ದ್ವೇಷದ ರಾಜಕಾರಣದಿಂದ ಹಾಸನ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಣ ಬಿಡುಗಡೆ ಮಾಡಿದರೂ ಜಿಲ್ಲಾಧಿಕಾರಿಗಳು ಹಣವನ್ನು ಖಜಾನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹಾಸನ (ಫೆ.25): ದ್ವೇಷದ ರಾಜಕಾರಣಕ್ಕೆ ಜಿಲ್ಲೆಯ ಅಭಿವೃದ್ಧಿ ಕೆಲಸ ಸ್ಥಗಿತವಾಗಿದ್ದು, ಸರ್ಕಾರ ಹಣ ಬಿಡುಗಡೆ ಮಾಡಿದರೂ ಜಿಲ್ಲಾಧಿಕಾರಿ ಹಣ ಬಿಡುಗಡೆ ಮಾಡದೇ ಖಜಾನೆಯಲ್ಲಿಟ್ಟುಕೊಂಡಿರುವುದಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರ ಸಂಪೂರ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇದರಿಂದಲೇ ಹಾಸನ ಜಿಲ್ಲೆಯಲ್ಲಿ ಕಾಮಗಾರಿಗಳೆಲ್ಲಾ ನಿಂತುಹೋಗಿದೆ. ಅದಕ್ಕೆ ಅವಕಾಶ ಕೊಡಬೇಡಿ. ಹಾಸನ ವಿಶ್ವವಿದ್ಯಾಲಯ ಮುಚ್ಚುವ ಬದಲು ಅದಕ್ಕೆ ಬೇಕಾದ ಸೌಲಭ್ಯ ಒದಗಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಲೂಟಿ ನಡೆಯುತ್ತಿದ್ದು, ಹಿಮ್ಸ್ ನಿರ್ದೇಶಕರ ಮಾತು ನಡೆಯುತ್ತಿಲ್ಲ. ಹಾಸನ ಕೃಷಿ ಕಾಲೇಜನ್ನು ಮಂಡ್ಯ ಯುನಿವರ್ಸಿಟಿಗೆ ಸೇರಿಸುತ್ತಿದ್ದು, ಕೃಷಿ ಕಾಲೇಜು ಬೆಂಗಳೂರು ಯುನಿವರ್ಸಿಟಿ ವ್ಯಾಪ್ತಿಯಲ್ಲೇ ಇರಲಿ. ಈ ಎಲ್ಲಾ ವಿಚಾರ ಇಟ್ಟುಕೊಂಡು ಮಂದೆ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ. ಜೆಡಿಎಸ್‌ನ ನಾಲ್ಕು ಶಾಸಕರು ಒಟ್ಟಾಗಿ ಹೋರಾಟ ಮಾಡುತ್ತೇವೆ. ಈ ಹೋರಾಟಕ್ಕೆ ಬಿಜೆಪಿ ಶಾಸಕರ ಸಹಕಾರ ಕೋರುತ್ತೇವೆ ಎಂದರು.

ಸರ್ಕಾರವು 12 ಕೋಟಿ ಮಳೆಹಾನಿಗೆ ಹಣ ಬಿಡುಗಡೆ ಮಾಡಿದೆ. ಡೀಸಿ ಅದನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ಗುಂಡಿ ಮುಚ್ಚಲು ಡಿಸಿ ಹಣ ಕೊಡುತ್ತಿಲ್ಲ. ಬಿಡುಗಡೆಯಾಗಿರುವ ಹಣವನ್ನು ಖಜಾನೆಯಲ್ಲಿ ಇಟ್ಟುಕೊಂಡಿದ್ದು, ಡಿಸಿಯವರು ಹಣ್ಣು, ಕಾಯಿ ಒಡೆದು ದೀಪ ಹಚ್ಚಿ ಪೂಜೆ ಮಾಡಲಿ ಎಂದು ವ್ಯಂಗ್ಯವಾಡಿದ ಅವರು, ಇದೇ ರೀತಿ ಮುಂದುವರಿದರೆ ಡಿಸಿ ಕಚೇರಿ ಎದುರು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಅಧಿಕಾರಿಗಳು ಲೂಟಿ ಮಾಡಲು ಜಿ.ಪಂ. ಚುನಾವಣೆ ಮುಂದೂಡುತ್ತಿದ್ದಾರೆ ಎಂದರು.

ಇದನ್ನೂ ಓದಿ:  97 ಎಕರೆ ಭೂಮಿ ಕಬಳಿಕೆ ಯತ್ನ, ಪ್ರಭಾವಿ ರಾಜಕಾರಣಿಗಳ ಕೈವಾಡ: ಎಚ್. ಡಿ. ರೇವಣ್ಣ

ಕಾಂಗ್ರೆಸ್ ಸರ್ಕಾರದ್ದು ಮುಚ್ಚುವ ಕೆಲಸವೇ ಹೊರತು ಅಭಿವೃದ್ಧಿ ಮಾಡುವುದಿಲ್ಲ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಅಧಿಕಾರಿಗಳೇ ಸೆಕೆಂಡ್ಸ್ ಮಾರಿಸುತ್ತಿದ್ದಾರೆ. ಅಬಕಾರಿ ಇಲಾಖೆ ಇದುವರೆಗೂ ಒಂದು ಪ್ರಕರಣ ದಾಖಲಿಸಿಲ್ಲ. ಪೆಟ್ಟಿಗೆ ಅಂಗಡಿಗಳಲ್ಲಿ ಯಾವ ಬ್ರಾಂಡ್ ಬೇಕಾದರೂ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡಲಿ ಆದರೇ ಈ ಸರ್ಕಾರದ್ದು ಮುಚ್ಚುವುದೇ ಹೊರತು ಯಾವ ಅಭಿವೃದ್ಧಿ ಮಾಡುವುದಿಲ್ಲ. ಮುಂದೆ ನಮಗೆ ಶಕ್ತಿ ಕೊಟ್ಟಾಗ ಜನರ ಎಲ್ಲಾ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಎಸ್‌ವೈ ಸಿಎಂ ಆಗುವುದನ್ನು ತಡೆದಿದ್ದೇ ರೇವಣ್ಣ, ಡಿಸಿಎಂ ಹುದ್ದೆ ಈಡೇರಲಿಲ್ಲ ಎಂದು ಮೋಸ: ಜಿಟಿಡಿ

ಸಚಿವ ಚೆಲುವರಾಯಸ್ವಾಮಿಗೆ ತಿರುಗೇಟು:

ಮಂಡ್ಯ ಜಿಲ್ಲೆಗೆ ಏನು ಬೇಕು ಚೆಲುವರಾಯಸ್ವಾಮಿ ಮಾಡಲಿ. ಮಂಡ್ಯ ಜನರ ಬಗ್ಗೆ ನನಗೆ ವಿಶ್ವಾಸವಿದೆ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ನನ್ನ ಕೊಡುಗೆ ಏನಿದೆ ಎಂಬುದನ್ನು ನೋಡಲಿ. ಮಂಡ್ಯ ಜಿಲ್ಲೆ ನಮಗೆ ರಾಜಕೀಯವಾಗಿ ಶಕ್ತಿ ಕೊಟ್ಟಿದ್ದಾರೆ. ಮಂಡ್ಯಕ್ಕೆ ಏನು ಮಾಡಿದ್ದೇನೆ ಎಂದು ಚರ್ಚೆಗೆ ಬರಲಿ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿಗೆ ಎಚ್.ಡಿ. ರೇವಣ್ಣ ತಿರುಗೇಟು ನೀಡಿದರು.