ಕರ್ನಾಟಕದ ಎಲ್ಲ ಆ್ಯಂಬುಲೆನ್ಸ್ಗಳಿಗೂ ಜಿಪಿಎಸ್: ಹೈಕೋರ್ಟ್ ನಿರ್ದೇಶನ
ಆಂಬ್ಯುಲೆನ್ಸ್ಗಳು ತಡೆರಹಿತವಾಗಿ ಸಂಚರಿಸಲು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಂಬ್ಯುಲೆನ್ಸ್ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ನಿರ್ದೇಶಿಸಿದ ಹೈಕೋರ್ಟ್
ಬೆಂಗಳೂರು(ನ.09): ಆಂಬ್ಯುಲೆನ್ಸ್ಗಳು ತಡೆರಹಿತವಾಗಿ ಸಂಚರಿಸಲು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಂಬ್ಯುಲೆನ್ಸ್ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ರಾಜ್ಯದಲ್ಲಿರುವ ಎಲ್ಲ ಆ್ಯಂಬುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ‘ಭಾರತ್ ಪುನರುತ್ಥಾನ ಟ್ರಸ್ಟ್’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಸೂಚನೆ ನೀಡಿದೆ.
ಆ್ಯಂಬುಲೆನ್ಸ್ಗಳ ತಯಾರಿಕೆ ವೇಳೆಯೇ ಜಿಪಿಎಸ್ ಅಳವಡಿಸುವಂತೆ ರಾಜ್ಯದಲ್ಲಿರುವ ಆ್ಯಂಬುಲೆನ್ಸ್ ತಯಾರಿಕರಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸಲಹೆ ನೀಡಿದೆ. ರಾಜ್ಯದಲ್ಲಿರುವ ಆಂಬ್ಯುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸಿರುವ ಅಥವಾ ಇಲ್ಲದಿರುವ ಬಗ್ಗೆ ಪರಿಶೀಲಿಸಿ ಮಾಸಿಕ ಪ್ರಗತಿ ವರದಿ ಸಲ್ಲಿಸುವಂತೆ ಸಾರಿಗೆ ಮತ್ತು ಪ್ರಾದೇಶಿಕ ರಸ್ತೆ ಸುರಕ್ಷಿತ ಅಧಿಕಾರಿಗಳಿಗೆ 2020ರ ಮಾ.4ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರಿ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದರು.
ಕರ್ನಾಟಕದಲ್ಲಿ 262 ಹೊಸ 108 ಆಂಬ್ಯುಲೆನ್ಸ್ ಖರೀದಿಗೆ ಒಪ್ಪಿಗೆ
ಅದನ್ನು ಪರಿಗಣಿಸಿದ ನ್ಯಾಯಪೀಠ, ಸುತ್ತೋಲೆ ಅನುಸಾರ ಇದುವರೆಗೆ ಎಷ್ಟು ವರದಿಗಳನ್ನು ಸಲ್ಲಿಸಲಾಗಿದೆ, ವರದಿ ಸಲ್ಲಿಕೆಯಾಗಿದ್ದರೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆಯೇ, ದತ್ತಾಂಶ ನಿರ್ವಹಣೆ ಮಾಡಿದ್ದರೆ ಮಾನ್ಯೂಯೆಲ್ ಅಥವಾ ಡಿಜಿಟಲ್ ಆಗಿ ಸಂಗ್ರಹಿಸಲಾಗಿದೆಯೇ, ಆ ದತ್ತಾಂಶಗಳನ್ನು ಪರಿಶೀಲಿಸಿದಾಗ ಯಾವುದಾದರೂ ಆ್ಯಂಬುಲೆನ್ಸ್ಗಳು ಜಿಪಿಎಸ್ ಅಳವಡಿಸದಿರುವುದು ಕಂಡು ಬಂದಿದ್ದರೆ, ಅವುಗಳ ವಿರುದ್ಧ ಆಯುಕ್ತರು ಯಾವ ಕ್ರಮ ಕೈಗೊಂಡಿದ್ದಾರೆ, ಖಾಸಗಿ ಅಥವಾ ಸರ್ಕಾರಿ ಆ್ಯಂಬುಲೆನ್ಸ್ ನಿರ್ವಹಣೆದಾರರಿಗೆ ಏನಾದರೂ ಸಂವಹನ ಪತ್ರ ಕಳುಹಿಸಲಾಗಿದೆಯೇ ಎಂದು ಸರ್ಕಾರ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿ ಡಿ.2ಕ್ಕೆ ಅರ್ಜಿ ವಿಚಾರಣೆ ಮುಂದೂಡಿತು.
ಆ್ಯಂಬುಲೆನ್ಸ್ಗಳ ನೋಂದಣಿ ವೇಳೆಯೇ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡುವ ಸಂಬಂಧ ನಿಗದಿತ ನಿಯಮಗಳಿಗೆ ತಿದ್ದುಪಡಿ ತರಲಾಗಿದೆಯೇ ಅಥವಾ ಈ ಕುರಿತು ಸಕ್ಷಮ ಸಾರಿಗೆ ಪ್ರಾಧಿಕಾರಗಳು ಯಾವುದಾದರೂ ನಿರ್ದಿಷ್ಟಸುತ್ತೋಲೆ ಹೊರಡಿಸಿವೆಯೇ ಎಂಬ ಬಗ್ಗೆ ಮೂರು ವಾರದಲ್ಲಿ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.