ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರ ಪತ್ನಿ ಮೈಮೂನಾ (57) ಶನಿವಾರ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಂತ್ಯಕ್ರಿಯೆ ಭಾನುವಾರ ಹರೇಕಳದಲ್ಲಿ ನಡೆಯಲಿದೆ.

ಮಂಗಳೂರು (ಮೇ.11): ಕನ್ನಡಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ ಮತ್ತು ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಸಾಮಾಜಿಕ ಕಾರ್ಯಕರ್ತ ಹರೇಕಳ ಹಾಜಬ್ಬ ಅವರಿಗೆ ತೀವ್ರ ದುಃಖದ ಸಂಗತಿಯೊಂದು ಎದುರಾಗಿದೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪತ್ನಿ ಮೈಮೂನಾ (57) ಅವರು ಶನಿವಾರ ಸಂಜೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಹರೇಕಳ ಹಾಜಬ್ಬ ಅವರು ತಮ್ಮ ಜೀವನವನ್ನು ಶಿಕ್ಷಣದ ಒಳಿತಿಗಾಗಿ ಮೀಸಲಿಟ್ಟವರು. ಕೂಲಿಯಾಳಾಗಿ ಕೆಲಸ ಮಾಡುತ್ತಿದ್ದರೂ, ತಮ್ಮ ಊರಿನ ಮಕ್ಕಳಿಗೆ ಶಿಕ್ಷಣದ ಬೆಳಕು ನೀಡುವ ಸಲುವಾಗಿ ಸ್ವಂತ ಖರ್ಚಿನಲ್ಲಿ ಶಾಲೆ ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದವರು. ಈ ಕಾರ್ಯಕ್ಕಾಗಿ ಅವರಿಗೆ ಪದ್ಮಶ್ರೀ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಈ ಕಷ್ಟದ ಕಾಲದಲ್ಲಿ ಮೈಮೂನಾ ಅವರು ಹಾಜಬ್ಬರಿಗೆ ದೊಡ್ಡ ಬೆಂಬಲವಾಗಿದ್ದರು. ಅವರ ಜೀವನ ಸಂಗಾತಿಯ ಅಗಲಿಕೆಯು ಹಾಜಬ್ಬ ಅವರಿಗೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಪತಿ ಹಾಜಬ್ಬ, ಇಬ್ಬರು ಪುತ್ರಿಯತು ಹಾಗೂ ಓರ್ವ ಪುತ್ರ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಇದನ್ನೂ ಓದಿ: ಉಳ್ಳಾಲ: ಅಕ್ಷರ ಸಂತಗೆ ಗೌರವ, ಗ್ರಾ.ಪಂ. ಕಟ್ಟಡದಲ್ಲಿ ಹಾಜಬ್ಬರ ಚಿತ್ರ ರಚನೆ

ಮೈಮೂನಾ ಅವರ ಅಂತಿಮ ಸಂಸ್ಕಾರವು ಭಾನುವಾರ ಹರೇಕಳದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಸ್ಥಳೀಯ ಸಮುದಾಯ, ಸಾಮಾಜಿಕ ಕಾರ್ಯಕರ್ತರು ಮತ್ತು ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಜಬ್ಬ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.