ದಾವಣಗೆರೆಯಲ್ಲಿ 25 ವರ್ಷದ ಅಳಿಯ 55 ವರ್ಷದ ಅತ್ತೆಯೊಂದಿಗೆ ಓಡಿಹೋಗಿರುವ ಘಟನೆ ನಡೆದಿದೆ. ಮದುವೆಯಾಗಿ ಕೇವಲ ಎರಡು ತಿಂಗಳಿಗೆ ಈ ಘಟನೆ ನಡೆದಿದ್ದು, ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.  

ದಾವಣಗೆರೆ (ಜೂ.27): ಇಂಥ ಕೇಸ್‌ಗಳನ್ನ ಸಾಮಾನ್ಯವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಕೇಳುತ್ತಿದ್ದೆವು. ಆದರೆ, ಕರ್ನಾಟಕದಲ್ಲೂ ಇಂಥ ಕೇಸ್‌ಗಳು ಬರಲು ಆರಂಭವಾಗಿದೆ. ದಾವಣಗೆರೆಯಲ್ಲಿ 25 ವರ್ಷದ ಅಳಿಯನ ಜೊತೆ 55 ವರ್ಷದ ಅತ್ತೆ ಓಡಿಹೋಗಿರುವ ಘಟನೆ ನಡೆದಿದ್ದು, ಪತ್ನಿ ಪೊಲೀಸ್‌ ಠಾಣೆಯಲ್ಲಿ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.

ಮದುವೆಯಾದ ಎರಡೇ ತಿಂಗಳಿಗೆ ಅತ್ತೆ ಜೊತೆ ಪತಿ ಎಸ್ಕೇಪ್ ಆಗಿದ್ದು, ಪತ್ನಿ ಕಣ್ಣೀರಿಟ್ಟಿದ್ದಾಳೆ. ಅಳಿಯನಿಗೆ 25 ವರ್ಷ ಎನ್ನಲಾಗಿದ್ದು, ಅತ್ತೆ ಆತನಿಂಗ 30 ವರ್ಷ ಹಿರಿಯವರು ಅಂದರೆ 55 ವರ್ಷ ಎನ್ನಲಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

55 ವರ್ಷದ ಶಾಂತಾ ಎಂಬ ಮಹಿಳೆ ಜೊತೆ 25 ವರ್ಷದ ಗಣೇಶ್‌ ಎಸ್ಕೇಪ್‌ ಆಗಿದ್ದಾನೆ. ಗಣೇಶ್‌ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದವರು ಎನ್ನಲಾಗಿದೆ. ಮೇ 2ರಂದು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಪತ್ನಿಯನ್ನು ಬಿಟ್ಟು ಅತ್ತೆಯ ಜೊತೆ ಎಸ್ಕೇಪ್ ಆಗಿದ್ದಾನೆ.

ಇನ್ನು ಶಾಂತಾ ಎನ್ನುವವರು ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವರ ಎರಡನೇ ಪತ್ನಿ. 13 ವರ್ಷದ ಹಿಂದೆ ಮುದ್ದೇನಹಳ್ಳಿ ನಾಗರಾಜ್ ಎನ್ನುವವರ 2ನೇ ಪತ್ನಿಯಾಗಿ ಶಾಂತಾ ಮನೆಗೆ ಬಂದಿದ್ದರು. ನಾಗರಾಜ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ. ನಾಗರಾಜ್ ಜೊತೆ ಹಿರಿಯ ಮಗಳು ಹೇಮಾ ವಾಸವಿದ್ದರು.

ಎರಡು ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತಾ, ಮಗಳನ್ನು ಮದುವೆ ಮಾಡಿಕೊಡೋಣ ಮನೆ ಅಳಿಯ ಆಗಿ ಇರ್ತಾನೆ ಎಂದು ನಂಬಿಸಿದ್ದರು. ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶ ಜೊತೆ ಹಿರಿಯ ಮಗಳು ಹೇಮಾ ಜೊತೆ ನಾಗರಾಜ್‌ ವಿವಾಹ ಮಾಡಿದ್ದರು.

ಮದುವೆ ಮಾಡಿಕೊಟ್ಟ15 ದಿನಕ್ಕೆ ಗಣೇಶ್ ತನ್ನ ಮಲ ಅತ್ತೆ ಶಾಂತಾ ಜೊತೆ ಅಕ್ರಮ ಸಂಬಂಧ ಹೊಂದಿರೋದು ಬೆಳಕಿಗೆ ಬಂದಿದೆ. ಗಣೇಶ್ ಮೊಬೈಲ್‌ನಲ್ಲಿ ಮಲತಾಯಿ ಶಾಂತಾ ಕಳಿಸಿದ್ದ ಅಶ್ಲೀಲ ಮೆಸೇಜ್‌ಅನ್ನು ಹೇಮಾ ನೋಡಿದ್ದಾರೆ.

ತಕ್ಷಣ ಮೆಸೇಜ್‌ಗಳನ್ನು ತನ್ನ ತಂದೆ ನಾಗರಾಜ್‌ಗೆ ಹೇಮಾ ಫಾರ್ವರ್ಡ್‌ ಮಾಡಿದ್ದರು. ವಿಚಾರ ಗೊತ್ತಾಗುತ್ತಿದ್ದಂತೆ ಹಣ ಆಭರಣ ಕದ್ದು ಶಾಂತಾ ಅಳಿಯನ ಜೊತೆ ಎಸ್ಕೇಪ್ ಆಗಿದ್ದಾರೆ. ಪತ್ನಿ ಹೇಮಾಳನ್ನ ಬಸ್ ಸ್ಟಾಪ್‌ನಲ್ಲಿಯೇ ಬಿಟ್ಟು ಗಣೇಶ್‌ ಎಸ್ಕೇಪ್‌ ಆಗಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.