Bengaluru News: ಹೆಬ್ಬಾಳ ಫ್ಲೈಓವರ್ ವಿಸ್ತರಣೆ ಕೊನೆಗೂ ಶುರು
ಕಳೆದ ಒಂದು ದಶಕದಿಂದ ನೆನಗುದಿಗೆ ಬಿದ್ದಿದ್ದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಯೋಜನೆ ಕಾಮಗಾರಿಗೆ ಭಾನುವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದಾರೆ.
ಬೆಂಗಳೂರು (ಜ.2) : ಕಳೆದ ಒಂದು ದಶಕದಿಂದ ನೆನಗುದಿಗೆ ಬಿದ್ದಿದ್ದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಯೋಜನೆ ಕಾಮಗಾರಿಗೆ ಭಾನುವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದಾರೆ. ಒಟ್ಟು .225 ಕೋಟಿ ವೆಚ್ಚದಲ್ಲಿ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆಗೆ ಬಿಡಿಎ ಯೋಜನೆ ರೂಪಿಸಿದ್ದು, ಮೊದಲ ಹಂತದಲ್ಲಿ .87 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿಮಾನ ನಿಲ್ದಾಣ ರಸ್ತೆಯಿಂದ ಬೆಂಗಳೂರು ಕಡೆಗೆ ಮೂರು ಲೈನ್ಗಳ ಮೇಲ್ಸೇತುವೆ ರಸ್ತೆ ಮತ್ತು ಯಶವಂತಪುರ-ಕೆಆರ್.ಪುರ ಮಾರ್ಗದಲ್ಲಿ ಮೂರು ಪಥದ ಅಂಡರ್ ಪಾಸ್ ನಿರ್ಮಾಣವಾಗಲಿದೆ.
ಈ ವೇಳೆ ಮಾತನಾಡಿದ ವಿಶ್ವನಾಥ್, ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆಗೆ ಒಟ್ಟು .225 ಕೋಟಿ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಅನುದಾನವನ್ನೂ ಮಂಜೂರು ಮಾಡಲಾಗಿದೆ. ಈಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ .87 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.
Bengaluru: ಹೆಬ್ಬಾಳ ಜಂಕ್ಷನ್ನಲ್ಲಿ ಇನ್ನೂ ಮೂರು ಲೇನ್ ಫ್ಲೈಓವರ್: ಕಾಮಗಾರಿಗೆ ವಿಶ್ವನಾಥ್ ಚಾಲನೆ
ಈ ವೇಳೆ ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಬೈರತಿ ಸುರೇಶ್, ಬಿಡಿಎ ಆಯುಕ್ತ ಕುಮಾರ ನಾಯಕ್, ಕಾರ್ಯದರ್ಶಿ ಶಾಂತರಾಜು, ಅಭಿಯಂತರ ಸದಸ್ಯ ಶಾಂತರಾಜಣ್ಣ, ಬಿಡಿಎ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಉಪಸ್ಥಿತರಿದ್ದರು.
12 ತಿಂಗಳಲ್ಲಿ ಕಾಮಗಾರಿ ಪೂರ್ಣ
ವಿಮಾನ ನಿಲ್ದಾಣ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಒಟ್ಟು 715 ಮೀಟರ್ ಉದ್ದದ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತದೆ. ವಿಮಾನ ನಿಲ್ದಾಣದ ಕಡೆಯಿಂದ ಆರಂಭದಲ್ಲಿ ಎರಡು ಪಥವಿದ್ದು, ರೈಲ್ವೆ ಹಳಿಯ ಮೇಲೆ ಕೆಆರ್ ಪುರದಿಂದ ಲೂಪ್ ಬಂದು ಸೇರಿಕೊಳ್ಳುತ್ತದೆ. ಈ ಸ್ಥಳದಿಂದ ಒಟ್ಟು ಮೂರು ಪಥಗಳು ನಿರ್ಮಾಣವಾಗಲಿವೆ. ಅದೇ ರೀತಿ ಯಶವಂತಪುರ ಕಡೆಯಿಂದ ಕೆಆರ್ ಪುರ ಕಡೆಗೆ ಮೂರು ಲೈನ್ನ ಅಂಡರ್ ಪಾಸ್ ನಿರ್ಮಾಣವಾಗಲಿದೆ ಎಂದು ವಿಶ್ವನಾಥ್ ತಿಳಿಸಿದರು.
ಈ ಹಿಂದೆ ಕಾಮಗಾರಿಗೆ 26 ತಿಂಗಳ ಕಾಲಮಿತಿಯನ್ನು ಹಾಕಲಾಗಿತ್ತು. ಆದರೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ತಿಂಗಳಲ್ಲಿ ಎರಡನೇ ಹಂತದ ಕಾಮಗಾರಿ
ಮೇಲ್ಸೇತುವೆ ವಿಸ್ತರಣೆ ಯೋಜನೆಗೆ ನಮ್ಮ ಮೆಟ್ರೋ ಕೈಜೋಡಿಸಿದ್ದು, ವಿಸ್ತರಣೆಗೆ ಸಂಬಂಧಿಸಿದಂತೆ ವಿನ್ಯಾಸವನ್ನು ಸಿದ್ಧಗೊಳಿಸುತ್ತಿದೆ. ಈ ವಿನ್ಯಾಸ ಸದ್ಯದಲ್ಲೇ ಬರಲಿದ್ದು, ಮುಂದಿನ ತಿಂಗಳಾಂತ್ಯದ ವೇಳೆಗೆ ಎರಡನೇ ಹಂತದ ಕಾಮಗಾರಿಗೂ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.
ಎರಡನೇ ಹಂತದಲ್ಲಿ ಪ್ರಮುಖವಾಗಿ ಕೆ.ಆರ್.ಪುರ, ನಾಗವಾರ ರಸ್ತೆಯನ್ನು ಸಂಪರ್ಕಿಸುವ ಈಗಿರುವ ಲೂಪ್ ಅನ್ನು ತೆಗೆದುಹಾಕಿ ಸಿಗ್ನಲ್ ಮುಕ್ತಗೊಳಿಸುವ ರೀತಿಯಲ್ಲಿ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಕೆಆರ್ ಪುರದಿಂದ ಬರುವ ವಾಹನಗಳು ತಡೆರಹಿತವಾಗಿ ವಿಮಾನನಿಲ್ದಾಣ ರಸ್ತೆಯತ್ತ ಸಾಗಬಹುದಾಗಿದೆ ಎಂದು ಹೇಳಿದರು.
ಸಂಚಾರ ಸಮಸ್ಯೆಗೆ ಶೀಘ್ರ ಪರಿಹಾರ: ಬೈರತಿ ಸುರೇಶ್
ಹೆಬ್ಬಾಳ ಮೇಲ್ಸೇತುವೆ ಅಗಲೀಕರಣದ .250 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗೆ ಚಾಲನೆ ನೀಡಿದ್ದು, ಈ ಭಾಗದ ಜನರ ಹಲವು ವರ್ಷಗಳ ಸಂಚಾರದಟ್ಟಣೆ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, .250 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಕ್ಕೆ ಸಹಕರಿಸಿದ ಯಲಹಂಕ ಶಾಸಕ ಹಾಗೂ ಬಿಡಿಎ ಅಧ್ಯಕ್ಷರಾದ ವಿಶ್ವನಾಥ್ ಅವರಿಗೆ ಹೆಬ್ಬಾಳ, ಬ್ಯಾಟರಾಯನಪುರ ಹಾಗೂ ಯಲಹಂಕ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜತೆಗೆ ಸರ್ಕಾರವು ಮೀನಾಮೇಷ ಎಣಿಸದೆ ಕೂಡಲೇ ಹಣ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
Bengaluru News: 2 ಸಮಾರಂಭಗಳಿಂದಾಗಿ ನಲುಗಿದ ಬಳ್ಳಾರಿ ರಸ್ತೆ!
ಮೊದಲ ಹಂತದ ಯೋಜನೆ ವಿವರ
- 715 ಮೀಟರ್ ಉದ್ದ: ವಿಮಾನ ನಿಲ್ದಾಣ ರಸ್ತೆ ಕಡೆಯಿಂದ ಬೆಂಗಳೂರು ಕಡೆಗೆ (ಎಡ ಭಾಗದಲ್ಲಿ) 3 ಲೈನ್ ಮೇಲ್ಸೇತುವೆ ನಿರ್ಮಾಣ
- 3 ಲೇನ್ ಅಂಡರ್ ಪಾಸ್: ಯಶವಂತಪುರ ರಸ್ತೆಯಿಂದ ಕೆಆರ್ ಪುರ ರಸ್ತೆವರೆಗೆ
- -12 ತಿಂಗಳು: ಕಾಮಗಾರಿ ಪೂರ್ಣಗೊಳಿಸಲು ಡೆಡ್ಲೈನ್
- 225 ಕೋಟಿ: ಹೆಬ್ಬಾಳ ಮೇಲ್ಸೇತುವೆಯ ಒಟ್ಟು ಯೋಜನಾ ವೆಚ್ಚ