ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೆಪಿಎಸ್‌ಸಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ 'ಬಾಯಿ ಮುಚ್ಚಿಕೊಳ್ಳಿ' ಎಂದು ಸೂಚಿಸಿರುವುದರಿಂದ ಆ ಬಗ್ಗೆ ಮಾತನಾಡುವುದಿಲ್ಲ ಎಂದರು.

ಹಾವೇರಿ, (ನ. 15): ಕೆಪಿಎಸ್‌ಸಿ ಶಾಲೆಗಳು ಉತ್ತಮವಾಗಿವೆ. ಮಕ್ಕಳು ಒಂದೇ ಶಾಲೆಯಲ್ಲಿ 14 ವರ್ಷಗಳ ಕಾಲ ಕಲಿಯುತ್ತಾರೆ. ನಾನು ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ. ಕೆಲವರು ತಲೆ ಹರಟೆ ಮಾಡಿ ಶಾಲೆಗಳನ್ನು ಮುಚ್ಚುತ್ತಾರೆ ಎಂದು ಹೇಳುತ್ತಿದ್ದಾರೆ ಎಂದು ಸಚಿವರು ಖಂಡಿಸಿದ್ದಾರೆ.

ಇಂದು ರಾಣೆಬೆನ್ನೂರಿನಲ್ಲಿ ನಡೆದ ಸಾರ್ವಜನಿಕ ಸಭೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ನಾವು 6,000 ಕೆಪಿಎಸ್‌ಸಿ ಶಾಲೆಗಳನ್ನು ಆರಂಭಿಸುವುದಾಗಿ ಹೇಳಿದ್ದೆವು ಮತ್ತು ಅದನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಾಲೆಗಳಿಂದ ಸರ್ಕಾರಿ ಶಾಲೆಗಳು ಮಾತ್ರವಲ್ಲ, ಇತರ ಶಾಲೆಗಳ ವಿದ್ಯಾರ್ಥಿಗಳೂ ಆಕರ್ಷಿತರಾಗುತ್ತಾರೆ. ಎಲ್.ಕೆ.ಜಿ.ಯಿಂದ 12ನೇ ತರಗತಿ ವರೆಗೆ ಉಚಿತವಾಗಿ ಸಂಪೂರ್ಣ ಶಿಕ್ಷಣ ನೀಡುವ ಉದ್ದೇಶವಿದೆ ಎಂದರು.

ಬಿಹಾರ್ ಚುನಾವಣೆ ಮತ್ತು ರಾಜ್ಯ ರಾಜಕೀಯದಲ್ಲಿ ಬದಲಾವಣೆ?

ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಿಹಾರ ಚುನಾವಣೆಯಲ್ಲಿ ವಿಭಿನ್ನ ತೀರ್ಮಾನಗಳು ಬಂದಿವೆ. ಇದನ್ನು ವಿವಿಧ ಕೋನಗಳಿಂದ ನೋಡಬೇಕು ಎಂದರು. ಇದೇ ವೇಳೆ ರಾಜ್ಯ ನಾಯಕತ್ವ ಬದಲಾವಣೆಯ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,' ಹೈಕಮಾಂಡ್ ನಮಗೆ 'ಬಾಯ್ ಮುಚ್ಚಿಕೊಳ್ಳಿ' ಎಂದು ಸೂಚಿಸಿದ್ದಾರೆ. ನಾವು ಹೈಕಮಾಂಡ್ ಹೇಳಿದಂತೆ ಮುಂದುವರಿಯುತ್ತೇವೆ. ಆ ಬಗ್ಗೆ ಮಾತನಾಡುವುದಿಲ್ಲ. ಸಿಎಂ ಅವರು ನಮ್ಮ ಬೇಡಿಕೆಗಳಿಗೆ ತಕ್ಕಂತೆ ಅನುದಾನ ನೀಡಿದ್ದಾರೆ. ಕರ್ನಾಟಕಕ್ಕೆ ಬಿಹಾರ ಚುನಾವಣೆಯಿಂದ ಯಾವುದೇ ಪಟ್ಟ ಕಟ್ಟಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸೋತರೆ ಮೋದಿ ಅವರ ಸೋಲು ಎಂದು ಹೇಳಲು ಆಗುತ್ತಾ ಎಂದು ಪ್ರಶ್ನಿಸಿದರು.

ಮತಗಳ್ಳತನ ಆಗಿದ್ರೆ ಕಳ್ಳರನ್ನು ಹಿಡಿಯಿರಿ:

ರಾಜ್ಯದಲ್ಲಿ ನಡೆಯುತ್ತಿರುವ ಮತಗಳ್ಳತನದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ಬಿಹಾರದಲ್ಲಿ ಮತಗಳ್ಳತನ ಆಗಿದ್ದರೆ, ಕಳ್ಳರನ್ನು ಹಿಡಿಯಬೇಕು. ನಾವು ಅಧಿಕಾರಕ್ಕೆ ಬಂದರೆ ಕಳ್ಳರನ್ನು ಹಿಡಿಯುತ್ತೇವೆ; ಇಲ್ಲದಿದ್ದರೂ ಹೋರಾಟ ಮುಂದುವರಿಸುತ್ತೇವೆ ಎಂದರು.