ರಾಜ್ಯದ ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. 2026-27ನೇ ಸಾಲಿನ ಬಜೆಟ್‌ನಲ್ಲಿ ನಿರುದ್ಯೋಗಿ ಯುವಜನತೆಗೆ ಬಂಪರ್ ಕೊಡುಗೆ, ವಿವಿಧ ಪ್ರಮುಖ ಇಲಾಖೆಗಳಲ್ಲಿ ಧೂಳು ಹಿಡಿಯುತ್ತಿದ್ದ ಬರೋಬ್ಬರಿ 56,432 ಹುದ್ದೆಗಳ ಭರ್ತಿ ಮಾಡಲು ಹಸಿರು ನಿಶಾನೆ ತೋರಿಸಲಾಗಿದೆ.

ಬೆಂಗಳೂರು (ಮಾ.6): ರಾಜ್ಯದ ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. 2026-27ನೇ ಸಾಲಿನ ಬಜೆಟ್‌ನಲ್ಲಿ ನಿರುದ್ಯೋಗಿ ಯುವಜನತೆಗೆ ಬಂಪರ್ ಕೊಡುಗೆ ನೀಡಲಾಗಿದ್ದು, ವಿವಿಧ ಪ್ರಮುಖ ಇಲಾಖೆಗಳಲ್ಲಿ ಧೂಳು ಹಿಡಿಯುತ್ತಿದ್ದ ಬರೋಬ್ಬರಿ 56,432 ಹುದ್ದೆಗಳನ್ನು ಭರ್ತಿ ಮಾಡಲು ಹಸಿರು ನಿಶಾನೆ ತೋರಿಸಲಾಗಿದೆ. ಇದು ಕೇವಲ ಅಂಕಿ-ಅಂಶವಲ್ಲ, ಸಾವಿರಾರು ಕುಟುಂಬಗಳ, ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ನಿರುದ್ಯೋಗಿಗಳ ಕನಸಿಗೆ ಜೀವ ನೀಡುವ ಭರವಸೆಯಾಗಿದೆ.

ವಯೋಮಿತಿಯಲ್ಲಿ ಐದು ವರ್ಷ ವಿನಾಯಿತಿ

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ದಶಕಗಳ ಬೇಡಿಕೆಗೆ ಸರ್ಕಾರ ಕೊನೆಗೂ ಸ್ಪಂದಿಸಿದೆ. ಕಾನೂನು ಸಂಘರ್ಷ ಹಾಗೂ ತಾಂತ್ರಿಕ ಕಾರಣಗಳಿಂದ ನೇಮಕಾತಿ ವಿಳಂಬವಾಗಿ ವಯಸ್ಸು ಮೀರುತ್ತಿದ್ದ ಅಭ್ಯರ್ಥಿಗಳ ಕಣ್ಣೀರು ಒರೆಸಲು ಸಿಎಂ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಏಕಕಾಲಕ್ಕೆ ಅನ್ವಯವಾಗುವಂತೆ 5 ವರ್ಷಗಳ ವಯೋಮಿತಿ ಸಡಿಲಿಕೆ ಘೋಷಿಸುವ ಮೂಲಕ, ಅವಕಾಶ ವಂಚಿತರಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲು ವೇದಿಕೆ ಸಜ್ಜುಗೊಳಿಸಿದ್ದಾರೆ.

ಮೂಲಸೌಕರ್ಯಕ್ಕೆ ಕೋಟಿ ಕೋಟಿ ಅನುದಾನ

ರಾಜ್ಯದ ರಸ್ತೆಗಳು ಇನ್ನು ಮುಂದೆ ಹೈಟೆಕ್ ರೂಪ ಪಡೆಯಲಿವೆ. ಕಳೆದ ವರ್ಷವಷ್ಟೇ 8,600 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಸರ್ಕಾರ, ಈ ವರ್ಷವೂ ತನ್ನ ಅಭಿವೃದ್ಧಿ ವೇಗವನ್ನು ಮುಂದುವರಿಸಿದೆ. 2026-27ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 4,000 ಕೋಟಿ ರೂ. ಮೊತ್ತದ ರಸ್ತೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಒತ್ತು ನೀಡಲಾಗಿದೆ.

ಜಿಐ ಟ್ಯಾಗ್ ಮೂಲಕ ಜಾಗತಿಕ ಮಾರುಕಟ್ಟೆಗೆ ಲಗ್ಗೆ

ಕರ್ನಾಟಕದ ವಿಶಿಷ್ಟ ಉತ್ಪನ್ನಗಳಿಗೆ ಈಗ ಜಾಗತಿಕ ಮನ್ನಣೆ. ರಾಜ್ಯದ ಸರಿಸುಮಾರು 45ಕ್ಕೂ ಹೆಚ್ಚು ಉತ್ಪನ್ನಗಳಿಗೆ ಭೌಗೋಳಿಕ ಸೂಚಕ (GI) ಮಾನ್ಯತೆ ದೊರೆತಿರುವುದು ಹೆಮ್ಮೆಯ ವಿಷಯ. ಈ ಸಾಧನೆಯನ್ನು ಕೇವಲ ಗೌರವಕ್ಕೆ ಸೀಮಿತಗೊಳಿಸದೆ, ಇದನ್ನು ಬಳಸಿಕೊಂಡು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಗ್ರಾಮೀಣ ಕಲೆ ಮತ್ತು ಕರಕುಶಲತೆ ಈಗ ಆರ್ಥಿಕತೆಯ ಇಂಜಿನ್ ಆಗಿ ಬದಲಾಗಲಿದೆ.

ಹಸಿರು ಮತ್ತು ಸುಸ್ಥಿರ ಆರ್ಥಿಕತೆಯತ್ತ ಹೆಜ್ಜೆ

ಬಜೆಟ್ ಕೇವಲ ಹಣಕಾಸಿನ ಲೆಕ್ಕಾಚಾರವಲ್ಲ, ಅದು ಭವಿಷ್ಯದ ದಿಕ್ಸೂಚಿ. ಕಾರ್ಮಿಕ ಕಲ್ಯಾಣ, ಪ್ರಾದೇಶಿಕ ಸಮಾನತೆ ಮತ್ತು ನಗರ ಕೇಂದ್ರಿತ ಸುಸ್ಥಿರ ಬೆಳವಣಿಗೆಗೆ ಈ ಬಾರಿ ವಿಶೇಷ ಒತ್ತು ನೀಡಲಾಗಿದೆ. ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳ ವೃದ್ಧಿಯ ಜೊತೆಗೆ 'ಹಸಿರು ಆರ್ಥಿಕತೆ'ಗೆ (Green Economy) ಆದ್ಯತೆ ನೀಡುವ ಮೂಲಕ ಪರಿಸರ ಪೂರಕ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಪಣತೊಟ್ಟಿದೆ.