Karnataka Rains: ಕರ್ನಾಟಕದಲ್ಲಿ ಮತ್ತೆ ಮಳೆ ಅನಾಹುತಕ್ಕೆ ನಾಲ್ವರ ಬಲಿ
ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ತಗ್ಗಿದರೂ 17 ಸೇತುವೆಗಳು ಇನ್ನೂ ನೀರಿನಿಂದ ಮುಕ್ತವಾಗಿಲ್ಲ.
ಬೆಂಗಳೂರು(ಸೆ.14): ರಾಜ್ಯದ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಮಂಗಳವಾರ ಕೊಂಚ ಬಿಡುವು ಕೊಟ್ಟಿತ್ತು. ಆದರೂ ಮಳೆ ಸಂಬಂಧಿ ಅನಾಹುತಗಳ ಸಾವಿನ ಸರಣಿ ಮುಂದುವರಿದಿದ್ದು, ಮಂಗಳವಾರ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ತಗ್ಗಿದರೂ 17 ಸೇತುವೆಗಳು ಇನ್ನೂ ನೀರಿನಿಂದ ಮುಕ್ತವಾಗಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಮಳೆ, ಸುಂಟರಗಾಳಿಗೆ ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ನಾಲ್ವರು ಸಾವು:
ಬೆಳಗಾವಿಯಲ್ಲಿ ಮಳೆಗೆ ಬೃಹದಾಕಾರದ ಮರ ಬಿದ್ದು ದ್ವಿಚಕ್ರ ವಾಹನ ಸವಾರ ಸಿದ್ದನಹಳ್ಳಿ ಗ್ರಾಮದ ರಾಕೇಶ್ ಸುಲದಾಳ (26) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಲಸಕ್ಕೆಂದು ಎಂದಿನಂತೆ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದಾಗ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ ಬಳಿ ಮರ ಬಿದ್ದಿದೆ. ಮತ್ತೊಂದೆಡೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಒಂಟಗೋಡಿಯಲ್ಲಿ ಘಟಪ್ರಭಾ ನದಿಯಲ್ಲಿ ವಿಜಯ ಪಾಟೀಲ (20) ಎಂಬ ಯುವಕ ಮುಳುಗಿ ಮೃತಪಟ್ಟಿದ್ದಾನೆ.
Karnataka Rains: ವರುಣನ ಆರ್ಭಟಕ್ಕೆ ನಲುಗಿದ ಅನ್ನದಾತರು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಲ್ಲಿ ರಸ್ತೆ ದಾಟುವಾಗ ಮೋಟಾರ್ ಬೈಕ್ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟಿದ್ದಾರೆ. ವೇದಾವತಿ ನದಿ ನೀರಿನಿಂದ ಪರಶುರಾಮಪುರ - ಕೊರ್ಲಕುಂಟೆ ರಸ್ತೆ ನೀರಿನಲ್ಲಿ ಮುಳುಗಿದ್ದು, ಕೊರ್ಲಕುಂಟೆ ಗ್ರಾಮದ ಎಚ್.ರವಿಕುಮಾರ್(34), ಪಿ.ಓಬಳೇಶ್(35) ಮಂಜುನಾಥ(34) ಎಂಬುವವರ ಒಂದೇ ಬೈಕ್ನಲ್ಲಿ ಸೋಮವಾರ ತಡರಾತ್ರಿ ಹೊರಟಾಗ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಮಂಜುನಾಥ ಈಜಿ ದಡ ಸೇರಿದ್ದರೆ ಇನ್ನಿಬ್ಬರು ನೀರುಪಾಲಾಗಿದ್ದಾರೆ.