Asianet Suvarna News Asianet Suvarna News

ಕನ್ನಡ ಕಲಿಯುತ್ತಿದ್ದಾರೆ ಗೌರ್ನರ್‌ ಗೆಹ್ಲೋತ್‌!

  • ಕನ್ನಡ ಕಲಿಯುತ್ತಿದ್ದಾರೆ ಗೌರ್ನರ್‌ ಗೆಹ್ಲೋತ್‌!
  • ಶಿಕ್ಷಕ ಜ್ಞಾನಮೂರ್ತಿ ಅವರಿಂದ ಕನ್ನಡ ಭಾಷಾಭ್ಯಾಸ
  • ರಾಜ್ಯಪಾಲರಾದ ಎರಡೇ ತಿಂಗಳಲ್ಲಿ ಕಲಿಕೆ ಆರಂಭ
governor gehlot learn kannada from Jnanamurthy snr
Author
Bengaluru, First Published Sep 25, 2021, 7:47 AM IST

 ಬೆಂಗಳೂರು (ಸೆ.25):  ಮಧ್ಯಪ್ರದೇಶ ಮೂಲದ ಥಾವರ್‌ಚಂದ್‌ ಗೆಹಲೋತ್‌ ಅವರು ಕರ್ನಾಟಕದ (karnataka) ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆಯುತ್ತಿದ್ದಂತೆಯೇ ಕನ್ನಡ (Kannada) ಭಾಷೆ ಕಲಿಕೆಗೆ ಮುಂದಾಗಿದ್ದಾರೆ.

ಶಿಕ್ಷಕ  (Teacher )ಜ್ಞಾನಮೂರ್ತಿ ಅವರು ಬುಧವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ (Governor) ಕನ್ನಡ ಪುಸ್ತಕ ನೀಡುವ ಮೂಲಕ ಕನ್ನಡ ಕಲಿಕೆಯನ್ನ್ನು ಆರಂಭಿಸಿದರು. ಬಳಿಕ ಸುಮಾರು ಒಂದು ಗಂಟೆ ಕಾಲ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಇತಿಹಾಸದ ಬಗ್ಗೆ ರಾಜ್ಯಪಾಲರಿಗೆ ವಿವರಿಸಿದರು. ಇದೀಗ ರಾಜ್ಯಪಾಲರು ಕನ್ನಡದ ವರ್ಣಮಾಲೆ ಕಲಿಯುವ ಪ್ರಯತ್ನದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲ ಗೆಹಲೋತ್‌ ಅವರ ಈ ನಡೆಗೆ ಕನ್ನಡ ಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಜ್ಯಪಾಲರ ನಡೆ ಇತರ ರಾಜ್ಯಗಳಿಂದ ಆಗಮಿಸುವವರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.

ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಥಾವರ್ ಚಂದ್ ಗೆಹ್ಲೋಟ್

ಹಿಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರ ಅವಧಿಯಲ್ಲಿ ರಾಜಭವನದಲ್ಲಿ ಕನ್ನಡ ಭಾಷೆಗೆ ಸ್ಥಾನವೇ ಇಲ್ಲದಂತಾಗಿತ್ತು. ಸಂಪೂರ್ಣ ಗುಜರಾತಿ ಮತ್ತು ಹಿಂದಿಮಯವಾಗಿತ್ತು. ಇದು ಸಾಕಷ್ಟುಟೀಕೆಗೆ ಒಳಪಟ್ಟಿತ್ತು. ಈ ಬಗ್ಗೆ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ಹಲವು ಬಾರಿ ಆಕ್ರೋಶವನ್ನೂ ಹೊರಹಾಕಿದ್ದರು. ಇದೀಗ ಈಗಿನ ರಾಜ್ಯಪಾಲರು ಕನ್ನಡ ಕಲಿಯಲು ಮುಂದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಈ ಕ್ರಾಂತಿಕಾರಿ ನಡೆಗೆ ನಮ್ಮ ಗೌರವಪೂರ್ವಕ ಅಭಿನಂದನೆಗಳು’ ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್‌ ನಾರಾಯಣಕುಮಾರ್‌ ಟ್ವೀಟ್‌ ಮೂಲಕ ಹೇಳಿದ್ದಾರೆ.

‘ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಅವರು ಕನ್ನಡ ಕಲಿಯುತ್ತಿರುವ ಸುದ್ದಿ ಕೇಳಿ ಬಹಳ ಸಂತೋಷವಾಯಿತು. ಅವರ ಕನ್ನಡ ಅಭಿಮಾನ ಶ್ಲಾಘನೀಯ. ಹೊರರಾಜ್ಯಗಳಿಂದ ಬಂದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ರಾಜ್ಯಪಾಲರ ನಡೆ ಪ್ರೇರಣೆಯಾಗಲಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

 

Follow Us:
Download App:
  • android
  • ios