ಧರ್ಮಸ್ಥಳದಲ್ಲಿ ನೂರಾರು ಶವಗಳು ಪತ್ತೆಯಾದ ಪ್ರಕರಣದ ತನಿಖೆಗೆ ರಚನೆಯಾದ ಎಸ್‌ಐಟಿ ತಂಡದಿಂದ ಅಧಿಕಾರಿಗಳು ಹಿಂದೆ ಸರಿಯುತ್ತಿದ್ದಾರೆ. ಮಾಜಿ ವಿದ್ಯಾರ್ಥಿಯಾಗಿರುವ ಹಿನ್ನೆಲೆಯಲ್ಲಿ ತನಿಖೆಯಲ್ಲಿ ನಿಷ್ಪಕ್ಷಪಾತತೆ ಕಾಪಾಡುವುದು ಕಷ್ಟ ಎಂದು ಎಸ್ಪಿ ಸೈಮನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

ಧರ್ಮಸ್ಥಳ (ಜು.25): ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆ ಮಾಡಲು ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಆದರೆ, ಇದೀಗ ತನಿಖಾ ತಂಡದಲ್ಲಿರುವ ಒಬ್ಬಬ್ಬರೇ ಅಧಿಕಾರಿಗಳು ತಮ್ಮನ್ನು ತನಿಖಾ ತಂಡದಿಂದ ಕೈಬಿಡುವಂತೆ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ. ಈಗಾಗಲೇ ಐಪಿಎಸ್ ಅಧಿಕಾರಿ ಸೌಮ್ಯಲತಾ ಎಸ್‌ಐಟಿ ತಂಡದಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ಇದೀಗ ಎಸ್ಪಿ ಸೈಮನ್ ಕೂಡ ತಮ್ಮನ್ನು ತನಿಖಾ ತಂಡದಿಂದ ಕೈಬಿಡುವಂತೆ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಮಾಜಿ ವಿದ್ಯಾರ್ಥಿಯಾಗಿರುವ ಹಿನ್ನೆಲೆ:

ಸೈಮನ್ ಅವರು ಹಿಂದೆಗೆ ಧರ್ಮಸ್ಥಳ ಶಿಕ್ಷಣ ಸಂಸ್ಥೆಗೆ ಸೇರಿದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಹಿನ್ನಲೆ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲು ಅಡ್ಡಿಯಾಗಬಹುದು ಎಂಬ ಆತಂಕದಿಂದ ಅವರು ಈ ಮನವಿಯನ್ನು ಸಲ್ಲಿಸಿರುವುದಾಗಿ ಮೂಲಗಳು ತಿಳಿಸುತ್ತಿವೆ. ಎಸ್ಪಿಯ ಮನವಿ ಸದ್ಯಕ್ಕೆ ಸರ್ಕಾರದ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇದಕ್ಕೆ ಇನ್ನೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸರ್ಕಾರ ಈ ಕುರಿತು ನಿಗದಿತ ಸಮಯದಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಇನ್ನು ಧರ್ಮಸ್ಥಳದಲ್ಲಿ ಅನುಮಾನಾಸ್ಪದ ಶವಗಳ ಪತ್ತೆಹಚ್ಚು ಪ್ರಕರಣದ ತನಿಖೆ ಆರಂಭಕ್ಕೂ ಮುನ್ನವೇ ಹಲವು ಎಸ್‌ಐಟಿ ತಂಡದ ಅಧಿಕಾರಿಗಳು ತಮ್ಮನ್ನು ಕೈಬಿಡುವಂತೆ ಮನವಿ ಮಾಡುತ್ತಿರುವುದು ಸರ್ಕಾರಕ್ಕೆ ಚಿಂತನೆಯಾಗಿದೆ.

ರಾಜ್ಯ ಸರ್ಕಾರವು ಕಳೆದ ಭಾನುವಾರ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು. ಈ ತಂಡದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಎಂ.ಎನ್‌ ಅನುಚೇತ್, ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮ ಇದ್ದರು. ಸೌಮ್ಯಲತಾ ಅವರು ತಮ್ಮನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ಇದೀಗ ಮತ್ತೊಬ್ಬ ಅಧಿಕಾರಿ ಸೈಮನ್ ಕೂಡ ತಮ್ಮನ್ನು ಎಸ್‌ಐಟಿ ತಂಡದಿಂದ ಕೈಬಿಡಲು ಮನವಿ ಸಲ್ಲಿಸಿದ್ದಾರೆ.

ತನಿಖೆಗೆ ನಿಯೋಜನೆಗೊಂಡ 20 ಅಧಿಕಾರಿಗಳು ಯಾರು?

  1. ಸಿ.ಎ ಸೈಮನ್ – ಎಸ್‌ಪಿ, ಡಿಸಿಆರ್‌ಇ, ಮಂಗಳೂರು
  2. ಲೋಕೇಶ್ ಎ.ಸಿ – ಡಿಎಸ್‌ಪಿ, ಸಿಇಎನ್ ಪಿಎಸ್, ಉಡುಪಿ
  3. ಮಂಜುನಾಥ್ - ಡಿಎಸ್‌ಪಿ, ಸಿಇಎನ್ ಪಿಎಸ್, ದ.ಕ
  4. ಮಂಜುನಾಥ್ ಗೌಡ- ಪಿಐ ಶಿರಸಿ ಗ್ರಾಮಾಂತರ
  5. ಸವಿತ್ರು ತೇಜ್ ಪಿ.ಡಿ - ಸಿಪಿಐ, ಬೈಂದೂರು
  6. ಗುಣಪಾಲ್ ಜೆ. – ಪಿಎಸ್‌ಐ, ಮೆಸ್ಕಾಂ, ಮಂಗಳೂರು,
  7. ಸುಭಾಷ್ ಕಾಮತ್- ಎಎಸ್‌ಐ, ಉಡುಪಿ ಟೌನ್ ಪಿಎಸ್
  8. ಹರೀಶ್ ಬಾಬು- ಕಾಪು ಪಿಎಸ್‌
  9. ಪ್ರಕಾಶ್- ಮಲ್ಪೆ ವೃತ್ತ ಕಚೇರಿ
  10. ನಾಗರಾಜ್- ಕುಂದಾಪುರ ಟೌನ್ ಪಿಎಸ್
  11. ದೇವರಾಜ್- ಎಫ್ಎಂಎಸ್, ಚಿಕ್ಕಮಗಳೂರು
  12. ಮಂಜುನಾಥ್- ಪಿಐ, ಸಿಎಸ್‌ಪಿ
  13. ಸಂಪತ್ ಇ.ಸಿ- ಪಿಐ, ಸಿಎಸ್‌ಪಿ
  14. ಕುಸುಮಾಧರ್ ಕೆ - ಪಿಐ, ಸಿಎಸ್‌ಪಿ ಉಡುಪಿ
  15. ಕೋಕಿಲಾ ನಾಯಕ್- ಪಿಎಸ್‌ಐ, ಸಿಎಸ್‌ಪಿ
  16. ವಯ್ಲೆಟ್ ಫೆಮಿನಾ- ಪಿಎಸ್‌ಐ, ಸಿಎಸ್‌ಪಿ
  17. ಶಿವಶಂಕರ್- ಪಿಎಸ್‌ಐ, ಸಿಎಸ್‌ಪಿ
  18. ರಾಜ್ ಕುಮಾರ್ ಉಕ್ಕಲಿ- ಪಿಎಸ್‌ಐ ಶಿರಸಿ ಎನ್ಎಂ ಪಿಎಸ್
  19. ಸುಹಾಸ್ ಆರ್.- ಪಿಎಸ್‌ಐ, ಅಂಕೋಲಾ ಪಿ.ಎಸ್
  20. ವಿನೋದ್ ಎಸ್.ಕಲ್ಲಪ್ಪನವರ್- ಪಿಎಸ್‌ಐ ಮುಂಡಗೋಡ ಪಿಎಸ್