ರಾಜ್ಯದ ತೆರಿಗೆ ಹಣ ವ್ಯಯ ಮಾಡಬೇಡಿ: ಶೆಟ್ಟರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
* ಡೊಲೆರೋ ಸಿಟಿ ನೋಡಲು ಹೋಗಿ ಕರ್ನಾಟಕ ಕಟ್ಟಬೇಕಾದ ಅವಶ್ಯಕತೆ ಇಲ್ಲ
* ಡೊಲೆರೋ ಸಿಟಿ ಮುಕ್ತಾಯ ಆಗಲು ಇನ್ನು 100 ವರ್ಷ ಬೇಕು
* ಬೇರೆ ರಾಜ್ಯದ ಮಾಡಲ್ ಅಂತ ಹೋಗಿ ನಮ್ಮ ರಾಜ್ಯದ ಗೌರವ ಹಾಳು ಮಾಡಬೇಡಿ
ಬೆಂಗಳೂರು(ಜು.16): ರಾಜ್ಯದ ತೆರಿಗೆ ಹಣವನ್ನ ಬೇರೆ ರಾಜ್ಯದ ಮಾಡಲ್ ನೋಡೋದಕ್ಕೆ ವ್ಯಯ ಮಾಡಬೇಡಿ. ಗುಜರಾತ್ನಲ್ಲಿ ಪ್ರಧಾನಿ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್ ಡೊಲೆರೋ ಸಿಟಿ ಬಗ್ಗೆ ಅಧ್ಯಯನಕ್ಕೆ ಹೋಗ್ತಿದ್ದೀರಾ?. ಮೋದಿ 2014 ರಲ್ಲಿ ಚುನಾವಣೆಗೋಸ್ಕರ ಈ ಡೊಲೆರೋ ಸಿಟಿ 3ಡಿ ಪ್ರಾಜೆಕ್ಟ್ ಘೋಷಣೆ ಮಾಡಿದ್ದರು. ಇದೊಂದು ದೇಶದಲ್ಲೇ ಕ್ರಾಂತಿ ಮಾಡೋ ಪ್ರಾಜೆಕ್ಟ್ ಅಂತ ಹೇಳಿದ್ರು, ಡೊಲೆರೋ ಸಿಟಿ ಪ್ರಾಜೆಕ್ಟ್ ಗುಜರಾತ್ ಜನರು ಕೂಡಾ ಈಗ ಮರೆತು ಹೋಗಿದ್ದಾರೆ. 2008 ರಲ್ಲಿ ಪ್ರಾರಂಭವಾದ ಈ ಡೊಲೆರೋ ಸಿಟಿ ಪ್ರಾಜೆಕ್ಟ್ 2021 ಆದ್ರೂ ಮುಗಿದಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಮಾಡೆಲ್ ನೋಡಲು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗುಜರಾತ್ ಪ್ರವಾಸ ಮಾಡುತ್ತಿರುವ ವಿಚಾರದ ಬಗ್ಗೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದನ್ನ ನೋಡೋಕೆ ಜಗದೀಶ್ ಶೆಟ್ಟರ್ ಹೊರಟಿದ್ದಾರೆ. ಈ ಡೊಲೆರೋ ಸಿಟಿ ಪ್ರಾಜೆಕ್ಟ್ ನೋಡಲು ಗುಜರಾತ್ಗೆ ಹೋಗೋದು ಬೇಡ. ಯೂಟ್ಯೂಬ್ನಲ್ಲಿ ನೋಡಿದ್ರೆ ಸಾಕು ಯಾವ ಸ್ಥಿತಿಯಲ್ಲಿ ಪ್ರಾಜೆಕ್ಟ್ ಇದೆ ಅಂತ ಗೊತ್ತಾಗುತ್ತೆ ಎಂದು ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಜನ ಮಾತಾಡುತ್ತಾರೆ, ಎಚ್ಡಿಕೆ ಕೇಳಿಸಿಕೊಳ್ಳಬೇಕಾಗುತ್ತದೆ' ಮುಗಿಯದ ಕನ್ನಂಬಾಡಿ ಕದನ
ನಮ್ಮ ರಾಜ್ಯದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ದೇಶಕ್ಕೆ ಮಾಡಲ್ ಆಗಿರುವ ಉದಾಹರಣೆಗಳಿವೆ. ಡೊಲೆರೋ ಸಿಟಿ ನೋಡಲು ಹೋಗಿ ಕರ್ನಾಟಕ ಕಟ್ಟಬೇಕಾದ ಅವಶ್ಯಕತೆ ಇಲ್ಲ. ಗುಜರಾತ್ಗೆ ಹೋಗದೇ ಯೂಟ್ಯೂಬ್ನಲ್ಲಿ ಡೊಲೆರೋ ಸಿಟಿ ನೋಡಿ ಎಂದು ಎಚ್ಡಿಕೆ ಸಲಹೆ ನೀಡಿದ್ದಾರೆ.
ಡೊಲೆರೋ ಸಿಟಿ ಮಾಡಲ್ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರೋದು ಜನರ ಬದುಕು. ಇದರ ಬದಲು ಏನು ಮಾಡಬೇಕೋ ನೋಡಿ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಸೃಷ್ಟಿಗೆ ಏನ್ ಮಾಡಬೇಕು ಅಂತ ಇಲ್ಲಿ ಕೂತು ಚರ್ಚೆ ಮಾಡಬೇಕು. ಅದು ಬಿಟ್ಟು ಡೊಲೆರೋ ಸಿಟಿ ಕಟ್ಟೋ ಅವಶ್ಯತೆ ಇಲ್ಲ. ಡೊಲೆರೋ ಸಿಟಿ ಮುಕ್ತಾಯ ಆಗಲು ಇನ್ನು 100 ವರ್ಷ ಬೇಕು. ಹೀಗಾಗಿ ಜಗದೀಶ್ ಶೆಟ್ಟರ್ ಗುಜರಾತ್ ಮಾಡಲ್ ಬಿಟ್ಟು ಕರ್ನಾಟಕವನ್ನ ಉತ್ತಮ ಮಾಡಲ್ ಮಾಡಿ ಅಂತ ಜಗದೀಶ್ ಶೆಟ್ಟರ್ಗೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಡೊಲೆರೋ ಸಿಟಿ ಮುಗಿದಿಲ್ಲ ಆಗಲೇ ಅಯೋಧ್ಯೆಯಲ್ಲಿ 10 ಸಿಟಿ ಘೋಷಣೆ ಮಾಡಿದ್ದಾರೆ. ಯುಪಿ ಚುನಾವಣೆ ಇರೋದ್ರೀಂದ ಬಿಜೆಪಿ ಯುಪಿಯಲ್ಲಿ 3ಡಿ ತೋರಿಸುತ್ತಿದೆ. 3ಡಿ ಯಲ್ಲಿ ಏನು ಬೇಕಾದ್ರು ತೋರಿಸಿಕೊಳ್ಳಬಹುದು. ಯಾವುದೇ ರಾಜ್ಯದ ಮಾಡಲ್ ಅಂತ ಹೋಗಿ ನಮ್ಮ ರಾಜ್ಯದ ಗೌರವ ಹಾಳು ಮಾಡಬೇಡಿ. ನಮ್ಮ ರಾಜ್ಯದಲ್ಲೇ ಉತ್ತಮ ಕಾರ್ಯಕ್ರಮ ಕೊಡೋರು ಬೇಕಾದಷ್ಟು ಜನ ಇದ್ದಾರೆ. ಅವರನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಿ ಅಂತ ಸರ್ಕಾರ ಮತ್ತು ಜಗದೀಶ್ ಶೆಟ್ಟರ್ ಎಚ್ಡಿಕೆ ಸಲಹೆ ಕೊಟ್ಟಿದ್ದಾರೆ.