ಬೆಂಗ್ಳೂರಿಗಿಂತ ಜಿಲ್ಲೆಗಳಲ್ಲೇ ಅಧಿಕ ಸಾವು|  ರಾಜಧಾನಿಯಲ್ಲಿ 3 ದಿನಕ್ಕೆ 311 ಬಲಿ| ಜಿಲ್ಲೆಗಳಲ್ಲಿ ಇದೇ ಸಂದರ್ಭ 441 ಸಾವು| ಬೆಂಗ್ಳೂರಲ್ಲಿ 3 ಲಕ್ಷ, ಇತರೆಡೆ 1.6 ಲಕ್ಷ ಸಕ್ರಿಯ ಕೇಸ್‌| ಸಾವು ಇತರೆಡೆ ಹೆಚ್ಚು

ರಾಕೇಶ್‌.ಎನ್‌.ಎಸ್‌.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು(ಮೇ.06): ಪ್ರಸ್ತುತ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಭಾಗದಲ್ಲಿ ಕೊರೋನಾದಿಂದ ಮೃತಪಡುವವರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆ ವಿಶ್ಲೇಷಿಸಿದಾಗ ಸಾವಿಗೀಡಾಗುವವರ ಸಂಖ್ಯೆ ಆತಂಕ ಹುಟ್ಟಿಸುವ ರೀತಿಯಲ್ಲಿ ಜಾಸ್ತಿಯಾಗುತ್ತಿದೆ.

ಬೆಂಗಳೂರಿನಲ್ಲಿ ಮೇ 2ರಿಂದ ಮೇ 4ರವರೆಗಿನ ಮೂರು ದಿನಗಳಲ್ಲಿ ಒಟ್ಟು 3.01 ಲಕ್ಷ ಸಕ್ರಿಯ ಪ್ರಕರಣದಲ್ಲಿ 311 ಮಂದಿ ಅಸುನೀಗಿದ್ದರೆ, ಇದೇ ದಿನ ರಾಜ್ಯದ ಉಳಿದ ಭಾಗದಲ್ಲಿ ಕೇವಲ 1.62 ಲಕ್ಷ ಸಕ್ರಿಯ ಪ್ರಕರಣಗಳಿದ್ದರೂ 441 ಮಂದಿ ಮೃತರಾಗಿದ್ದಾರೆ.

ಮೇ 2 ರಂದು ಬೆಂಗಳೂರು ನಗರದಲ್ಲಿ 64 ಮಂದಿ, ರಾಜ್ಯದ ಬೇರೆ ಭಾಗಗಳಲ್ಲಿ 160 ಮಂದಿ ಅಸುನೀಗಿದ್ದರು. ಮೇ 3 ರಂದು ಬೆಂಗಳೂರಿನಲ್ಲಿ 115 ಮತ್ತು ಅನ್ಯಭಾಗದಲ್ಲಿ 124 ಹಾಗೆಯೇ ಮೇ.4 ರಂದು ಬೆಂಗಳೂರಿನಲ್ಲಿ 132 ಮತ್ತು ಬೇರೆ ಭಾಗಗಳಲ್ಲಿ 157 ಮಂದಿ ಅಸುನೀಗಿದ್ದಾರೆ.

"

ಮೊದಲ ಅಲೆಯ ಸಂದರ್ಭದಲ್ಲಿ ಬೆಂಗಳೂರಲ್ಲೇ ಹೆಚ್ಚು ಸಾವು ನೋವು ವರದಿಯಾಗುತ್ತಿತ್ತು. ಆದರೆ ಎರಡನೇ ಅಲೆಯಲ್ಲಿ ಅದರಲ್ಲೂ ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧ ಭಾಗಗಳಿಂದ ದಾಖಲೆಯ ಕೋವಿಡ್‌ ಸಾವು ದಾಖಲಾಗುತ್ತಲೇ ಇದೆ.

ಕಳೆದ ಏಳು ದಿನಗಳ ರಾಜ್ಯದ ಕೋವಿಡ್‌ ಮರಣ ದರ 0.6 ಇದ್ದರೆ ಬೆಂಗಳೂರು ನಗರದ ಮರಣ ದರ ಶೇ.0.5ರಷ್ಟಿದೆ. ಉಳಿದಂತೆ ಹಾವೇರಿ (ಶೇ.2), ಚಾಮರಾಜನಗರ ಶೇ.1.8, ರಾಮನಗರ ಶೇ. 1.4, ಚಿತ್ರದುರ್ಗ ಶೇ.1.3, ದಾವಣಗೆರೆ, ಬೀದರ್‌ ಮತ್ತು ಶಿವಮೊಗ್ಗ ಶೇ. 1.2, ಬಳ್ಳಾರಿ, ಯಾದಗಿರಿ, ಹಾಸನ ಶೇ 1.1, ವಿಜಯಪುರ ಶೇ.0.9, ಚಿಕ್ಕಮಗಳೂರು, ಉತ್ತರ ಕನ್ನಡ, ಧಾರವಾಡ ಶೇ.0.7, ಕಲಬುರಗಿ, ಬಾಗಲಕೋಟೆ ಮತ್ತು ಬೆಂಗಳೂರು ಗ್ರಾಮಾಂತರ ಶೇ.0.6ರ ಮರಣ ದರ ಹೊಂದಿದೆ. ರಾಜ್ಯದ 17 ಜಿಲ್ಲೆಗಳು ಬೆಂಗಳೂರಿಗಿಂತ ಹೆಚ್ಚಿನ ಮರಣ ದರ ಹೊಂದಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona