* ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ*  ಅಧಿಕಾರ ಹಸ್ತಾಂತರಕ್ಕೆ ಬಾರದೇ ಅಸಮಾಧಾನ ಹೊರಹಾಕಿದ ರೋಹಿಣಿ ಸಿಂಧೂರಿ* ಜಿಲ್ಲಾ ಪಂಚಾಯತ್​ ಸಿಇಒ ಯೋಗೀಶ್ ಉಪಸ್ಥಿತಿಯಲ್ಲಿ ಡಾ.ಗೌತಮ್ ಬಗಾದಿ ಅವರು ಅಧಿಕಾರ ಸ್ವೀಕಾರ

ಮೈಸೂರು, (ಜೂನ್.06): ಜಿಲ್ಲೆಯ ಐಎಎಸ್ ಅಧಿಕಾರಿಗಳ ಕಚ್ಚಾಟವನ್ನು ಸರ್ಕಾರ ವರ್ಗಾವಣೆ ಮೂಲಕ ಬಗೆಹರಿಸಿದೆ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನ ಜಿಲ್ಲೆಯಿಂದ ಎತ್ತಂಗಡಿ ಮಾಡಲಾಗಿದೆ.

Add Asianetnews Kannada as a Preferred SourcegooglePreferred

"

ಇದೀಗ ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ.ಗೌತಮ್ ಬಗಾದಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅಧಿಕಾರ ಹಸ್ತಾಂತರಕ್ಕೆ ರೋಹಿಣಿ ಸಿಂಧೂರಿ ಬಾರದೇ ಅಸಮಾಧಾನ ಹೊರಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್​ ಸಿಇಒ ಯೋಗೀಶ್ ಉಪಸ್ಥಿತಿಯಲ್ಲಿ ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಅವರು ಅಧಿಕಾರ ಹಸ್ತಾಂತರಿಸಿದರು.

ರಾಜೀನಾಮೆ ವಾಪಸ್ ಪಡೆದಿದ್ದೇನೆ : ರೋಹಿಣಿ ವಿರುದ್ದ ಮತ್ತೆ ಗುಡುಗಿದ ಶಿಲ್ಪಾ

ನಗರಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್​ ಜೊತೆಗಿನ ಜಗಳದಿಂದ ವರ್ಗಾವಣೆಗೊಂಡಿರುವ ರೋಹಿಣಿ ಸಿಂಧೂರಿ, ಟ್ರಾನ್ಸ್‌ಫರ್ ಆರ್ಡರ್‌ ತಡೆ ಹಿಡಿಯುವಂತೆ ಸಿಎಂಗೆ ಮನವಿ ಮಾಡಿದ್ದರು. ಆದ್ರೆ, ಇದಕ್ಕೆ ಸಿಎಂ ಒಪ್ಪಿಲ್ಲ. ಇದರಿಂದ ರೋಹಿಣಿ ನೂತನ ಜಿಲ್ಲಾಧಿಕಾರಿಗಳ ಅಧಿಕಾರ ಹಸ್ತಾಂತರದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. 

ನೂತನ ಜಿಲ್ಲಾಧಿಕಾರಿಯ ಪ್ರತಿಕ್ರಿಯೆ

ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ನೂತನ ಜಿಲ್ಲಾಧಿಕಾರಿ ಬಗಾದಿ, ನಾನೊಬ್ಬ ತುಂಬಾ ಲೋ ಪ್ರೊಫೈಲ್ ಅಧಿಕಾರಿ. 13 ವರ್ಷದ ಸೇವೆಯಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಅಷ್ಟೆ. ನಿಷ್ಠೆಯಿಂದ ಪ್ರಮಾಣಿಕತೆಯಿಂದ ಪಾರದರ್ಶಕವಾಗಿ ನಮ್ಮ ಕೆಲಸ ಮಾಡಿಕೊಂಡು ಹೋದರೆ ಜನರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಅವರೇ ಬಂದು ಬೆಂಬಲ ಕೊಡೋದನ್ನು ನೋಡಿದ್ದೇನೆ ಎಂದರು.

ಮೈಸೂರು ಒಂದು ಸಾಂಪ್ರದಾಯಿಕ ನಗರ. ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇರಬಹುದು. ನಾನು ಪಾರದರ್ಶಕವಾಗಿ ಜನರಿಗೆ ಹತ್ತಿರವಾಗಿ ಆಡಳಿತ ಕೊಡುವುದಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಎಲ್ಲ ವರ್ಗದ ಜನರನ್ನು, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ಕೆಲಸ ನಾನು ಮಾಡಿಕೊಂಡು ಹೋದರೆ ಎಷ್ಟೇ ದೊಡ್ಡ ಸಮಸ್ಯೆ ಪರಿಹರಿಸಬಹುದು ಎಂದು ನಂಬಿರುವುದಾಗಿ ಹೇಳಿದರು.

ಕೋವಿಡ್ ನಿರ್ವಹಣೆಗೆ ಮೊದಲ ಆದ್ಯತೆ ಕೊಡಲಾಗುವುದು. ಹೊಸದಾಗಿ ಜಿಲ್ಲಾಧಿಕಾರಿಯಾಗಿ ಮೈಸೂರಿಗೆ ಬಂದಿದ್ದೇನೆ. ಮೈಸೂರಿನಲ್ಲಿ ಏನೇನು ಒಳ್ಳೆಯ ಕೆಲಸ ನಡೆದಿದೆಯೋ ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ನಿನ್ನೆ ರಾತ್ರಿ ಆದೇಶವಾಗಿದೆ. ಹಿಂದಿನ ಜಿಲ್ಲಾಧಿಕಾರಿ, ಎಡಿಸಿ, ಸಿಇಒಗಳೊಂದಿಗೆ ಮಾತನಾಡಿದ್ದೇನೆ. ಹಿಂದೆ ಇದ್ದ ಮಹಾನಗರ ಪಾಲಿಕೆ ಆಯುಕ್ತರ ಜತೆಗೂ ಮಾತನಾಡಿದ್ದೇನೆ. ಮೈಸೂರಿಗೆ ವರ್ಗಾವಣೆ ಆಗಲಿದೆ ಎಂದು ಊಹಿಸಿರಲಿಲ್ಲ. ನನ್ನ ಸರ್ವಿಸ್‌ನಲ್ಲಿ ವಿವಾದದಲ್ಲಿ ಯಾವಾಗಲೂ ಇಲ್ಲ. ಹಾಗಾಗಿ ನನ್ನ ಹೆಸರು ನೀವು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ತುಂಬಾ ಲೋಪ್ರೊಫೈಲ್ ಅಧಿಕಾರಿ ಎಂದರು.