕುಗಳು ಹಾಗೂ ವಲಯಗಳ ಅಭಿವೃದ್ಧಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ನೆರವು ಪಡೆಯಲು ಆಕಾಂಕ್ಷಾ ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ.

* ಸೇವಾ ಸಿಂಧು ಯೋಜನೆಯಡಿ ಜನತೆಗೆ 750 ಸೇವೆಗಳನ್ನು ಕಾಗದರಹಿತವಾಗಿ ಒದಗಿಸಲಾಗುತ್ತಿದೆ.

* ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ ದಡಿ 3409 ಆಸ್ಪತ್ರೆಗಳು ನೋಂದಾಯಿಸಿಕೊಂಡಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು. ಆಯುಷ್ಮಾನ್ ಭಾರತ್ ಯೋಜನೆಯಡಿ 2753 ಕೋಟಿ ರೂ. ವೆಚ್ಚದಲ್ಲಿ 13 ಲಕ್ಷ ಜನರಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ.

* ರಾಜ್ಯದಲ್ಲಿ 4607 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಆತ್ಮನಿರ್ಭರ್ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಪರ್-ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ...

 * ಆಯುಷ್ ಪದ್ಧತಿಗೆ ಉತ್ತೇಜನ ನೀಡುವ ಸಮಗ್ರ ಸಾರ್ವಜನಿಕ ಆರೋಗ್ಯ ನೀತಿಯನ್ನು ಜಾರಿಗೆ ತರಲಾಗಿದೆ.

* ಪೌಷ್ಟಿಕತೆ ಕಡಿಮೆ ಇರುವ ರಾಜ್ಯದ 16 ಜಿಲ್ಲೆಗಳ 67 ತಾಲ್ಲೂಕುಗಳಲ್ಲಿ ಪೌಷ್ಟಿಕತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

 * ಈ ಎಲ್ಲ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು.

Follow Us:
Download App:
  • android
  • ios