ಗಣೇಶ ಚತುರ್ಥಿ ಪ್ರಯುಕ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ವಲಯ‌ ನಿರ್ಧರಿಸಿದೆ.‌ ಜೊತೆಗೆ ವಾಯವ್ಯ ಕರ್ನಾಟಕ ಸಾರಿಗೆಯಿಂದ ವಿಶೇಷ ಬಸ್‌ ಸೌಲಭ್ಯ ಕೂಡ ಇರಲಿದೆ.

ಹುಬ್ಬಳ್ಳಿ (ಸೆ.12): ಗಣೇಶ ಚತುರ್ಥಿ ಪ್ರಯುಕ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ವಲಯ‌ ನಿರ್ಧರಿಸಿದೆ.‌ ಸೆ.15ರಂದು ಯಶವಂತಪುರದಿಂದ ಸಂಜೆ 6:15ಕ್ಕೆ ಹೊರಡಲಿರುವ ಈ ರೈಲು ತುಮಕೂರು- ಅರಸೀಕೆರೆ- ಬೀರೂರು- ದಾವಣಗೆರೆ- ಹರಿಹರ- ಹಾವೇರಿ- ಹುಬ್ಬಳ್ಳಿ- ಧಾರವಾಡ ಮೂಲಕ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 07390 ರೈಲು ಸೆ.16 ರಂದು ಹಿಂದಿರುಗಲಿದ್ದು, ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು 17ರ ಮುಂಜಾನೆ 4:30 ಕ್ಕೆ ಯಶವಂತಪುರ ತಲುಪಲಿದೆ. ಅದೇ ರೀತಿ 17 ರಂದು ಸಂಜೆ 6:15ಕ್ಕೆ ಮತ್ತೊಂದು ಟ್ರಿಪ್ ಯಶವಂತಪುರದಿಂದ ಹೊರಟು ಬೆಳಗಾವಿ ತಲುಪಲಿದೆ. ಅದೇ ರೀತಿ ಸೆ. 18 ರಂದು ಸಂಜೆ 6:30ಕ್ಕೆ ಬೆಳಗಾವಿಯಿಂದ ಹೊರಟು ಯಶವಂತಪುರ ತಲುಪಲಿದೆ. ಈ ವಿಶೇಷ ರೈಲು ಎಸಿ ಟು ಟೈರ್ ಬೋಗಿ, 7 ಎಸಿ ತ್ರಿ ಟೈರ್ ಬೋಗಿಗಳು, 8 ಸ್ಲೀಪರ್ ಕ್ಲಾಸ್ ಬೋಗಿಗಳು, ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹಾಗೂ ಅಂಗವಿಕಲ ಸ್ನೇಹಿ ಕಂಪಾರ್ಟ್ ಮೆಂಟ್ 2 ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳನ್ನು ಹೊಂದಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು, ಹೊಸಪೇಟೆಯಲ್ಲಿ

ವಾಯವ್ಯ ಕರ್ನಾಟಕ ಸಾರಿಗೆಯಿಂದ ಗಣೇಶ ಹಬ್ಬಕ್ಕೆ 500ಕ್ಕೂ ಹೆಚ್ಚು ವಿಶೇಷ ಬಸ್‌:
ಗಣೇಶ ಹಬ್ಬದ ಆಚರಣೆಗಾಗಿ ದೂರದ ಸ್ಥಳಗಳಿಂದ ತಮ್ಮ ಸ್ವಂತ ಊರುಗಳಿಗೆ ಬರುವ ಹಾಗೂ ಹಬ್ಬ ಮುಗಿಸಿ ಹಿಂದಿರುಗುವ ಸಾರ್ವಜನಿಕರ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

ಗಣೇಶ ಚತುರ್ಥಿ ಆಚರಿಸಲು ಆಗಮಿಸುವವರಿಗಾಗಿ ಸೆ. 15 ಮತ್ತು 16ರಂದು ಬೆಂಗಳೂರು, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ಅಂತರ್‌ ರಾಜ್ಯದ ವಿವಿಧ ಪ್ರದೇಶಗಳಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಹಬ್ಬಕ್ಕೆ ಬರುವವರಿಗೆ ಅನುಕೂಲವಾಗುವಂತೆ ಬೆಂಗಳೂರು ಮತ್ತಿತರ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ವೋಲ್ವೊ, ಸ್ಲೀಪರ್, ರಾಜಹಂಸ ಮುಂತಾದ 50 ಪ್ರತಿಷ್ಠಿತ ಐಷಾರಾಮಿ ಬಸ್‌ ಹಾಗೂ 200 ವೇಗದೂತ ಸಾರಿಗೆ ಸೇರಿದಂತೆ 250ಕ್ಕೂ ಹೆಚ್ಚು ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಸ್ಥಳೀಯ ಬಸ್ ನಿಲ್ದಾಣಗಳಿಂದ ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳಿಗೆ ಅವಶ್ಯಕತೆಗೆ ತಕ್ಕಂತೆ ಹೆಚ್ಚುವರಿ ಬಸ್ ಗಳನ್ನು ಓಡಿಸಲಾಗುತ್ತದೆ.

Bengaluru ಖಾಸಗಿ ವಾಹನಗಳ ಸಂಚಾರ ಬಂದ್‌ ಮಾಡಿದ್ದಕ್ಕೆ, ಬಿಎಂಟಿಸಿಗೆ 6 ಕೋಟಿ ರೂ. ಆದಾಯ

ಹಬ್ಬ ಮುಗಿಸಿಕೊಂಡು ಸ್ವಂತ ಊರುಗಳಿಂದ ಮರಳಿ ಬೆಂಗಳೂರು, ಮಂಗಳೂರು, ಹೈದರಾಬಾದ್‌, ಪುಣೆ ಇನ್ನಿತರೆ ಪ್ರಮುಖ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಸೆ.19ರಿಂದ‌ 24ರ ವರೆಗೆ ಸಂಸ್ಥೆಯ ಎಲ್ಲ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ ಜನದಟ್ಟಣೆಗೆ ಅನುಗುಣವಾಗಿ 250ಕ್ಕೂ ಹೆಚ್ಚು ವಿಶೇಷ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಾಗುತ್ತದೆ.

ಹಬ್ಬದ ವಿಶೇಷ ಬಸ್‌ಗಳಿಗೆ KSRTC Mobile App, ಮುಂಗಡ ಬುಕ್ಕಿಂಗ್ ಕೌಂಟರ್‌ಗಳು ಅಥವಾ ಸಂಸ್ಥೆಯ ವೆಬ್ ಸೈಟ್ www.ksrtc.in ಮೂಲಕ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.