ಇಂದಿನಿಂದ 4 ದಿನ ಭಾರೀ ಮಳೆ ಸಾಧ್ಯತೆ
ರಾಜ್ಯಾದ್ಯಂತ ಸೆ. 2 ರಿಂದ 5ರವರೆಗೆ ಮುಂಗಾರು ಮತ್ತೆ ಆರ್ಭಟ| ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ| ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ|
ಬೆಂಗಳೂರು(ಸೆ.02): ರಾಜ್ಯಾದ್ಯಂತ ಸೆ. 2 ರಿಂದ 5ರವರೆಗೆ ಮುಂಗಾರು ಮತ್ತೆ ಆರ್ಭಟಿಸಲಿದ್ದು, ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಆರೆಂಜ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸೆ.3 ಮತ್ತು 4 ರಂದು ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಸೆ. 3ರಿಂದ 5 ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸೆ. 2ರಿಂದ 5 ರವರೆಗೆ ವ್ಯಾಪಕ ಮಳೆ ಬೀಳುವುದರಿಂದ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಇದೇ ವೇಳೆ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಾತ್ರ ಹೆಚ್ಚು ಮಳೆಯಾಗುವ ಸಂಭವವಿದೆ. ಈ ವೇಳೆ ಉಷ್ಣಾಂಶ ಗರಿಷ್ಠ 30ರಿಂದ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು : ಇನ್ನೂ ಎರಡು ದಿನ ಅಬ್ಬರ
ಎಲ್ಲೆಲ್ಲಿ ಮಳೆ?:
ಸೆ.1ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು 9 ಸೆಂ.ಮೀ, ಚಾಮರಾಜನಗರದ ಬೇಗೂರು 7, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಮತ್ತು ಮಂಡ್ಯದ ಮಳವಳ್ಳಿ ತಲಾ 7, ಚಾಮರಾಜನಗರ 6, ಮಂಡ್ಯ, ತುಮಕೂರು ಜಿಲ್ಲೆಯ ತಿಪಟೂರು 5, ಕೋಲಾರದ ಮಾಲೂರು, ಮೈಸೂರಿನ ಸರಗೂರು, ಮಂಡ್ಯದ ಮದ್ದೂರಿನಲ್ಲಿ 4 ಸೆಂ.ಮೀ ಮಳೆ ಬಿದ್ದಿದೆ.