ಚಿತ್ತಾಪುರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ವಿಶ್ವ ಮಹಿಳಾ ದಿನದಂದೇ ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಏರಿಸಿರುವುದನ್ನು ತೀವ್ರವಾಗಿ ಟೀಕಿಸಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.

ಕಲಬುರಗಿ / ಚಿತ್ತಾಪುರ (ಮಾ.8): ಇಂದು ವಿಶ್ವ ಮಹಿಳಾ ದಿನವಾಗಿದೆ. ಇದೇ ದಿನದಂತೆ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆ ಏರಿಸಿದೆ. ಇದು ಅಚ್ಛೇ ದಿನ್ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಚಿತ್ತಾಪುರ ಪಟ್ಟಣದಲ್ಲಿ ನಡೆದ ರೂ 1069 ಕೋಟಿ ವೆಚ್ಚದ ಕಾಮಗಾರಿಗಳು ಅಡಿಗಲ್ಲು ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಿದ್ದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯ ಹಾಗೂ ಸ್ವಾಭಿಮಾನದ ಜೀವನ‌ ನಡೆಸುತ್ತಿದ್ದಾರೆ. ನಿಮ್ಮ ದುಡ್ಡನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಿಮಗೆ ವಾಪಸ್ ಕೊಟ್ಟರೆ, ಬಿಜೆಪಿಯವರು ಟೀಕಿಸುತ್ತಿದ್ದಾರೆ. ಅವರಿಗೆ ಜನರ ದುಡ್ಡು ಜನರಿಗೆ ಮರುಬಳಕೆಯಾಗುವುದು ಬೇಕಾಗಿಲ್ಲ ಎಂದು ಪ್ರಿಯಾಂಕ್ ಹರಿಹಾಯ್ದರು.

ರಾಜ್ಯದ‌ ಮುಖ್ಯಮಂತ್ರಿ ಹೊರತುಪಡಿಸಿದರೆ ನಾನೇ ನಂತರದ ಟಾರ್ಗೆಟ್ ಆಗಿದ್ದೇನೆ ಎಂದು‌ ಕೆಲವರು ಹೇಳುತ್ತಾರೆ. ಚಿತ್ತಾಪುರದ ಜನರ ಆಶೀರ್ವಾದ ಇರುವವರೆಗೆ ನನಗೆ ಏನು ಆಗುವುದಿಲ್ಲ ಎಂದು ಜನರ ಕರಡಾತನದ‌ ನಡುವೆ ಘೋಷಿಸಿದರು.

ವೇದಿಕೆ ಮೇಲೆ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಹಲವರಿದ್ದರು.