* ಪಾದಯಾತ್ರೆಯ ಬ್ಯಾನರ್, ಫ್ಲೆಕ್ಸ್ ತೆಗೆಸಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಕಿಡಿಕಿಡಿ* ಬಿಜೆಪಿ, ಸರ್ಕಾರ, ಬಿಬಿಎಂಪಿ ಪೊಲೀಸರಿಗೆ ಎಚ್ಚರಿಕೆ* ಬಿಜೆಪಿಯ ಎಲ್ಲ ನಾಯಕರ ಬ್ಯಾನರ್ ಕಿತ್ತೊಗೆಯುತ್ತೇವೆ
ಬೆಂಗಳೂರು(ಮಾ.02): ‘ಮೇಕೆದಾಟು ಪಾದಯಾತ್ರೆಯ(Mekedatu Padayatra) ಬ್ಯಾನರ್ಗಳನ್ನು ತೆಗೆಸಿದರೆ ಯಡಿಯೂರಪ್ಪ ಆದಿಯಾಗಿ ಬಿಜೆಪಿಯ ಎಲ್ಲ ನಾಯಕರ ಬ್ಯಾನರ್ಗಳನ್ನೂ ಕಿತ್ತೊಗೆಯುತ್ತೇವೆ. ನಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ಪಟ್ಟಿನಮ್ಮ ಬಳಿ ಇದೆ. ಸಮಯ ಬಂದಾಗ ಅವರಿಗೆ ಉತ್ತರ ಸಿಗುತ್ತದೆ. ಈ ಕೇಸು, ಜೈಲಿಗೆಲ್ಲಾ ನಾವು ಹೆದರಲ್ಲ. ನಮ್ಮ ಕಾರ್ಯಕರ್ತರಿಗೆ ನೀಡುತ್ತಿರುವ ತೊಂದರೆಗಳ ವಿಚಾರವಾಗಿಯೇ ಹೋರಾಟ ಶುರು ಮಾಡಬೇಕಾಗುತ್ತದೆ..ಎಚ್ಚರ..! ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಆಡಳಿತ ಪಕ್ಷ ಬಿಜೆಪಿ(BJP), ರಾಜ್ಯ ಸರ್ಕಾರ, ಪೊಲೀಸ್(Police) ಹಾಗೂ ಬಿಬಿಎಂಪಿ(BBMP) ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆ.
ಮಂಗಳವಾರ ಮೂರನೇ ದಿನದ ಪಾದಯಾತ್ರೆ ಆರಂಭಕ್ಕೂ ಮುನ್ನ ಕೆಂಗೇರಿ ಬಳಿಯ ಪೂರ್ಣಿಮಾ ಕನ್ವೆನ್ಷನ್ ಸೆಂಟರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರು(Bengaluru) ಜನರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರ ಬದುಕಿನ ರಕ್ಷಣೆಗಾಗಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪೊಲೀಸ್ ಅಧಿಕಾರಿಗಳು, ಪಾಲಿಕೆ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ನಮ್ಮ ಬ್ಯಾನರ್ ಕಿತ್ತು ಹಾಕಿದ್ದಾರೆ. ನಮ್ಮ ಕೆಲ ನಾಯಕರು ಅದನ್ನು ತಡೆದಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪನವರ ಹುಟ್ಟುಹಬ್ಬ, ಅಶ್ವತ್ಥ್ ನಾರಾಯಣ, ಸೋಮಣ್ಣನವರ ಹುಟ್ಟುಹಬ್ಬ, ಬೊಮ್ಮನಹಳ್ಳಿಯಲ್ಲಿ ಮುಖ್ಯಮಂತ್ರಿ ಅವರ ಕಾರ್ಯಕ್ರಮ ಆಯೋಜಿಸಿ ಬ್ಯಾನರ್(Banner) ಹಾಕಿದ್ದಾರೆ. ಅವುಗಳನ್ನು ಏಕೆ ತೆರವು ಮಾಡಿಲ್ಲ? ನಮ್ಮ ಬ್ಯಾನರ್ಗಳನ್ನು ತೆಗೆಸುವ ಕೆಲಸ ಮಾಡಿದರೆ, ನಾವೂ ನಮ್ಮ ಕಾರ್ಯಕರ್ತರಿಗೆ ಹೇಳಿ ಯಡಿಯೂರಪ್ಪ ಅವರಿಂದ ಹಿಡಿದು ಬಿಜೆಪಿಯ ಎಲ್ಲಾ ನಾಯಕರ ಬ್ಯಾನರ್ಗಳನ್ನೂ ಕಿತ್ತು ಹಾಕಬೇಕಾಗುತ್ತದೆ ಎಂದು ಹರಿಹಾಯ್ದರು.
Mekedatu Padayatra: ಕಾರಜೋಳಗೆ ಹೋರಾಟ ಮಾಡಿ ಗೊತ್ತಿಲ್ಲ: ಡಿಕೆಶಿ
ಕೋವಿಡ್(Covid19) ನಿರ್ಬಂಧಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಸೂಚಿಸಿದ್ದರೂ ನಮ್ಮ ಹೋರಾಟ ತಡೆಯಲು ರಾಜ್ಯ ಸರ್ಕಾರ(Government of Karnataka) ನಿಯಮಗಳನ್ನು ಸಡಿಲಗೊಳಿಸಿಲ್ಲ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಮುಖಂಡರು, ಕಾರ್ಯಕರ್ತರ ಮೇಲೆ ಅನಗತ್ಯವಾಗಿ ದೂರು ದಾಖಲಿಸುತ್ತಿದ್ದಾರೆ. ಬಿಜೆಪಿಯವರಿಗೆ ರಾಜಕಾರಣ ಮುಖ್ಯ. ಬಿಜೆಪಿಯವರಿಗಿಲ್ಲದ ನಿರ್ಬಂಧ ನಮಗ್ಯಾಕೆ ವಿಧಿಸಲಾಗುತ್ತಿದೆ. ನಮ್ಮ ಹೋರಾಟ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ಈ ಕೇಸ್, ಜೈಲಿಗೆಲ್ಲ ನಾವು ಹೆದರುವುದಿಲ್ಲ. ರಾಜ್ಯದಲ್ಲಿ ಅವರು ಏನೆಲ್ಲಾ ಮಾಡಿದ್ದಾರೆ ಎಂದು ಕಾರ್ಯಕರ್ತರಿಂದ ಪಟ್ಟಿತರಿಸಿ ಅವರ ಮುಂದೆ ಇಡುತ್ತೇನೆ. ಈ ವಿಚಾರವಾಗಿಯೇ ಹೋರಾಟ ಮಾಡುತ್ತೇವೆ ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ
ಪಾಲಿಕೆ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಅವರೇ ಪಾಲಿಕೆ ಕಚೇರಿಗೆ ಬಿಜೆಪಿ ಕಚೇರಿ ಎಂದು ಬೋರ್ಡ್ ಹಾಕಿ. ಆಗ ನಾವು ಅದು ಬಿಜೆಪಿ ಕಚೇರಿ ಎಂದು ಸಂತೋಷ ಪಡುತ್ತೇವೆ. ಪೊಲೀಸ್ ಅಧಿಕಾರಿಗಳು ಸಮವಸ್ತ್ರ ತೆಗೆದು ಬಿಜೆಪಿಯವರ ಬಟ್ಟೆತೊಟ್ಟುಕೊಳ್ಳಲಿ ಎಂದು ಶಿವಕುಮಾರ್ ಕಿಡಿಕಾರಿದರು.
ಅಧಿಕಾರಿಗಳು ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಲಿ, ಸೂರ್ಯ ಹುಟ್ಟುತ್ತಾನೆ ಮುಳುಗುತ್ತಾನೆ. ಯಾರೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ನಮಗೆ ತೊಂದರೆ ನೀಡುತ್ತಿರುವ ಪೋಲೀಸರ ಪಟ್ಟಿನಮ್ಮ ಬಳಿ ಇದೆ. ಸಮಯ ಬಂದಾಗ ಉತ್ತರ ನೀಡುತ್ತೇನೆ. ನಮಗೆ ತೊಂದರೆ ನೀಡಬೇಕು ಅಂತಲೇ ಕೇಸ್ ದಾಖಲಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಕೇವಲ 40 ಜನ ಮಾತ್ರ ಭಾಗವಹಿಸಿದ್ದೇವೆಯೇ? ಭಾಗವಹಿಸಿರುವ ಎಲ್ಲ 10 ಸಾವಿರ ಜನರ ಪಟ್ಟಿನೀಡುತ್ತೇವೆ. ಕೇಸ್ ದಾಖಲಿಸಲಿ ಎಂದು ಸವಾಲು ಎಸೆದರು.
ಟ್ರಾಫಿಕ್ ಜಾಂ ಬಗ್ಗೆ ಜನರ ಕ್ಷಮೆ ಕೇಳುತ್ತೇನೆ
ಮೇಕೆದಾಟು ಪಾದಯಾತ್ರೆಯಿಂದ ಮೂರು ದಿನ ನಗರದ ಕೆಲ ಭಾಗಗಳಲ್ಲಿ ಟ್ರಾಫಿಕ್ ಜಾಮ್ನಿಂದ(Traafic Jam) ಜನರಿಗೆ ಸಮಸ್ಯೆಯಾಗಲಿದೆ. ಇದಕ್ಕಾಗಿ ನಾನು ಜನರ ಕ್ಷಮೆ ಕೇಳುತ್ತೇನೆ. ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ.
ನನ್ನ ಬಗ್ಗೆ ಮಾತನಾಡೋವಾಗ ಎಚ್ಚರಿಕೆಯಿಂದ ಮಾತನಾಡಿ: ಕಾಂಗ್ರೆಸ್ ವಿರುದ್ಧ ಕಾರಜೋಳ ಗರಂ
ಆದರೆ, ನಮ್ಮ ಹೋರಾಟದಿಂದ ಮೂರು ದಿನ ಟ್ರಾಫಿಕ್ ಜಾಮ್ ಸಮಸ್ಯೆಯಾದರೂ ಮುಂದಿನ ದಿನಗಳಲ್ಲಿ ಮೇಕೆದಾಟು ಯೋಜನೆ ಜಾರಿಯಾದರೆ ಭವಿಷ್ಯದ 50 ವರ್ಷಗಳ ಕಾಲ ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಲಿದೆ. ಇದಕ್ಕಾಗಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಸಹಿಡಿಕೊಂಡು ನಮ್ಮ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ನಾಳಿನ ಸಭೆಗೆ ಮೆಟ್ರೋದಲ್ಲೇ ಬನ್ನಿ!
ಪಾದಯಾತ್ರೆಯ ಕೊನೆಯ ದಿನವಾದ ಗುರುವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಗೆ ನಮ್ಮ ಎಲ್ಲ ಕಾರ್ಯಕರ್ತರೂ ಟ್ರಾಫಿಕ್ ಸಮಸ್ಯೆ ತಡೆಯಲು ಮೆಟ್ರೋದಲ್ಲಿ ಆಗಮಿಸಿ ಮೆಟ್ರೋ ಮೂಲಕವೇ ವಾಪಸ್ ತೆರಳುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ.
