ರಾಜ್ಯದಲ್ಲಿ ಚೌತಿ ಹಬ್ಬಕ್ಕೆ ಎಷ್ಟುಗಾತ್ರದ ಗಣೇಶನ ಮೂರ್ತಿ ಇಡಬೇಕು, ಎಷ್ಟುದಿನ ಪೂಜಿಸಬೇಕು ಎಂದು ಹೇಳಲು ನೀವ್ಯಾರು? ಧರ್ಮಗಳ ಆಚರಣೆ ವಿಚಾರದಲ್ಲಿ ಜನರ ಭಾವನೆ ಕೆರಳಿಸಲು ಹೋಗಬೇಡಿ DKS

ಬೆಂಗಳೂರು (ಸೆ10): ರಾಜ್ಯದಲ್ಲಿ ಚೌತಿ ಹಬ್ಬಕ್ಕೆ ಎಷ್ಟುಗಾತ್ರದ ಗಣೇಶನ ಮೂರ್ತಿ ಇಡಬೇಕು, ಎಷ್ಟುದಿನ ಪೂಜಿಸಬೇಕು ಎಂದು ಹೇಳಲು ನೀವ್ಯಾರು? ಧರ್ಮಗಳ ಆಚರಣೆ ವಿಚಾರದಲ್ಲಿ ಜನರ ಭಾವನೆ ಕೆರಳಿಸಲು ಹೋಗಬೇಡಿ. ಕೂಡಲೇ 10-15 ದಿನ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

 ದೇವರು, ಪೂಜೆ ಎಂಬುದು ನಿಮ್ಮ ಆಸ್ತಿಯಲ್ಲ. ಜನರ ವೈಯಕ್ತಿಕ ನಂಬಿಕೆಗಳ ಜೊತೆ ಚೆಲ್ಲಾಟ ಆಡಬೇಡಿ ಎಚ್ಚರ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಮನೆಗಳ ಒಳಗೆ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿಗಿಂತ ಹೆಚ್ಚು ಗಾತ್ರದ ಮೂರ್ತಿ ಪ್ರತಿಷ್ಠಾಪಿಸಬಾರದು. 5 ದಿನಗಳಿಗಿಂತ ಹೆಚ್ಚು ದಿನ ಆಚರಣೆ ಮಾಡಬಾರದು ಎಂಬ ಸರ್ಕಾರದ ನಿರ್ಬಂಧಗಳ ಹಿನ್ನೆಲೆಯಲ್ಲಿ ಗುರುವಾರ ಗಣೇಶ ಮೂರ್ತಿಗಳ ತಯಾರಕರು, ಮಾರಾಟಗಾರರ ಜೊತೆ ಡಿ.ಕೆ.ಶಿವಕುಮಾರ್‌ ಸಂವಾದ ನಡೆಸಿದರು. 

ಮೂರ್ತಿ ತಯಾಕರ ಬದುಕಿನ ಜತೆ ಸರ್ಕಾರ ಚೆಲ್ಲಾಟ: ಡಿಕೆಶಿ

ಬಳಿಕ ಮಾತನಾಡಿದ ಅವರು, ಯಾವುದೇ ಧರ್ಮವಿರಲಿ ಅವರ ಆಚರಣೆಗಳ ವಿಚಾರದಲ್ಲಿ ಜನರ ಭಾವನೆಗಳನ್ನು ಕೆರಳಿಸಲು ಹೋಗಬೇಡಿ. ಎಷ್ಟುದೊಡ್ಡ ವಿಗ್ರಹ ಇಡಬೇಕು ಎಂದು ಹೇಳಲು ನೀವ್ಯಾರು? ಪೂಜೆ ಮಾಡುವುದು ಹಾಗೂ ದೇವರನ್ನು ಆರಾಧಿಸುವುದು ನಮ್ಮ ವೈಯಕ್ತಿಕ ವಿಚಾರ. ನಮ್ಮ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಬರಬೇಡಿ. ಮೂರ್ತಿಗಳ ಗಾತ್ರದ ಬಗ್ಗೆ ವಿಧಿಸಿರುವ ನಿರ್ಬಂಧ ತೆಗೆದು ಹಾಕಿ, 10-15 ದಿನಗಳ ಕಾಲ ಆಚರಣೆಗೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಆರ್ಥಿಕ ಪರಿಹಾರ ನೀಡಿ:

ಕಳೆದ ಎರಡು ವರ್ಷದಿಂದ ಗಣೇಶ ಮೂರ್ತಿಗಳ ತಯಾರಕರು, ಮಾರಾಟಗಾರರು, ಪೆಂಡಾಲ್‌, ಧ್ವನಿವರ್ಧಕ, ಆರ್ಕೆಸ್ಟ್ರಾ ಹೀಗೆ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಹಲವು ರಾಜ್ಯಗಳಲ್ಲಿ ಇವರಿಗೆ ಪರಿಹಾರ ಒದಗಿಸಲಾಗಿದೆ. ಆದರೆ, ರಾಜ್ಯದಲ್ಲಿ ಯಾರಿಗೂ ಪರಿಹಾರ ನೀಡಿಲ್ಲ. ಇದೀಗ ಏಕಾಏಕಿ 4 ಅಡಿಗಿಂತ ಎತ್ತರದ ಮೂರ್ತಿ ಮಾರಾಟ ಮಾಡಬಾರದು ಎಂದರೆ ಇವರೆಲ್ಲಾ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.