ಸುಧಾಕರ್, ಅಶೋಕ್ ಸಭೆ ಮಾಡೋದು ಬಿಟ್ಟು ಕೆಲಸ ಮಾಡಲಿ: ಡಿಕೆಶಿ
ರಾಜ್ಯದಲ್ಲಿ ಎಷ್ಟು ಐಸಿಯು ಹಾಸಿಗೆ ಇವೆ? ಯಾವ ಆಸ್ಪತ್ರೆಯಲ್ಲಿ ಏನೇನಿದೆ, ಏನೇನಿಲ್ಲ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡೋಣ| ಎಲ್ಲೆಡೆ ಹಾಸಿಗೆ ಸಮಸ್ಯೆ ಇದೆ. ಆಕ್ಸಿಜನ್ ಕೊರತೆ ಇದೆ. ವೆಂಟಿಲೇಟರ್ ಸಿಗ್ತಿಲ್ಲ. ರೆಮ್ಡಿಸಿವಿರ್ ಔಷಧ ಕಾಳಸಂತೆಯಲ್ಲಿ ಮಾರಾಟ: ಡಿಕೆಶಿ|
ಬೆಂಗಳೂರು(ಏ. 21): ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರು ಬರೀ ಸಭೆ ಮಾಡುವುದು, ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ ಓಡಾಡುವುದು ಬಿಟ್ಟು ಕೋವಿಡ್ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಷ್ಟು ಐಸಿಯು ಹಾಸಿಗೆ ಇವೆ? ಯಾವ ಆಸ್ಪತ್ರೆಯಲ್ಲಿ ಏನೇನಿದೆ, ಏನೇನಿಲ್ಲ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡೋಣ ಎಂದು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಆರೋಗ್ಯ ವಿಚಾರಿಸಿದ ಡಿಕೆ ಶಿವಕುಮಾರ್!
ಎಲ್ಲೆಡೆ ಹಾಸಿಗೆ ಸಮಸ್ಯೆ ಇದೆ. ಆಕ್ಸಿಜನ್ ಕೊರತೆ ಇದೆ. ವೆಂಟಿಲೇಟರ್ ಸಿಗ್ತಿಲ್ಲ. ರೆಮ್ಡಿಸಿವಿರ್ ಔಷಧ ಕಾಳಸಂತೆಯಲ್ಲಿ ಮಾರಾಟವಾಡುತ್ತಿದೆ. ಈ ಸತ್ಯವನ್ನೇ ಮಾಧ್ಯಮಗಳು ತೋರಿಸುತ್ತಿದ್ದರೆ, ಸಚಿವರು ಮಾಧ್ಯಮಗಳು ಜನರನ್ನು ಹೆದರಿಸುತ್ತಿವೆ ಅಂತಾ ಹೇಳಿಕೆ ಕೊಟ್ಟಿದ್ದಾರೆ. ಸಚಿವರಾಗಿ ನೀವು ಜನರಿಗೆ ಯಾವ ರೀತಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೀರಿ? ಆರೋಗ್ಯ ಹಾಗೂ ಕಂದಾಯ ಸಚಿವರು ಬರೀ ಸಭೆ ಮಾಡಿಕೊಂಡು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರೆ ಆಗೋದಿಲ್ಲ ಎಂದು ಲೇವಡಿ ಮಾಡಿದ್ದಾರೆ.