ವಿಮರ್ಶಕ ಡಾ.ಆಮೂರಗೆ 7 ಲಕ್ಷ ರು. ನೃಪತುಂಗ ಪ್ರಶಸ್ತಿ
ಸಮಗ್ರ ಸಾಹಿತ್ಯ ಕೃಷಿ ನಡೆಸಿರುವ ಹಿರಿಯ ಸಾಹಿತಿ ಡಾ.ಜಿ.ಎಸ್. ಆಮೂರ ಅವರನ್ನು ಸರ್ವಾನುಮತದಿಂದ ನೃಪತುಂಗ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಬೆಂಗಳೂರು (ಸೆ.10): 2020ನೇ ಸಾಲಿನ ಬಿಎಂಟಿಸಿಯ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಖ್ಯಾತ ವಿಮರ್ಶಕ ಡಾ.ಜಿ.ಎಸ್.ಆಮೂರ ಭಾಜನರಾಗಿದ್ದಾರೆ. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸಮಗ್ರ ಸಾಹಿತ್ಯ ಕೃಷಿ ನಡೆಸಿರುವ ಹಿರಿಯ ಸಾಹಿತಿ ಡಾ.ಜಿ.ಎಸ್. ಆಮೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಪ್ರಶಸ್ತಿಯು 7 ಲಕ್ಷದ 1ರು. ನಗದು, ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದೂವರೆ ಕೋಟಿ ರು. ದತ್ತಿನಿಧಿಯನ್ನು ಸ್ಥಾಪಿಸಿದೆ. ಅದರಿಂದ ಬರುವ ಬಡ್ಡಿ ಹಣದಲ್ಲಿ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ನೀಡಲಾಗುತ್ತದೆ.
ಮಯೂರವರ್ಮ ಸಾಹಿತ್ಯ ಪ್ರಶಸ್ತಿ:
45 ವರ್ಷದೊಳಗಿನ ಯುವ ಸಾಹಿತಿಗಳಿಗೆ ನೀಡುವ ‘ಮಯೂರವರ್ಮ ಸಾಹಿತ್ಯ ಪ್ರಶಸ್ತಿ’ಗೆ ಯುವ ಕವಿಗಳಾದ ಡಾ. ಧನಂಜಯ ಕುಂಬ್ಳೆ, ಅಕ್ಷತಾ ಕೃಷ್ಣಮೂರ್ತಿ, ಡಾ. ಸಂತೋಷ ಹಾನಗಲ್ಲ, ವನಿತಾ ಎನ್. ಶೇಟ್ ಹಾಗೂ ಆರ್. ಪ್ರಭಾಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರು. ನಗದು, ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ.