ಎಲ್ಲವನ್ನೂ ಸರ್ಕಾರ ಮಾಡಬೇಕೆಂದು ಕೂರುವ ಸಮಯ ಇದಲ್ಲ ಎಂದು ಹೇಳುತ್ತಾ ಕೊರೋನಾ ಸೋಂಕಿನ ಸಂದರ್ಭದಲ್ಲಿ ಜೆಡಿಎಸ್‌ ಪಕ್ಷದ ಶಾಸಕರು, ಕಾರ್ಯಕರ್ತರು ಸೇರಿದಂತೆ ಎಲ್ಲರೂ ಜನಸೇವೆಯಲ್ಲಿ ತೊಡಗಿರುವುದಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿನಂದನೆ ಸಲ್ಲಿಸಿದ್ದರು. ಇದೀಗ  ಅವರೇ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಬೆಂಗಳೂರು, (ಏ.11): ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕೊರೋನಾ ವೈರಸ್ ವಿರುದ್ಧ ಸಮರಕ್ಕೆ ಕೈಜೋಡಿಸಿದ್ದು, 3 ಸರ್ಕಾರಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.

ಕೊರೋನಾ ವೈರಸ್ ಸೋಂಕು ನಿಯಂತ್ರಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಿರುವ ದೊಡ್ಡಗೌಡ್ರು, ಕರ್ನಾಟಕ ಸರ್ಕಾರ, ಪ್ರಧಾನಿ ಹಾಗೂ ಕೇರಳ ಸಿಎಂ ಪರಿಹಾರ ಕೊರೋನಾ ನಿಧಿಗೆ ಆರ್ಥಿಕ ನೆರವು ನೀಡಿದ್ದಾರೆ.

ಲಾಕ್ ಡೌನ್, ಸೀಲ್ ಡೌನ್ ಇತ್ಯಾದಿ : ಯಡಿಯೂರಪ್ಪ-ಮೋದಿ ನಡುವಿನ ಮಾತುಕತೆ

ತಮ್ಮ ಪೆನ್ಶನ್ ಹಣದಿಂದ ದೇವೇಗೌಡ ಅವರು PM ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ನೀಡಿದ್ದಾರೆ. ಇದರ ಜೊತೆಗೆ ಕರ್ನಾಟಕ ಮತ್ತು ಕೇರಳ ಸಿಎಂ ಪರಿಹಾರ ನಿಧಿಗೆ ತಲಾ 1 ಲಕ್ಷ ರೂ. ಸೇರಿದಂತೆ ಒಟ್ಟು 3 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅವರೇ ಟ್ವಿಟ್ಟರ್‌ ಮೂಲಕ ಮಾಹಿತಿ ತಿಳಿಸಿದ್ದಾರೆ.

Scroll to load tweet…

ಕೊರೋನಾ ಲಾಕ್‌ಡೌನ್ ನಡುವೆ ರೈತರು ಹಾಗೂ ಬಡವರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಿ ಎಂದು ಪತ್ರದ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪಗೆ ಸಲಹೆ-ಸೂಚನೆಗಳನ್ನು ನೀಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.