ಸಾರಿಗೆ ನೌಕರರಿಗೆ ಶಾಕಿಂಗ್ ಸುದ್ದಿ ಕೊಟ್ಟ ಸರ್ಕಾರ..!
* ಮುಂದಿನ 6 ತಿಂಗಳು ಮುಷ್ಕರ ನಿಷೇಧ
* ಜು.1ರಿಂದ ಡಿ.31ರವರೆಗೆ ಮುಷ್ಕರ ಬ್ಯಾನ್
* ಅಗತ್ಯ ಸೇವೆಗಳ ನೌಕರರಿಗೆ ಅನ್ವಯ
ಬೆಂಗಳೂರು(ಜೂ.27): ರಾಜ್ಯ ಸರ್ಕಾರ ಜುಲೈ 1ರಿಂದ ಡಿಸೆಂಬರ್ 31ರ ವರೆಗೆ ಅಗತ್ಯ ಸೇವೆಗಳಲ್ಲಿ ಮುಷ್ಕರ ನಿಷೇಧಿಸಿದೆ. ಈ ಮೂಲಕ ಜುಲೈ ಮೊದಲ ವಾರದಿಂದ ಮುಷ್ಕರ ನಡೆಸಲು ಸಿದ್ಧತೆಯಲ್ಲಿ ತೊಡಗಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಶಾಕ್ ನೀಡಿದೆ.
ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 2013 ಸೆಕ್ಷನ್ 3ರ ಅಡಿಯಲ್ಲಿ ನೀಡಲಾದ ಅಧಿಕಾರ ಚಲಾಯಿಸಿ ಸರ್ಕಾರ ಈ ಮುಷ್ಕರ ನಿಷೇಧಿಸಿದೆ. ಜು.1ರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯವ್ಯ ಸಾರಿಗೆ ನಿಗಮಗಳಲ್ಲಿ ಈ ಆದೇಶ ಅನ್ವಯವಾಗಲಿದೆ.
'ಸಾರಿಗೆ ಸಂಸ್ಥೆ ಖಾಸಗೀಕರಣಕ್ಕೆ ಬಿಜೆಪಿ ಹುನ್ನಾರ'
ಆರನೇ ವೇತನ ಆಯೋಗದ ಶಿಫಾರಸ್ಸಿನ ಮಾದರಿಯಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಒಂಬತ್ತು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟ ಜುಲೈ ಮೊದಲ ವಾರದಿಂದ ಸಾರಿಗೆ ಮುಷ್ಕರ ನಡೆಸಲು ಸಿದ್ಧತೆಯಲ್ಲಿ ತೊಡಗಿತ್ತು. ಈ ಬಾರಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ರಸ್ತೆಗಿಳಿದು ಹೋರಾಟ ನಡೆಸುವುದಾಗಿ ತಿಳಿಸಲಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅಗತ್ಯ ಸೇವೆಗಳ ಅಡಿಯಲ್ಲಿ ಆರು ತಿಂಗಳ ಕಾಲ ರಾಜ್ಯದಲ್ಲಿ ಸಾರಿಗೆ ಮುಷ್ಕರ ನಿಷೇಧಿಸಿ ಆದೇಶಿಸಿದೆ.