Asianet Suvarna News Asianet Suvarna News

Muruga Shree: ಮುರುಘಾ ಶ್ರೀಗಳನ್ನು ಗಲ್ಲಿಗೇರಿಸಲು ಆಗ್ರಹ: ಚಿತ್ರದುರ್ಗದಲ್ಲಿ ಬಿಎಸ್‌ಪಿ ಬೃಹತ್ ಪ್ರತಿಭಟನೆ

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘರಾಜೇಂದ್ರ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ಗಲ್ಲಿಗೇರಿಸಬೇಕು ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕಾರ್ಯಕರ್ತರು ಇಂದು ಪ್ರತಿಭಟನೆ ಮಾಡಿದರು.

Demand Murughashree to be hanged BSP protest in Chitradurga sat
Author
First Published Dec 21, 2022, 4:11 PM IST

ಚಿತ್ರದುರ್ಗ (ಡಿ.21): ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠದ ವಿದ್ಯಾಸಂಸ್ಥೆಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘರಾಜೇಂದ್ರ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ಗಲ್ಲಿಗೇರಿಸಬೇಕು ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕಾರ್ಯಕರ್ತರು ಇಂದು ಪ್ರತಿಭಟನೆ ಮಾಡಿದರು.

ಸುಮಾರು 700 ವರ್ಷಗಳ ಇತಿಹಾಸವನ್ನು ಹೊಂದಿರುವ ಹಾಗೂ ಸಾರ್ವಜನಿಕ ಆಸ್ತಿಯಾಗಿರುವ ಮುರುಘಾ ಮಠವು ಧಾರ್ಮಿಕ, ಶೈಕ್ಷಣಿಕ ಕೇಂದ್ರವಾಗಿರುವ ಜೊತೆಗೆ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಸ್ಥಾನವಾಗಿಯೂ ಬೆಳೆಯುತ್ತಾ ಬಂದಿದೆ. ಆದರೆ, ಮುರುಘರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಶರಣರು ಮಠದ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದರ ಬಗ್ಗೆ ಇತ್ತೀಚೆಗೆ ಆರೋಪ ಕೇಳಿ ಬಂದಿದೆ. ಹಲವು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸಂಸ್ಥೆಯ ನೆರವು ಪಡೆದು ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು. ಇದರ ಬೆನ್ನಲ್ಲೇ ಮುರುಘಾ ಶ್ರೀಗಳ ಆರೋಪ ಸಾಬೀತಾದಲ್ಲಿ ಅವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. 

ಮುರುಘಾ ಶ್ರೀಗಳನ್ನು ವಿಕೃತಿ ಕಾಮಿ ಸ್ವಾಮಿಯನ್ನು ಯಾವುದೇ ಕಾರಣಕ್ಕೂ ನ್ಯಾಯಾಂಗ ಸುಮ್ಮನೆ ಬಿಡಬಾರದು. ಇವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸದೇ ಬಿಟ್ಟರೆ ಧಾರ್ಮಿಕ ಸಂಸ್ಥೆ ಹಾಗೂ ಮಠಗಳ ಮೂಲಕ ವಿದ್ಯಾಸಂಸ್ಥೆಗಳನ್ನು ನಡೆಸುವ ಸ್ವಾಮಿಗಳು ಕೂಡ ತಮ್ಮ ತೃಷೆ ತೀರಿಸಿಕೊಳ್ಳಲು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಇಂತಹ ಆಲೋಚನೆಯಲ್ಲಿ ಇರುವ ಎಲ್ಲರಿಗೂ ಎಚ್ಚರಿಕೆ ನೀಡುವಂತೆ ಮುರುಘಾ ಶ್ರೀಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಇನ್ನು ಅವರ ವಿರುದ್ಧ ಸಾಕ್ಷಿ ಹೇಳುತ್ತಿರುವ ಮಕ್ಕಳು ಹಾಗೂ ಇತರೆ ಸಾರ್ವಜನಿಕರಿಗೂ ಸರ್ಕಾರ ಮತ್ತು ನ್ಯಾಯಾಲಯದಿಂದ ರಿಕ್ಷಣೆ ಒದಗಿಸಬೇಕು. ಮಠದಲ್ಲಿ ಅಭ್ಯಾಸ ಮಾಡುತ್ತಿದ್ದ 84 ಮಕ್ಕಳಿಗೆ ರಕ್ಷಣೆ ನಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 

Muruga Mutt: ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯದಿದ್ದರೆ ಡಿ.26ರಿಂದ ಧರಣಿ: ಬಸವಪ್ರಭು ಶ್ರೀ

ಪ್ರಕರಣದಲ್ಲಿ ಹಲವು ತಿರುವು: ಇನ್ನು ಪೋಕ್ಸೋ ಪ್ರಕರಣದಡಿ ಮುರುಘಾ ಶ್ರೀಗಳು ಸೆ.1 ರಿಂದ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಆದರೆ, ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಮರುಘಾ ಮಠದ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಸ್ವಾಮೀಜಿ ಸೇರಿ ಹಲವು ಸ್ವಾಮೀಜಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮಠದ ಮಾಜಿ ಆಡಳಿತಾಧಿಕಾರಿ ಮಾಜಿ ಶಾಸಕ ಬಸವರಾಜನ್ ಅವರು ಕಾರಣ ಎಂದು ಅವರನ್ನು ಕೂಡ ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿತ್ತು. ಇನ್ನು ಶ್ರೀಗಳ ವಿರುದ್ಧ ಮಕ್ಕಳಿಗೆ ಸುಳ್ಳು ಪ್ರಕರಣ ದಾಖಲಿಸುವಂತೆ ಕುಮ್ಮಕ್ಕು ನೀಡಿದ ವಾರೋಪದ ಮೇಲೆ ಬಸವರಾಜನ್‌ ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮಠದ ಆಸ್ತಿ ರಕ್ಷಣೆಗೆ ಆಡಳಿತಾಧಿಕಾರಿ ನೇಮಕ: ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಬಂಧನವಾದ ಬೆನ್ನಲ್ಲೇ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಇತರೆ ಸಾರ್ವಜನಿಕ ಸಂಸ್ಥೆಗಳಿಂದ ಮುರುಘಾ ಶರಣರನ್ನು ಪೀಠಾಧಿಪತಿ ಸ್ಥಾನದಿಂದ ವಜಾಗೊಳಿಬೇಕು ಹಾಗೂ ಮಠದ ಆಸ್ತಿ ಸಂರಕ್ಷಣೆಗಾಗಿ ಆಡಳಿತಾಧಿಕಾರಿ ನೇಮಕ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಂದ ಎರಡು ಬಾರಿ ವರದಿಯನ್ನು ತರಿಸಿಕೊಂಡಿದ್ದ ಸರ್ಕಾರವು ಕಳೆದೊಂದು ವಾರದ ಹಿಂದೆ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್. ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯಾಗಿ ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ: Muruga Sree case: ಜೈಲು ಸೇರಿದ ಸೌಭಾಗ್ಯ ಬಗ್ಗೆ ಒಡನಾಡಿ ಸ್ಟ್ಯಾನ್ಲಿ ಬರೆದ ಪತ್ರ ವೈರಲ್

ಆಡಳಿತಾಧಿಕಾರಿ ಹಿಂಪಡೆಯಲು ಆಗ್ರಹ: ನಿನ್ನೆ ಮರುಘಾ ಮಠ ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಶ್ರೀಗಳೊಂದಿಗೆ ಸುಮಾರು ೩೦ಕ್ಕೂ ಅಧಿಕ ಮಠಗಳ ಮಠಾಧೀಶರು ಸಮಾಲೋಚನಾ ಸಭೆಯನ್ನು ಮಾಡಿದರು. ಈ ವೇಳೆ ಮುರುಘಾ ಮಠಕ್ಕೆ ರಾಜ್ಯ ಸರ್ಕಾರ ನಿಯೋಜನೆ ಮಾಡಿರುವ ಆಡಳಿತಾಧಿಕಾರಿ ಆದೇಶವನ್ನು ವಾಪಸ್‌ ಪಡೆದುಕೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿವಿಧ ಮಠಾಧಿಪತಿಗಳು ಕೈ ಮುಗಿದು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದರು. ಈ ಬಗ್ಗೆ ಮನವಿ ಮತ್ರವನ್ನು ಕೂಡ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಇನ್ನು ಆಡಳಿತಾಧಿಕಾರಿ ಆದೇಶ ಹಿಂಪಡೆಯದಿದ್ದರೆ ಡಿ.26ರಿಂದ ಮಠಾಧೀಶರು ಧರಣಿ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios