ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಡಾ.ಜಿ. ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಹಾಗೂ 12 ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ವಿದ್ಯಾರ್ಥಿ ನಾಯಕತ್ವದಿಂದ ಮುಖ್ಯಮಂತ್ರಿ ಹುದ್ದೆಯವರೆಗಿನ ಅವರ ರಾಜಕೀಯ ಪ್ರಯಾಣದ ಸಂಪೂರ್ಣ ಚಿತ್ರಣ ಇಲ್ಲಿದೆ.

ರಾಜ್ಯದಲ್ಲಿ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನವನ್ನು ಸ್ವೀಕರಿಸಿದರು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಸಿಎಂ ಪ್ರತಿಜ್ಞಾವಿಧಿ ಬೋಧಿಸಿದರು. ಡಿ.ಕೆ. ಶಿವಕುಮಾರ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ ಹಾಗೂ 12 ಇತರೆ ಶಾಸಕರು ಸಚಿವರಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ ಮುಖ್ಯಮಂತ್ರಿಗಳಾದ ತೆಲಂಗಾಣದ ರೇವಂತ್‌ ರೆಡ್ಡಿ, ಹಿಮಾಚಲಪ್ರದೇಶದ ಸುಖ್‌ವಿಂದರ್‌ ಸಿಂಗ್‌ ಸುಖು, ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್‌, ಸಂಸದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜತೆಗೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌, ಬೌದ್ಧ ಧರ್ಮದ 55 ಸರ್ವಧರ್ಮ ಗುರುಗಳಿಗೆ ಆಹ್ವಾನಿಸಲಾಗಿತ್ತು. ಆದಿ ಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಮಹಾಬೋಧಿ ಸೊಸೈಟಿಯ ಆನಂದ ಬಿಕ್ಕು, ಆರ್ಚಬಿಷಪ್ ಡಾ.ಪೀಟರ್ ಮಚಾಡೋ, ಖ್ವಾಜಾ ಬಂದೇನವಾಜ್‌ ದರ್ಗಾದ ಧರ್ಮಗುರು ಸೇರಿ ಹಲವರು ಆಗಮಿಸಿದ್ದರು.

ಸಿಎಂ ಹಾಗೂ ಸಚಿವರ ಪಟ್ಟಿ (13+1):

ಶ್ರೀ ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ)

ಡಾ. ಜಿ. ಪರಮೇಶ್ವರ್ (ಉಪ ಮುಖ್ಯಮಂತ್ರಿ )

ಶ್ರೀ ಕೆ.ಎಚ್. ಮುನಿಯಪ್ಪ

ಶ್ರೀ ಕೆ.ಜೆ. ಜಾರ್ಜ್

ಶ್ರೀ ಎಂ.ಬಿ. ಪಾಟೀಲ್

ಶ್ರೀ ರಾಮಲಿಂಗಾರೆಡ್ಡಿ

ಶ್ರೀ ಸತೀಶ್ ಜಾರಕಿಹೊಳಿ

ಶ್ರೀ ಕೃಷ್ಣ ಬೈರೇಗೌಡ

ಶ್ರೀ ಪ್ರಿಯಾಂಕ್ ಖರ್ಗೆ

ಶ್ರೀ ಯು.ಟಿ. ಖಾದರ್

ಶ್ರೀ ಈಶ್ವರ್ ಖಂಡ್ರೆ

ಶ್ರೀ ಯತೀಂದ್ರ ಸಿದ್ದರಾಮಯ್ಯ

ಶ್ರೀ ಬೈರತಿ ಸುರೇಶ್

ಶ್ರೀ ಶರಣಪ್ರಕಾಶ್ ಪಾಟೀಲ್

ಜಾತಿವಾರು ಪ್ರಾತಿನಿಧ್ಯದ ಲೆಕ್ಕಾಚಾರ ಇಲ್ಲಿದೆ:

ಲಿಂಗಾಯತ: 3 ಸ್ಥಾನಗಳು

ಒಕ್ಕಲಿಗ (ಡಿಕೆಶಿ ಸೇರಿ): 3 ಸ್ಥಾನಗಳು

ದಲಿತ (SC): 3 ಸ್ಥಾನಗಳು

ಕುರುಬ: 2 ಸ್ಥಾನಗಳು

ಹಿಂದುಳಿದ ವರ್ಗ (ST): 1 ಸ್ಥಾನ

ಮುಸ್ಲಿಂ: 1 ಸ್ಥಾನ

ಕ್ರಿಶ್ಚಿಯನ್: 1 ಸ್ಥಾನ

ವಿದ್ಯಾರ್ಥಿ ನಾಯಕತ್ವದಿಂದ ಮುಖ್ಯಮಂತ್ರಿ ಹುದ್ದೆವರೆಗೆ ಡಿಕೆಶಿ...

ವಿದ್ಯಾರ್ಥಿ ನಾಯಕತ್ವದಿಂದ ಮುಖ್ಯಮಂತ್ರಿ ಹುದ್ದೆಯವರೆಗೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪ್ರಯಾಣ ಅಪ್ರತಿಮವಾದುದು. 1981ರಲ್ಲಿ ಎನ್‌ಎಸ್‌ಯುಐ ಮೂಲಕ ರಾಜಕೀಯ ಪ್ರವೇಶಿಸಿದ ಇವರು, 1985ರಲ್ಲಿ ಎಚ್.ಡಿ. ದೇವೇಗೌಡರ ವಿರುದ್ಧದ ಸ್ಪರ್ಧೆಯಲ್ಲಿ ಸೋತರೂ ಅವರ ಮೆಚ್ಚುಗೆ ಗಳಿಸಿದ್ದರು. 1989ರಲ್ಲಿ ಸಾತನೂರಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಇವರು, 1991ರಲ್ಲಿ ಬಂಗಾರಪ್ಪ ಸಂಪುಟದಲ್ಲಿ ಕಿರಿಯ ವಯಸ್ಸಿನಲ್ಲೇ ಸಚಿವರಾದರು. 1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದರು.

ಅಪ್ಪ-ಮಗನನ್ನು ಸೋಲಿಸಿದ ಡಿ.ಕೆ. ಶಿವಕುಮಾರ್

1999ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸಿ ಸತತ ಮೂರನೇ ಬಾರಿ ಶಾಸಕರಾದರು. 1999ರ ಚುನಾವಣೆಯಲ್ಲಿ ಎಸ್.ಎಂ. ಕೃಷ್ಣ ಅವರಿಗೆ ಸಾರಥಿಯಾಗಿ ನಿಂತು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಿದರು. 2006ರಲ್ಲಿ ತೇಜಸ್ವಿನಿ ಗೌಡ ಅವರನ್ನು ದೇವೇಗೌಡರ ವಿರುದ್ಧ ನಿಲ್ಲಿಸಿ ಗೆಲ್ಲಿಸುವ ಮೂಲಕ 'ಮಹಾ ತಂತ್ರಗಾರ' ಎನಿಸಿಕೊಂಡರು. ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿಕೆಶಿ, ಹಿಂದುಳಿದಿದ್ದ ಕನಕಪುರವನ್ನು ಅಭಿವೃದ್ಧಿಯ 'ಕನಕಗಿರಿ'ಯನ್ನಾಗಿ ಪರಿವರ್ತಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಇವರು, ಉಪಮುಖ್ಯಮಂತ್ರಿ ಹುದ್ದೆಯ ಬಳಿಕ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕಗೊಳ್ಳುತ್ತಿದ್ದಾರೆ. ಹಂತ ಹಂತವಾಗಿ ಅಡೆತಡೆಗಳನ್ನು ಮೆಟ್ಟಿ ಬೆಳೆದ ಇವರ ಬದುಕು ನಾಯಕತ್ವಕ್ಕೆ ಸಾಕ್ಷಿಯಾಗಿದೆ.