ಪರಿಷತ್ ಚುನಾವಣೆ: 'BSY ಮಾತಿನ ಮೇಲೆ ನಿಲ್ಲುವ ನಾಯಕ, ನನಗೆ ಅವಕಾಶ ಸಿಕ್ಕೇ ಸಿಗುತ್ತೆ'
ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜಗೆ ಅವಕಾಶ ಸಿಕ್ಕೇ ಸಿಗಲಿದೆ| ಪರಿಷತ್ ಚುನಾವಣೆ: ಜಾತಿ ಹೆಸರಿನಲ್ಲಿ ನಮ್ಮನ್ನ ಪರಿಗಣನೆ ಮಾಡೋದು ಸರಿಯಲ್ಲ, ಹೆಚ್. ವಿಶ್ವನಾಥ್|ನಾನು ರಾಜ್ಯಸಭೆಗೆ ಹೋಗಬಹುದಿತ್ತು ಎಂಬ ಚರ್ಚೆ ಸರಿಯಾದದ್ದಲ್ಲ|
ಬೆಂಗಳೂರು(ಜೂ.15): ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವಾಗ ಜಾತಿ ನೋಡೋದು ಸರಿಯಾದ ಕ್ರಮವಲ್ಲ, ಸರ್ಕಾರ ರಚನೆ ಮಾಡುವಾಗ ಯಾಕೆ ಜಾತಿ ನೋಡಲಿಲ್ಲ? ಜಾತಿಯ ಹೆಸರಿನಲ್ಲಿ ನಮ್ಮನ್ನ ಪರಿಗಣನೆ ಮಾಡೋದು ಸರಿಯಾದ ಕ್ರಮ ಅಲ್ಲ. ಸರ್ಕಾರ ಬರುವಾಗ ಯಾರಾದರೂ ಜಾತಿ ನೋಡಿದ್ರಾ..? ಆಗಲೇ ಇವರು ಆ ಜಾತಿಯವರು ಬೇಡ ಅಂತ ಹೇಳಿದ್ರಾ ? ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.
ಇಂದು ನಗರದಲ್ಲಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತಿನ ಮೇಲೆ ನಿಲ್ಲುವ ನಾಯಕರಾಗಿದ್ದಾರೆ. ನನಗೆ, ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜಗೆ ಅವಕಾಶ ಸಿಕ್ಕೇ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
MTB ನಾಗರಾಜ್, ಶಂಕರ್, ವಿಶ್ವನಾಥ್ಗೆ ಬಿಜೆಪಿ ಟಿಕೆಟ್ ನೀಡಲೇಬೇಕು: ಸಚಿವ ನಾಗೇಶ್
9 ಪರಿಷತ್ ಸ್ಥಾನಗಳು(4 ಆಯ್ಕೆ + 5 ನಾಮಕರಣ) ಈಗ ಇರುವಂತಹುದು. ನಮಗೆ ಅವಕಾಶ ಕೊಡುತ್ತೇನೆ ಅಂತ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ನಮಗೆ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ನಾನು ರಾಜ್ಯಸಭೆಗೆ ಹೋಗಬಹುದಿತ್ತು ಎಂಬ ಚರ್ಚೆ ಸರಿಯಾದದ್ದಲ್ಲ, ಚುನಾವಣೆಗೆ ನಿಲ್ಲಬಾರದಿತ್ತು ಎಂಬ ಚರ್ಚೆಯೂ ಕೂಡ ಬೇಡ. ನಮಗೆ ಅವಕಾಶ ಕೊಡಿ ಅನ್ನೋದಷ್ಟೇ ಈಗ ಮುಖ್ಯವಾಗಿದೆ ಎಂದು ಹೇಳಿದ್ದಾರೆ.