ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟವರಲ್ಲಿ ಹೆಚ್ಚಿನವರು ಆಟೋ ಮತ್ತು ಕ್ಯಾಬ್ ಚಾಲಕರು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ವಾಯು ಮಾಲಿನ್ಯ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಶಂಕಿಸಿದ್ದಾರೆ. ಈ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಹಾಸನ (ಜು.10): ಹಾಸನ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಹೃದಯಾಘಾತ ಸಾವು ಪ್ರಕರಣಗಳ ಕುರಿತ ತಜ್ಞರ ಅಧ್ಯಯನ ವರದಿಯಲ್ಲಿ ಹೊಸ ಆತಂಕದ ಸಂಗತಿಯೊಂದು ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಮೃತಪಟ್ಟವರ ಪೈಕಿ 33% ಮಂದಿ ಆಟೋ ಹಾಗೂ ಕ್ಯಾಬ್ ಚಾಲಕರು ಎಂಬುದು ತಿಳಿದುಬಂದಿದೆ.
ಹಾಸನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳ ಕುರಿತು ಅಧ್ಯಯನ ಮಾಡಲು ಸರ್ಕಾರದಿಂದ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿತ್ತು.
ಅಧ್ಯಯನಕ್ಕೆ ಒಳಪಡಿಸಿದ 24 ಹೃದಯಾಘಾತ ಪೀಡಿತ ಪ್ರಕರಣಗಳಲ್ಲಿ, ಆಟೋ ಮತ್ತು ಕ್ಯಾಬ್ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎಂಬುದು ಈ ವರದಿಯ ತೀರ್ಮಾನವಾಗಿದೆ. ಇದರಲ್ಲಿ 7 ಜನರು ವಿಶೇಷವಾಗಿ ವಾಯು ಮಾಲಿನ್ಯದಿಂದ ತೀವ್ರ ಹೃದಯ ಸಮಸ್ಯೆಗಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆತಂಕದ ಅಂಶವೊಂದು ತಜ್ಞರ ಗಮನ ಸೆಳೆದಿದೆ.
ವೃತ್ತಿಯ ಗತಿಯೇ ಜೀವಕ್ಕೆ ಸಂಚು?
ರಸ್ತೆಮೇಲೆ ದಿನದ ಉಷ್ಣತೆಯಲ್ಲಿ, ತೀವ್ರ ಧೂಳು, ಕಾರ್ಖಾನೆಗಳಿಂದ ಹೊರಸೂಸುವ ಕಾರ್ಬನ್ ಮಿಶ್ರಿತ ಗಾಳಿ ಸೇವನೆ ಮಾಡುವ ಚಾಲಕರಿಗೆ, ಅನೇಕ ವರ್ಷಗಳಿಂದ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆಯೆಂಬುದನ್ನು ತಜ್ಞರು ಈಗ ಬಹಿರಂಗಪಡಿಸಿದ್ದಾರೆ. ಹಾಸನದ ವೈದ್ಯಕೀಯ ಹಾಗೂ ಹೃದಯ ತಜ್ಞರ ತಂಡವು ಕಳೆದ 2 ತಿಂಗಳ ಕಾಲ ವಿವಿಧ ಆಸ್ಪತ್ರೆಗಳ ಹೃದಯಾಘಾತ ದಾಖಲೆಗಳನ್ನು ಪರಿಶೀಲಿಸಿ ಈ ಅಧ್ಯಯನವನ್ನು ರೂಪಿಸಿದ್ದು, ಅದರ ಫಲಿತಾಂಶ ಸಕಾಲಿಕ ಎಚ್ಚರಿಕೆಗೆ ಕಾರಣವಾಗುತ್ತಿದೆ.
ತಕ್ಷಣ ಕ್ರಮಕ್ಕೆ ತಜ್ಞರ ಸಲಹೆ:
- ಆಟೋ/ಕ್ಯಾಬ್ ಚಾಲಕರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಡ್ಡಾಯವಾಗಲಿ
- ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ನಗರಗಳಲ್ಲಿ ಕಟ್ಟುನಿಟ್ಟಿನ ಕ್ರಮ
- ಶ್ರಮಿಕರಿಗೆ ಆರೋಗ್ಯ ಶಿಕ್ಷಣ ಮತ್ತು ಮೊದಲ ಹಂತದ ಚಿಕಿತ್ಸೆ ಕಲಿಕೆ
- ಚಾಲಕರಿಗೆ ಬಿಮಾ ಮತ್ತು ಆರೋಗ್ಯ ಯೋಜನೆಗಳಲ್ಲಿ ವಿಶೇಷ ಪ್ರಾಧಾನ್ಯತೆ
ಹೃದಯಾಘಾತದಿಂದ ಸಾವಿಗೀಡಾಗುತ್ತಿರುವವರ ಪೈಕಿ ತೀವ್ರ ಪ್ರಮಾಣದಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರು ಇರುವುದರಿಂದ, ಈ ವೃತ್ತಿಗೆ ಸಂಬಂಧಿಸಿದ ಆರೋಗ್ಯ ಹಾನಿಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಉಂಟಾಗಿದೆ. ಸರ್ಕಾರ, ಆರೋಗ್ಯ ಇಲಾಖೆ ಮತ್ತು ಸಾರಿಗೆ ಸಂಘಟನೆಗಳು ಒಟ್ಟಾಗಿ ಸಮಗ್ರ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
