ಧಾರವಾಡ-ಹುಬ್ಬಳ್ಳಿ ಹೆದ್ದಾರಿ ಮೇಲೆ ಸುಮಾರು 3-4 ಅಡಿಗಳಷ್ಟು ನೀರು ನಿಂತಿದ್ದು, ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಕುಂಬಾರಗಣವಿ ಸೇತುವೆ ಮುಳುಗಿದೆ. ಹೀಗಾಗಿ, ಜನರನ್ನು ಜೆಸಿಬಿ ಮೂಲಕ ದಾಟಿಸಲಾಗುತ್ತಿದೆ. ಇದೇ ವೇಳೆ, ನೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರರಿಬ್ಬರನ್ನು ರಕ್ಷಿಸಲಾಗಿದೆ. 

ಬೆಂಗಳೂರು(ಜು.21): ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಿದೆ. ಕಲಬುರಗಿ, ಬೆಳಗಾವಿ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ಧಾರವಾಡ-ಹುಬ್ಬಳ್ಳಿ ಹೆದ್ದಾರಿ ಮೇಲೆ ಸುಮಾರು 3-4 ಅಡಿಗಳಷ್ಟು ನೀರು ನಿಂತಿದ್ದು, ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಕುಂಬಾರಗಣವಿ ಸೇತುವೆ ಮುಳುಗಿದೆ. ಹೀಗಾಗಿ, ಜನರನ್ನು ಜೆಸಿಬಿ ಮೂಲಕ ದಾಟಿಸಲಾಗುತ್ತಿದೆ. ಇದೇ ವೇಳೆ, ನೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರರಿಬ್ಬರನ್ನು ರಕ್ಷಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಐದು ಸೇತುವೆಗಳು ಜಲಾವೃತವಾಗಿದ್ದು, ಖಾನಾಪುರ ತಾಲೂಕಿನ 40ಕ್ಕೂ ಅಧಿಕ ಗ್ರಾಮಗಳು ಈಗಲೂ ಸಂಪರ್ಕ ಕಳೆದುಕೊಂಡಿವೆ. ಜಿಲ್ಲೆಯ 83 ಸೇತುವೆಗಳ ಮೇಲೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ಕಾವಲು ಕಾಯುತ್ತಿದ್ದಾರೆ. ಕಲಬುರಗಿ, ಬೀದರ್‌ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 11 ಮನೆಗಳು ಭಾಗಶಃ ಕುಸಿದಿದ್ದು, 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಈ ಮಧ್ಯೆ, ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ ಹಾಗೂ ಚಿಂಚೋಳಿ ತಾಲೂಕುಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ನೀಡಲಾಗಿತ್ತು. ಇದೇ ವೇಳೆ, ಬೀದರ್‌, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ರಾಜ್ಯದ 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ.

ಸಕಲೇಶಪುರದಲ್ಲಿ ಬೆಂಬಿಡದ ಮಳೆ: ಧರೆಗುರುಳಿದ ಮರ, ಜನಜೀವನ ಅಸ್ತವ್ಯಸ್ತ

ಕೃಷ್ಣೆಯಲ್ಲಿ ಪ್ರವಾಹ:

ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ಹಿರಣ್ಯಕೇಶಿ ಸೇರಿದಂತೆ ಬಹುತೇಕ ನದಿಗಳಲ್ಲಿನ ನೀರಿನ ಮಟ್ಟಏರಿಕೆಯಾಗಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಐದು ಸೇತುವೆಗಳು ಜಲಾವೃತವಾಗಿದ್ದು, ಖಾನಾಪುರ ತಾಲೂಕಿನ 40ಕ್ಕೂ ಅಧಿಕ ಗ್ರಾಮಗಳು ಈಗಲೂ ಸಂಪರ್ಕ ಕಳೆದುಕೊಂಡಿವೆ. ಜಿಲ್ಲೆಯಲ್ಲಿ ಪ್ರಮುಖ ನದಿಗಳು, ಹಳ್ಳಗಳು ಸೇರಿದಂತೆ 83 ಸೇತುವೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದು, ಸೇತುವೆಗಳಲ್ಲಿ ಹೈಅಲರ್ಚ್‌ ಘೋಷಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ರಾಜಾಪುರ ಡ್ಯಾಮ್‌, ಕಲ್ಲೋಳ ಬ್ಯಾರೇಜ್‌, ದೂಧ್‌ಗಂಗಾ ನದಿಯಿಂದ ಸುಮಾರು 1 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನದಿ ತೀರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ ಹಾಗೂ ಚಿಂಚೋಳಿ ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ ಮಾಡಲಾಗಿತ್ತು. ಚಿಂಚೋಳಿ ಅರಣ್ಯದಲ್ಲಿರುವ ಎತ್ತಪೋತ ಜಲಪಾಲ ಮೈದುಂಬಿ ಧುಮ್ಮಿಕ್ಕುತ್ತಿದ್ದು, ಜಲಪಾತ ವೀಕ್ಷಣೆಗೆ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಖಾನಾಪುರದಲ್ಲಿ ವರುಣನ ಅಬ್ಬರ: ತುಂಬಿ ಹರಿಯುತ್ತಿರುವ ಮಲಪ್ರಭೆ

ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರವಾಡ-ಹುಬ್ಬಳ್ಳಿ ರಸ್ತೆ ಮೇಲೆ ಸುಮಾರು 3-4 ಅಡಿಗಳಷ್ಟುನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿಯ ಎನ್‌ಟಿಟಿಎಫ್‌, ಟೋಲನಾಕಾ, ಕೆಎಂಎಫ್‌ ಸೇರಿದಂತೆ ನವಲೂರುವರೆಗೂ ಇರುವ ಕಟ್ಟಡಗಳು ಜಲಾವೃತಗೊಂಡಿವೆ. ಅಳ್ನಾವರ ಬಳಿ ಕಂಬಾರಗಣವಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನರನ್ನು ಜೆಸಿಬಿ ಮೂಲಕ ದಾಟಿಸಲಾಗುತ್ತಿದೆ. ರಸ್ತೆ ಬದಿಯ ಗಣಪತಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪಗಳು ಜಲಾವೃತಗೊಂಡಿವೆ. ಇದೇ ವೇಳೆ, ನೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರರಿಬ್ಬರನ್ನು ರಕ್ಷಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು, ವರದಾ ನದಿಯಲ್ಲಿ ಪ್ರವಾಹ ಬಂದಿದೆ. ಲಿಂಗನಮಕ್ಕಿ ಜಲಾಶಯಕ್ಕೂ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಆನೆ ಮಹಲ್‌ ಟೋಲ್‌ಗೇಟ್‌ ಸಮೀಪ ಮಣ್ಣು ಕುಸಿದಿದ್ದು, ಮತ್ತಷ್ಟುಭೂಕುಸಿತದ ಭೀತಿ ಎದುರಾಗಿದೆ.