ಕುತೂಹಲ ಮೂಡಿಸಿದ ಇಂದ್ರಜಿತ್- ಕುಮಾರಸ್ವಾಮಿ ಭೇಟಿ: HDK ಹೇಳಿದ್ದೇನು?
* ಇತ್ತೀಚೆಗೆ ನಾನು ಇಂದ್ರಜಿತ್ ಲಂಕೇಶ ಅವರನ್ನ ಭೇಟಿ ಮಾಡಿಲ್ಲ
* ನಾನು ರಾಜಕೀಯ ಮಾಡಿದ್ರೆ ನೇರವಾಗಿ ಮಾಡುತ್ತೇನೆ
* ಈ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ
ಬೆಂಗಳೂರು(ಜು.16): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸ್ಯಾಂಡಲ್ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು(ಶುಕ್ರವಾರ) ಭೇಟಿ ಮಾಡಿದ್ದಾರೆ. ಇಂದ್ರಜಿತ್ ಹಾಗೂ ಕುಮಾರಸ್ವಾಮಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಟ ದರ್ಶನ್ ವಿರುದ್ಧ ಆರೋಪಗಳನ್ನು ಮಾಡಿದ್ದ ಇಂದ್ರಜಿತ್ ಲಂಕೇಶ್ ಅವರು ನಿನ್ನೆ(ಗುರುವಾರ) ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದರು. ಇಂದು ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದ್ದಾರೆ.
'ಇಡೀ ರಾತ್ರಿ ದೊಡ್ಡ ಘಟನೆಯಾಗಿದೆ, ಹಲ್ಲೆಗೊಳಗಾದ ವ್ಯಕ್ತಿಯ ಕೆಲಸ ಬಿಡಿಸಿದ್ದಾರೆ'
ಕುಮಾರಸ್ವಾಮಿ-ಇಂದ್ರಜಿತ್ ಲಂಕೇಶ್ ಫೋಟೋ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಇತ್ತೀಚಿಗೆ ನಾನು ಇಂದ್ರಜಿತ್ ಲಂಕೇಶ್ ಅವರನ್ನ ಭೇಟಿಯಾಗಿಲ್ಲ. ಯಾಕೆ ಈ ಪ್ರಕರಣದಲ್ಲಿ ನನ್ನ ಹೆಸರು ತರಲು ಪ್ರಯತ್ನ ಮಾಡ್ತಿದ್ದಾರೋ ಗೊತ್ತಿಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ನಾನು ರಾಜಕೀಯ ಮಾಡಿದ್ರೆ ನೇರವಾಗಿ ಮಾಡುತ್ತೇನೆ. ಕದ್ದು ಮುಚ್ಚಿ ರಾಜಕಾರಣ ನಾನು ಮಾಡೋನಲ್ಲ. ನನ್ನಂತೆ ವಿಷಯವನ್ನ ಮುಕ್ತವಾಗಿ ಪ್ರಸ್ತಾಪ ಮಾಡೋರು ಈ ದೇಶದಲ್ಲಿ ಇಲ್ಲ. ಮುಕ್ತವಾಗಿ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಈ ಫೋಟೋ ಬಿಡುಗಡೆ ಮಾಡಿರುವ ಹಿಂದಿನ ಉದ್ದೇಶ ಏನು ಅಂತ ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ.
ಅನೇಕ ಬಾರಿ ಇಂದ್ರಜಿತ್ ಲಂಕೇಶ್ ನನ್ನನ್ನ ಭೇಟಿಯಾಗಿ ಇಂಟರ್ ವ್ಯೂ ತೆಗೆದುಕೊಂಡಿದ್ದಾರೆ. ಆದ್ರೆ ಇತ್ತೀಚೆಗೆ ನಾನು ಇಂದ್ರಜಿತ್ ಲಂಕೇಶ ಅವರನ್ನ ಭೇಟಿ ಮಾಡಿಲ್ಲ. ಪ್ರತಿ ನಿತ್ಯ ನೂರಾರು ಜನ ನನ್ನನ್ನ ಭೇಟಿ ಆಗ್ತಾರೆ. ಯುವಕರು, ವಯಸ್ಸಾಗಿರೋರು ಫೊಟೋ ತೆಗೆದುಕೊಳ್ತಾರೆ. ಈ ಫೋಟೋ ಈಗ ಯಾರು ಉಪಯೋಗ ಮಾಡಿಕೊಳ್ಳಲು ಹೋಗ್ತಿದ್ದಾರೆ ಅನ್ನೋ ಸತ್ಯ ಇಂದ್ರಜಿತ್ ಲಂಕೇಶ್ ಅವರೇ ತಿಳಿಸಲಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ.