ದೇವೇಗೌಡರ ಕುಟುಂಬಕ್ಕೆ ನಾನು ಕೇಡು ಬಯಸಲ್ಲ, ಎಚ್ಚಿ ರೇವಣ್ಣ ಸ್ಥಿತಿ ನೋಡಿ ಬೇಸರವಾಗಿದೆ ಬ್ರದರ್ ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು ನುಂಗಲಿ: ಶಿವಕುಮಾರ್
ಬೆಂಗಳೂರು(ಮೇ.15): 'ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಪ್ರಕರಣದಲ್ಲಿ ನನ್ನ ಸಣ್ಣ ಪಾತ್ರವೂ ಇಲ್ಲ, ನನಗೆ ಸಂಬಂಧವೂ ಇಲ್ಲ. ದೇವೇಗೌಡರ ಕುಟುಂಬಕ್ಕೆ ಕೆಟ್ಟದಾಗಲಿ ಅಂತ ನಾನು ಬಯಸುವವನೂ ಅಲ್ಲ, ಈ ವಿಚಾರದಲ್ಲಿ ನನಗೂ ಬೇಸರವಿದೆ.' ತಮ್ಮ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿರುವ ಜೆಡಿಎಸ್ ಮುಖ್ಯಸ್ಥ ಎಚ್. ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
'ನನ್ನ ಬ್ರದರ್ ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು ನುಂಗಲಿ. ಅವರ ಆರೋಪಗಳಿಗೆ ಮುಂದಿನ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ' ಎಂದೂ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ನಿರ್ದೇಶಕನೂ ಅಲ್ಲ, ನಿರ್ಮಾಪಕನೂ ಅಲ್ಲ. ನಾನು ಕೇವಲ ಪ್ರದರ್ಶಕ ಅಷ್ಟೇ ಎಂದರು. ಈ ಪ್ರಕರಣದ ಬಗ್ಗೆ ಶಾಸಕರು, ಸಚಿವರಿಂದ ಮಾತನಾಡಿಸುತ್ತಿರುವವರು ಯಾರು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಹೇಳಿದ್ದಾರೆ ಎಂದಾಗ, ಈ ಪ್ರಕರಣದಲ್ಲಿ ಒಂದು ಸಣ್ಣ ಹಸ್ತಕ್ಷೇಪವಿದ್ದರೂ ಅದಕ್ಕೆ ಬೆಲೆ ತೆರಲು ನಾನು ಸಿದ್ಧ. ಬೇರೆ ಯವರಿಂದ ಮಾತನಾಡಿಸುವ, ಪ್ರತಿಭಟನೆ ಮಾಡಿಸುವ, ಬೇರೆಯವರ ಮೇಲೆ ಅನಗತ್ಯ ಆರೋಪ ಮಾಡುವ ಅಗತ್ಯ ನನಗಿಲ್ಲ. ನಾನು ಚುನಾವಣಾ ಪ್ರಚಾರದಲ್ಲಿನಿರತ ನಾಗಿದ್ದೇನೆ. ನಾನು ಒಂದು ರಾಜಕೀಯ ಪಕ್ಷದ ಅಧ್ಯಕ್ಷ. ಈಗ ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರಿಸಲಿ ಎಂದರು.
ಲೈಂಗಿಕ ಪ್ರಕರಣ: ಪ್ರಜ್ವಲ್ ಕೇಸ್ ತನಿಖೆ ಚುರುಕುಗೊಳಿಸಿ, ಸಿಎಂ ಸಿದ್ದರಾಮಯ್ಯ
ರೇವಣ್ಣ ಸ್ಥಿತಿ ನೋಡಿ ಬೇಸರ:
ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ರೇವಣ್ಣ ಅವರನ್ನು ಬಂಧಿಸಲಾಗಿದೆ ಎಂಬ ಆರೋಪ ಕುರಿತ ಪ್ರಶ್ನೆಗೆ, ರೇವಣ್ಣ ಅವರ ಪರಿಸ್ಥಿತಿ ನೋಡಿ ನನಗೂ ಬೇಸರವಾಗುತ್ತಿದೆ. ಅವರದು ದೊಡ್ಡ ಕುಟುಂಬ, ಆ ಕುಟುಂಬಕ್ಕೆ ಹೀಗಾಗಲಿ ಎಂದು ಬಯಸುವವನು ನಾನಲ್ಲ ಎಂದರು.
