*   ಅಕ್ರಮಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿದ ಖುಷಿ*   ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಭೂರಿ ಭೋಜನ ಪ್ರಸ್ತಾಪ*   ಪಿಎಸ್‌ಐ ಹಗರಣ ಬಯಲಿಗೆಳೆದ ಕನ್ನಡಪ್ರಭ  

ಆನಂದ್‌ ಎಂ. ಸೌದಿ

ಯಾದಗಿರಿ(ಜು.10): ಪಿಎಸ್‌ಐ ನೇಮಕ ಅಕ್ರಮ ನಡೆಸಲು ಬೇಕಾದ ಅನುಕೂಲಕರ ವಾತಾವರಣ ಸೃಷ್ಟಿಸಿದ ಖುಷಿಯಲ್ಲಿ ಅಧಿಕಾರಿಗಳು, ಪರೀಕ್ಷಾ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ಕಲಬುರಗಿ ಜ್ಞಾನಜ್ಯೋತಿ ಶಾಲಾ ಪರೀಕ್ಷಾ ಕೇಂದ್ರದಲ್ಲಿ ದಿವ್ಯಾ ಹಾಗರಗಿ ಶೇಂಗಾ ಹೋಳಿಗೆ, ತುಪ್ಪದೂಟದ ಭೂರಿ ಭೋಜನ ನೀಡಿದ್ದರಂತೆ!

‘ಕನ್ನಡಪ್ರಭ’ ಬಯಲಿಗೆಳೆದ, 545 ಪಿಎಸ್‌ಐ ಹಗರಣದ ಕುರಿತು ಜು.5ರಂದು ನ್ಯಾಯಲಯಕ್ಕೆ ಸಲ್ಲಿಸಿದ 1974 ಪುಟಗಳ ಸುದೀರ್ಘ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಈ ಹೇಳಿಕೆಗಳನ್ನು ದಾಖಲಿಸಲಾಗಿದೆ.

PSI Scam: ನಾನು ತಪ್ಪು ಮಾಡಿಲ್ಲವೆಂದೇ ಅಮೃತ್‌ ಪಾಲ್‌ ವಾದ, ಸ್ನೇಹಿತನ ಮನೆಗೆ ಸಿಐಡಿ ದಾಳಿ

2021ರ ಅ.3ರಂದು ಪತ್ರಿಕೆ-1ರ ಪರೀಕ್ಷೆ ಮುಗಿದ ನಂತರ ಮಧ್ಯಾಹ್ನ ಊಟಕ್ಕೆ ಪರೀಕ್ಷಾ ಕರ್ತವ್ಯ ನಿರ್ವಹಿಸಲು ಬಂದಿದ್ದ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ವಿಶೇಷವಾಗಿ ಮಾಡಿಸಿದ್ದ ಶೇಂಗಾ ಹೋಳಿಗೆ, ತುಪ್ಪ, ದಪಾಟಿ ಹಾಗೂ ಚಿತ್ರಾನ್ನದ ವಿಶೇಷ ಭೋಜನವನ್ನು ಹಾಗರಗಿ ನೀಡಿದ್ದಾರೆ. ಅಚ್ಚರಿ ಎಂದರೆ, ಈ ಶಾಲೆಯ ಪ್ರಾಂಶುಪಾಲರಾಗಿ ಕಾಶಿನಾಥ್‌ ಚಿಳ್ಳಿ (ಆರೋಪಿ-16) ಇದ್ದಾಗ್ಯೂ ಕೂಡ ಅಕ್ರಮಕ್ಕೆ ಅನುಕೂಲವಾಗಲಿ ಅನ್ನೋ ಕಾರಣದಿಂದಾಗಿ, ಪೊಲೀಸ್‌ ಇಲಾಖೆಗೆ ನೀಡಿದ ಸಿಬ್ಬಂದಿ ಪಟ್ಟಿಯಲ್ಲಿ ದಿವ್ಯಾ ಹಾಗರಗಿ ‘ಪ್ರಾಂಶುಪಾಲೆ’ ಎಂದು ತಿಳಿಸಲಾಗಿತ್ತು. ಪ್ರತಿ ಪಿಎಸ್‌ಐ ಅಭ್ಯರ್ಥಿ ತಲಾ .25 ಲಕ್ಷ ಕೊಡುವ ಬಗ್ಗೆ ತೀರ್ಮಾನವಾಗಿತ್ತು. ಪತ್ರಿಕೆ 2ರ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆಯಾಗಿತ್ತು ಎಂದು ತಿಳಿದುಬಂದಿದೆ.