ಆರೆಸ್ಸೆಸ್ ಶಾಖೆ ಸೇರಿದರೆ ಇನ್ನಷ್ಟುಸತ್ಯ ಬಹಿರಂಗ : ಎಚ್ಡಿಕೆ
- ದೇಶದಲ್ಲಿ ಆರ್ಎಸ್ಎಸ್ ಆಳ್ವಿಕೆ ಇದೆ ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
- ‘ಸಂಘದೊಳಗಿನ ವಾಸ್ತವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್ ದರ್ಶನ ಆಗಿದೆ
ಬೆಂಗಳೂರು (ಅ.07): ದೇಶದಲ್ಲಿ ಆರ್ಎಸ್ಎಸ್ (RSs) ಆಳ್ವಿಕೆ ಇದೆ ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು (HD Kumaraswamy) ಮತ್ತೆ ಸಂಘದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ‘ಸಂಘದೊಳಗಿನ ವಾಸ್ತವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್ ದರ್ಶನ ಆಗಿದೆ. ಇನ್ನು ಶಾಖೆಯನ್ನೇ ಸೇರಿಕೊಂಡರೆ ಇನ್ನೆಷ್ಟುಸತ್ಯ ಸಂಗತಿಗಳು ಗೊತ್ತಾಗಬಹುದು. ನೀವೇ ಒಮ್ಮೆ ಊಹಿಸಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ತಿರುಗೇಟು ನೀಡಿದ್ದಾರೆ.
ಅಲ್ಲಿನ ವ್ಯವಹಾರಗಳ ದರ್ಶನ ಆಗಿದೆ: RSS ಶಾಖೆಗೆ ಬನ್ನಿ ಎಂದ ಸಿಟಿ ರವಿಗೆ ಎಚ್ಡಿಕೆತಿರುಗೇಟು
ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದೀರಿ. ನಿಮ್ಮ ಪಕ್ಷ ಮತ್ತು ನಿಮ್ಮ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಅಪರಿಮಿತ ಭ್ರಷ್ಟಾಚಾರ(Corruption), ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಬಗ್ಗೆಯೂ ಹೇಳಬೇಕು. ಅದಕ್ಕೂ ಆರ್ಎಸ್ಎಸ್ ಶಾಖೆಯಲ್ಲಿಯೇ ತರಬೇತಿ ನೀಡಲಾಯಿತಾ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ‘ಆಪರೇಷನ್ ಕಮಲ’ದಂಥ IOperation Kamala) ‘ಅನೈತಿಕ’, ‘ನಿರ್ಲಜ್ಜ’ , ‘ನೀಚ’ ರಾಜಕಾರಣವನ್ನು ಆರ್ಎಸ್ಎಸ್ ಶಾಖೆಯಲ್ಲಿಯೇ ಕಲಿಸಲಾಯಿತಾ ಎಂಬುದನ್ನೂ ನೀವು ಜನರಿಗೆ ಹೇಳಬೇಕು ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಎರಡು ಸಾವಿರ ರು. ಪರಿಹಾರ ಪಡೆಯಲು 100 ರು. ಲಂಚ ಕೇಳಿದ ವರದಿಗಳು ಬಂದಿವೆ. ಇದೇನಾ ನಿಮ್ಮ ಸಮಾಜ ಸೇವೆ? ಛಿದ್ರವಾದ ಬದುಕುಗಳನ್ನೊಮ್ಮೆ ನೋಡಿ. ಜನರ ಬವಣೆಗಳ ಬಗ್ಗೆ ಆರ್ಎಸ್ಎಸ್ ಶಾಖೆಗಳಲ್ಲಿ ನಿಮಗೆಲ್ಲರಿಗೂ ಏನನ್ನೂ ಹೇಳಿಕೊಡುವುದಿಲ್ಲವಾ ಸಿ.ಟಿ.ರವಿಯವರೇ? ಸೇವೆಯ ಸೋಗಿನಲ್ಲಿ ಸಂಸ್ಥೆಗಳು ರಾಜಕೀಯ ಮಾಡಬಾರದು. ಜನರ ಬವಣೆಗಳ ನಿವಾರಣೆ ನಿಟ್ಟಿನಲ್ಲಿ ದುಡಿಯಬೇಕೇ? ಹೊರತು ಬದುಕಿಗೆ ಬೆಂಕಿ ಇಡಬಾರದು. ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಅದಕ್ಕೆ ಕೊಳ್ಳಿ ಇಡಬಾರದು. ಆರ್ಎಸ್ಎಸ್ ಹುಟ್ಟಿದಾಗಿನಿಂದಲೂ ಏನೆಲ್ಲ ಮಾಡಿಕೊಂಡು ಬಂದಿದೆ ಎನ್ನುವುದು ಜಗತ್ತಿಗೆ ಗೊತ್ತಿರುವ ಸಂಗತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳನ್ನು, ಸರ್ಕಾರಗಳನ್ನು, ಆಡಳಿತ ಯಂತ್ರಾಂಗವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪರಿಪಾಠ ದೇಶಕ್ಕೆ ಒಳ್ಳೆಯದಲ್ಲ. ಅರ್ಥ ಮಾಡಿಕೊಳ್ಳಿ ಸಿ.ಟಿ.ರವಿಯವರೇ, ನಾನು ಸತ್ಯದ ಪರ ಎಂದು ಕುಮಾರಸ್ವಾಮಿ ಅತ್ಯಂತ ಕಟುವಾಗಿ ಆರ್ಎಸ್ಎಸ್ ಹಾಗೂ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.