Asianet Suvarna News Asianet Suvarna News

ರಾಜ್ಯಾ​ದಂತ ಲಾಕ್‌ಡೌನ್‌ ಮುಂದುವರಿಸಿ: ದೇವಿ​ಶೆಟ್ಟಿ ನೇತೃ​ತ್ವದ ಸಮಿತಿ ಶಿಫಾ​ರಸು!

ರಾಜ್ಯಾ​ದಂತ ಲಾಕ್‌ಡೌನ್‌ ಮುಂದುವರಿಸಿ:ತಜ್ಞರ ಶಿಫಾ​ರಸು| ರಾಜ್ಯಾ​ದ್ಯಂತ ಸಾಧ್ಯ​ವಾ​ಗ​ದಿ​ದ್ದರೆ ಕನಿಷ್ಠ ಹಾಟ್‌ಸ್ಪಾಟ್‌ ಜಿಲ್ಲೆಗಳಲ್ಲಾದರೂ ಮುಂದುವರಿಸಿ| ದೇವಿ​ಶೆಟ್ಟಿನೇತೃ​ತ್ವದ ಸಮಿತಿ ಶಿಫಾ​ರಸು, ಇಂದು ಸಂಪುಟದಲ್ಲಿ ಈ ಬಗ್ಗೆ ಚರ್ಚೆ

Dr Devi Shetty Led Committee Suggests Govt To Continue Lockdown In Karnataka
Author
Bangalore, First Published Apr 9, 2020, 7:19 AM IST

ಬೆಂಗಳೂರು(ಏ.09): ರಾಜ್ಯದಲ್ಲಿ ಏಪ್ರಿಲ್‌ 14ರ ಬಳಿಕ ಲಾಕ್‌ಡೌನ್‌ ಏಕಾಏಕಿ ಸಡಿಲಗೊಳಿಸಿದರೆ ಸೋಂಕು ಹರಡುವ ಪ್ರಮಾಣ ತೀವ್ರಗೊಂಡು ಪ್ರಮಾದ ಸೃಷ್ಟಿಯಾಗಲಿದೆ. ಹೀಗಾಗಿ ಇನ್ನೂ ಕೆಲ ದಿನಗಳ ಕಾಲ ಎಲ್ಲಾ ಜಿಲ್ಲೆಗಳಲ್ಲೂ ಲಾಕ್‌ಡೌನ್‌ ಮುಂದುವರೆಸಬೇಕು. ಇದು ಸಾಧ್ಯವಾಗದಿದ್ದರೆ ಹಾಟ್‌ಸ್ಪಾಟ್‌ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮತ್ತಷ್ಟುಬಿಗಿಗೊಳಿಸಿ ಉಳಿದ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಬಹುದು. ಇದು ಲಾಕ್‌ಡೌನ್‌ ಕುರಿತ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಮಾಡಿರುವ ಪ್ರಮುಖ ಶಿಫಾರಸು.

ಖ್ಯಾತ ವೈದ್ಯ ಡಾ.ದೇವಿಶೆಟ್ಟಿನೇತೃತ್ವದಲ್ಲಿ ಬುಧವಾರ ಸಭೆ ನಡೆಸಿದ ಖ್ಯಾತ ವೈದ್ಯರಾದ ಡಾ.ಸಿ.ಎನ್‌. ಮಂಜುನಾಥ್‌,ಡಾ.ಸಿ. ನಾಗರಾಜ್‌, ಡಾ.ವಿ. ರವಿ, ಡಾ.ಎಂ.ಕೆ. ಸುದರ್ಶನ್‌ ಅವರು ಲಾಕ್‌ಡೌನ್‌ ತೆರವಿನಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ತೆಗೆದುಕೊಳ್ಳಬೇಕಿರುವ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದರು. ಬಳಿಕ ಬುಧವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುಮಾರು 50 ಅಂಶಗಳ ಶಿಫಾರಸು ಒಳಗೊಂಡ ವರದಿ ಸಲ್ಲಿಸಿದರು. ಈ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಕೊರೋನಾಗೆ ಇಂದಿಗೆ 1 ತಿಂಗಳು: ದೇಶದಲ್ಲೇ ನಂ.3 ಆಗಿದ್ದ ರಾಜ್ಯ ಈಗ ನಂ.11!

ಶಿಫಾರಸುಗಳೇನು?:

ರಾಜ್ಯದಲ್ಲಿ ತಬ್ಲೀಘಿ ಜಮಾತ್‌, ನಂಜನಗೂಡಿನಂತಹ ಕ್ಲಸ್ಟರ್‌ಗಳ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ-ಮೂಲೆಯಲ್ಲೂ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಯಾವ ಭಾಗದಲ್ಲೂ ಸೋಂಕು ಇಲ್ಲ ಎಂದು ಅಂತಿಮ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ. ಹೀಗಾಗಿ ಸಾಧ್ಯವಾದರೆ ಇನ್ನೂ ಕೆಲ ದಿನಗಳ ಕಾಲ ರಾಜ್ಯಾದ್ಯಂತ ಲಾಕ್‌ಡೌನ್‌ ಮುಂದುವರಿಕೆ ಒಳಿತು.

ಆಡಳಿತ ಹಾಗೂ ಆರ್ಥಿಕ ಸಂಕಷ್ಟದ ಕಾರಣಕ್ಕೆ ಲಾಕ್‌ಡೌನ್‌ ತೆರವುಗೊಳಿಸಬೇಕು ಎಂದು ಸರ್ಕಾರ ನಿರ್ಧರಿಸಿದರೆ, ಆಗ ಕಡ್ಡಾಯವಾಗಿ ಜನದಟ್ಟಣೆ ಉಂಟಾಗುವ ಯಾವುದೇ ಕಾರ್ಯಕ್ರಮಗಳಿಗೂ ಅವಕಾಶ ನೀಡಬಾರದು. ಪ್ರಸ್ತುತ ಬೇಸಿಗೆ ರಜೆಗಳು ಇರುವುದರಿಂದ ಶಾಲಾ-ಕಾಲೇಜುಗಳನ್ನು ಮೇ 31ರವರೆಗೆ ಮುಚ್ಚಬೇಕು. ಅಗತ್ಯವಾದರೆ ಆನ್‌ಲೈನ್‌ ತರಗತಿಗಳಿಗೆ ಆದ್ಯತೆ ನೀಡಬೇಕು. ಹವಾನಿಯಂತ್ರಿತತ ವ್ಯವಸ್ಥೆಯಿಲ್ಲದ ಅಗತ್ಯ ಸೇವೆಯ ಅಂಗಡಿಗಳನ್ನು ಮಾತ್ರ ತೆರೆಯಬೇಕು.

ಕೊರೋನಾಗೆ ಇಂದಿಗೆ 1 ತಿಂಗಳು: ದೇಶದಲ್ಲೇ ನಂ.3 ಆಗಿದ್ದ ರಾಜ್ಯ ಈಗ ನಂ.11!

ಐಟಿ-ಬಿಟಿ ಉದ್ಯಮಗಳು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಬೇಕು. ಇಲ್ಲದಿದ್ದರೆ ಹವಾನಿಯಂತ್ರಿತ ವ್ಯವಸ್ಥೆಯಿಲ್ಲದ ಕಚೇರಿಯಲ್ಲಿ ಶೇ.50ರಷ್ಟುಮಂದಿಯೊಂದಿಗೆ ಸೇವೆ ಸಲ್ಲಿಸುವಂತೆ ಮಾಡಬಹುದು. ಅಂತಾರಾಜ್ಯ ಗಡಿಗಳಲ್ಲಿ ಸರಕು ಸಾಗಣೆ, ವೈದ್ಯಕೀಯ ಸೇವೆ ವಾಹನಗಳಿಗೆ ಮಾತ್ರ ಪ್ರವಶ ನೀಡಬೇಕು. ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿರುವ ಮೂಲಕ ಜನ ಸಂದಣಿಯಾಗದಂತೆ ಎಚ್ಚರ ವಹಿಸಬೇಕು. ಅಂತರಾಜ್ಯ ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯ ಪ್ರಾರಂಭಿಸಬಾರದು. ಎ.ಸಿ. ಬಸ್ಸು ಹಾಗೂ ಮೆಟ್ರೋ ಸೇವೆ ಕಡ್ಡಾಯವಾಗಿ ಕೊರೋನಾ ನಿಯಂತ್ರಣದವರೆಗೆ ಸ್ಥಗಿತಗೊಳಿಸಬೇಕು.

ಗುಟ್ಕಾ, ಚ್ಯುಯಿಂಗ್‌ ಗಮ್‌ ಉಗುಳುವುದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಲಿದೆ. ಹೀಗಾಗಿ ಗುಟ್ಕಾ ಹಾಗೂ ಚ್ಯುಯಿಂಗ್‌ ಗಮ್‌ ನಿಷೇಧಿಸಬೇಕು.

ಲಾಕ್‌ಡೌನ್‌ ಸಡಿಲಗೊಳಿಸುವ ಜಿಲ್ಲೆಗಳಲ್ಲಿ ಮನೋರಂಜನಾ ಕ್ಷೇತ್ರಕ್ಕೆ ನಿರ್ಬಂಧ ಮುಂದುವರೆಯಬೇಕು. ಹೀಗಾಗಿ ಥೇಟರ್‌, ಮಲ್ಟಿಪ್ಲೆಕ್ಸ್‌, ಪಬ್‌ಗಳು, ನೈಟ್‌ ಕ್ಲಬ್‌ಗಳು ಸೇರಿದಂತೆ ಇಂತಹ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಮುಂದುವರೆಸಬೇಕು. ಜೊತೆಗೆ ಬೇಕರಿ, ಸ್ಟೇಷನರಿ, ಕ್ಷೌರದ ಅಂಗಡಿ, ಪಂಕ್ಚರ್‌ ಶಾಪ್‌ಗಳಂತಹ ಎರಡನೇ ಹಂತದ ಅಗತ್ಯ ಸೇವೆಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು.

ಮದ್ಯಮಾರಾಟಕ್ಕೆ ಅನುಮತಿಸಿದರೆ ಜನಜಂಗುಳಿ ಹೆಚ್ಚಾಗಿ ಸಮಸ್ಯೆ ಆಗುತ್ತದೆ. ಮದ್ಯಮಾರಾಟಕ್ಕೆ ಇನ್ನೂ ಕೆಲ ದಿನ ಬ್ರೇಕ್‌ ಹಾಕಬೇಕು ಎಂದು ಕೆಲ ಸದಸ್ಯರು ವಾದ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡದಿದ್ದರೆ ಸೋಂಕು ಹರಡದಂತೆ ತಡೆಯಲು ಸಾಧ್ಯವಾಗಿಲ್ಲ. 3-4 ವಾರದಲ್ಲಿ ಕನಿಷ್ಠ 50 ಸಾವಿರ ಮಂದಿಯ ತಪಾಸಣೆ ಆಗಬೇಕು. ಪ್ರತಿ ಹತ್ತು ಲಕ್ಷ ಮಂದಿಗೆ 200 ಮಂದಿಯ ತಪಾಸಣೆ ನಡೆಸಬೇಕು. ತುಂಬಾ ಕೆಟ್ಟಪರಿಸ್ಥಿತಿ ಎದುರಾಗಲಿದೆ ಎಂದು ಊಹಿಸಿಕೊಂಡು ಯೋಜನೆ ರೂಪಿಸಬೇಕು.

ಚಾರ್ಮಾಡಿ ಘಾಟಿಯಲ್ಲಿ ವಾಹನಗಳಿಲ್ಲ, ಒಂಟಿ ಸಲಗ ಸಂಚಾರ

ಹಾಟ್‌​ಸ್ವಾಟ್‌ ಜಿಲ್ಲೆ​ಗಳು ಇವು

ಸೋಂಕು ಹೆಚ್ಚಾಗಿ ಹರಡಿರುವ ಹಾಟ್‌ಸ್ಪಾಟ್‌ಗಳಲ್ಲಿ ಲಾಕ್‌ಡೌನ್‌ ತೆರವಿಗೆ ಕೇಂದ್ರ ಸರ್ಕಾರ ಒಪ್ಪುವ ಸಾಧ್ಯತೆ ಕಮ್ಮಿ. ಹೀಗಾಗಿ ಬೆಂಗಳೂರು ನಗರ (63 ಕೇಸು), ಮೈಸೂರು (35), ದಕ್ಷಿಣ ಕನ್ನಡ (12), ಕಲಬುರಗಿ (9), ಬೀದರ್‌ (10), ಚಿಕ್ಕಬಳ್ಳಾಪುರ (8), ಉತ್ತರ ಕನ್ನಡ (9) ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿಕೆ ಸಾಧ್ಯತೆ ಇದೆ.

"

ಪ್ರಮುಖ ಶಿಫಾರಸು

ಏಪ್ರಿಲ್‌ 14ರ ಬಳಿಕ ಲಾಕ್‌ಡೌನ್‌ ಏಕಾಏಕಿ ತೆರವುಗೊಳಿಸಬಾರದು.

- ಲಾಕ್‌ಡೌನ್‌ ತೆರವುಗೊಳಿಸುವುದಾದರೇ ಹಾಟ್‌ಸ್ಪಾಟ್‌ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಯಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ವಿನಾಯಿತಿ ನೀಡಬಹುದು.

- ಲಾಕ್‌ಡೌನ್‌ ತೆರವು ಮಾಡಿದರೂ ಅಂತರ್ಜಿಲ್ಲಾ ಪ್ರಯಾಣ ಸಂಪೂರ್ಣ ನಿರ್ಬಂಧ ಮುಂದುವರೆಸಬೇಕು.

- ಶಾಲಾ-ಕಾಲೇಜುಗಳನ್ನು ಮೇ31 ರವರೆಗೆ ಮುಚ್ಚಬೇಕು.

- ಗುಟ್ಕಾ, ಚ್ಯುಯಿಂಗ್‌ ಗಮ್‌ ಉಗುಳುವುದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಲಿದೆ. ಹೀಗಾಗಿ ಗುಟ್ಕಾ ಹಾಗೂ ಚ್ಯುಯಿಂಗ್‌ ಗಮ್‌ ನಿಷೇಧಿಸಬೇಕು.

ನಮ್ಮ ಪ್ರಕಾರ ಹಾಟ್‌ಸ್ಪಾಟ್‌ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಕಡ್ಡಾಯವಾಗಿ ಮುಂದುವರೆಸಬೇಕಾಗುತ್ತದೆ. ಉಳಿದೆಡೆ ಹಂತ-ಹಂತವಾಗಿ ತೆರವುಗೊಳಿಸಬಹುದು. ಅಂತರ್ಜಿಲ್ಲಾ ಪ್ರಯಾಣಕ್ಕೆ ಅವಕಾಶ ನೀಡಬಾರದು.

ಟಾಸ್ಕ್ ಫೋರ್ಟ್‌ ತಂಡದಿಂದ ಸಿಎಂಗೆ ವರದಿ: ಲಾಕ್‌ಡೌನ್ ತೆರವು ಮಾಡ್ಬೇಕಾ? ಬೇಡ್ವಾ?

- ಡಾ.ಸಿ.ಎನ್‌. ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ ಹಾಗೂ ತಜ್ಞರ ಸಮಿತಿ ಸದಸ್ಯರು.

ತಜ್ಞರ ಸಮಿತಿಯು ಲಾಕ್‌ಡೌನ್‌ ಸಡಿಲಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದಾರೆ. ಈ ಬಗ್ಗೆ ಮೋದಿ ಅವರ ಜತೆ ಮುಖ್ಯಮಂತ್ರಿಗಳು ಸಂವಾದ ನಡೆಸಲಿದ್ದಾರೆ. ಏ.12ಕ್ಕೆ ಒಂದು ಸ್ಪಷ್ಟಚಿತ್ರಣ ಸಿಗಲಿದೆ.

- ಎಸ್‌. ಸುರೇಶ್‌ಕುಮಾರ್‌, ಸಚಿವ

"

Follow Us:
Download App:
  • android
  • ios