Asianet Suvarna News Asianet Suvarna News

ದಿವ್ಯಾಂಗರಿಗೆ ಗುಡ್ ನ್ಯೂಸ್ ನೀಡಿದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ

* ದಿವ್ಯಾಂಗರಿಗೆ ಗುಡ್ ನ್ಯೂಸ್ ನೀಡಿದ  ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ 
* ದಿವ್ಯಾಂಗರ ಶೇ 4ರಷ್ಟು ಬಜೆಟ್‌ ಅನುದಾನ ಸಮರ್ಪಕ ಬಳಕೆ;
* ಪ್ರತಿಯೊಬ್ಬರಿಗೂ ಬಿಪಿಎಲ್‌ ಕಾರ್ಡ್‌ 
* ಸಕ್ಷಮ ದಿವ್ಯಾಂಗರ ರಾಷ್ಟ್ರೀಯ ಕೋವಿಡ್‌ ಸಹಾಯವಾಣಿಗೆ ಚಾಲನೆ ನೀಡಿದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ 

dr cn ashwath narayana launches helpline for disabled people rbj
Author
Bengaluru, First Published Jun 21, 2021, 6:59 PM IST

ಬೆಂಗಳೂರು, (ಜೂನ್.21):: ದಿವ್ಯಾಂಗರ ಕಲ್ಯಾಣ, ಸಬಲೀಕರಣಕ್ಕಾಗಿ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಮುಂಗಡಪತ್ರದಲ್ಲಿ ಹಂಚಿಕೆಯಾಗಿರುವ ಶೇ.4ರಷ್ಟು ಅನುದಾನವನ್ನು ಸದ್ಬಳಕೆ ಮಾಡಲು ಎಲ್ಲ ಕ್ರಮ ವಹಿಸಲಾಗುವುದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. 

ಬೆಂಗಳೂರಿನಲ್ಲಿ ಸೋಮವಾರ ದಿವ್ಯಾಂಗರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ʼಸಕ್ಷಮʼ  ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ದಿವ್ಯಾಂಗರ ರಾಷ್ಟ್ರೀಯ ಕೋವಿಡ್‌ ಸಹಾಯವಾಣಿಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. 

ಎಲ್ಲ ದಿವ್ಯಾಂಗರು ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರು. ಎಲ್ಲರೂ ತಪ್ಪದೇ ಪಡೆದುಕೊಳ್ಳಬೇಕು. ಪಡೆದುಕೊಳ್ಳದೆ ಇರುವವರಿಗೆ ವಿತರಿಸುವ ಕಾರ್ಯಕ್ರಮವನ್ನು ಶೀಘ್ರವೇ ಹಮ್ಮಿಕೊಳ್ಳಲಾಗುವುದು. ಆರೋಗ್ಯ, ವಸತಿ ಇತ್ಯಾದಿಗಳಿಗೆ ಬಿಪಿಎಲ್‌ ಕಾರ್ಡ್‌ ಹೆಚ್ಚು ಸಹಾಯಕವಾಗುತ್ತದೆ ಎಂದು ತಿಳಿಸಿದರು,

ದಿವ್ಯಾಂಗರ ನೆರವಿಗೆ ಪ್ರತಿಯೊಬ್ಬರೂ ಧಾವಿಸಲೇಬೇಕು. ನಮ್ಮ ಆದ್ಯತೆಗಳಲ್ಲಿ ಮೊತ್ತ ಮೊದಲ ಸ್ಥಾನ ಇವರೇ ಆಗಿರಬೇಕು. ಸರಕಾರವೂ ಇದನ್ನೇ ನಂಬಿ ಕೆಲಸ ಮಾಡುತ್ತಿದೆ ಎಂದ ಅವರು, ದಿವ್ಯಾಂಗರಿಗೆ ಮನೆ, ನಿವೇಶನ, ಆರೋಗ್ಯ ಸೇವೆ ಸೇರಿದಂತೆ ಅಗತ್ಯವಾದ ಎಲ್ಲ ಅನುಕೂಲಗಳನ್ನು ಮಾಡಿಕೊಡಲು ಕ್ರಮ ಕೈಗೊಂಡಿದೆ. ಅಗತ್ಯ ಅನುದಾನವನ್ನೂ ಸರಕಾರ ನೀಡಿದೆ. ಅಲ್ಲದೆ, ದಿವ್ಯಾಂಗರ ಕಲ್ಯಾಣಕ್ಕಾಗಿ ರೂಪಿಸಿರುವ ಎಲ್ಲ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದು ಹೇಳಿದರು. 

ʼಸಕ್ಷಮʼ ಅತ್ಯಂತ ಸ್ಮರಣೀಯ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿಕೊಂಡು ಬರುತ್ತಿದೆ. ಇದರ ಬೆನ್ನೆಲುಬಾಗಿ ವೈಯಕ್ತಿಕವಾಗಿ ನಾನು ಮತ್ತು ಸರಕಾರವೂ ಇರುತ್ತದೆ. ದಿವ್ಯಾಂಗರು ಕೋವಿಡ್‌  ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ಅಥವಾ ಲಸಿಕೆ ಪಡೆಯಬೇಕಾದರೆ ನೇರವಾಗಿ ಬಂದು ಪಡೆಯಬಹುದು ಅಥವಾ ಅವರ ಸ್ಥಳದ ಮಾಹಿತಿ ಕೊಟ್ಟರೆ ಅವರಿದ್ದಲ್ಲಿಗೆ ಹೋಗಿ ಪರೀಕ್ಷೆ ನಡೆಸುವ ಇಲ್ಲವೆ ಲಸಿಕೆ ಕೊಡುವ ಕೆಲಸ ಮಾಡಲಾಗುವುದು. ಇವರನ್ನು ಆದ್ಯತಾ ವಲಯದಲ್ಲಿ ಸೇರಿಸಲಾಗಿದೆ ಎಂದರು.

ಯೂತ್‌ ಫಾರ್‌ ಸೇವಾ ಸಂಘಟನೆಯ ಸಂಸ್ಥಾಪಕ ವೆಂಕಟೇಶ ಮೂರ್ತಿ, ಸಕ್ಷಮದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಸುಕುಮಾರ್‌, ಸಕ್ಷಮದ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಾ.ಸಂತೋಷ್‌, ಐಡಿಯಾ ಸಂಸ್ಥೆಯ ಸಂಸ್ಥಾಪಕ ಮಲ್ಲಿಕಾರ್ಜುನ ಐತ ಹಾಗೂ ಸಕ್ಷಮದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ಡಾ.ಸುಧೀರ್‌ ಪೈ ಮುಂತಾದವರು ಈ ವರ್ಚುಯಲ್‌  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಸಹಾಯವಾಣಿ ಸಂಖ್ಯೆ: 0120 690 4999.

Follow Us:
Download App:
  • android
  • ios