Asianet Suvarna News Asianet Suvarna News

ರಾಜ್ಯದಲ್ಲಿ 30 ಸಾವಿರ ದಾಟಿದ ಕೊರೋನಾ ಸಾವು

* ಬುಧವಾರ 16387 ಹೊಸ ಕೇಸು, 463 ಜನರ ಸಾವು
* ಪಾಸಿಟಿವಿಟಿ ಪ್ರಮಾಣ ಶೇ.11.22ಕ್ಕೆ ಇಳಿಕೆ
* ಇದುವರೆಗೆ ಒಟ್ಟು 2.99 ಕೋಟಿಗೂ ಹೆಚ್ಚು ಕೋವಿಡ್‌ ಪರೀಕ್ಷೆ 
 

Corona Death of Crossing 30 thousand in Karnataka grg
Author
Bengaluru, First Published Jun 3, 2021, 7:12 AM IST

ಬೆಂಗಳೂರು(ಜೂ.03): ರಾಜ್ಯದಲ್ಲಿ ಹೊಸ ಕೋವಿಡ್‌ ಸೋಂಕು ಪ್ರಕರಣಗಳು ತುಸು ಹೆಚ್ಚಾಗಿದ್ದು, ಬುಧವಾರ 16,387 ಮಂದಿಗೆ ಸೋಂಕು ದೃಢಪಟ್ಟ ವರದಿಯಾಗಿದೆ. ಒಂದೇ ದಿನ ಮತ್ತೆ 463 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈವರೆಗಿನ ಒಟ್ಟು ಸಾವಿನ ಸಂಖ್ಯೆ 30 ಸಾವಿರ ದಾಟಿದೆ.

ಮಂಗಳವಾರವಷ್ಟೇ 14,859 ಪ್ರಕರಣಗಳೊಂದಿಗೆ ಕಳೆದ ಒಂದೂವರೆ ತಿಂಗಳ ಬಳಿಕ ಹದಿನೈದು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿದ್ದವು. ಆದರೆ ಬುಧವಾರ ಪ್ರಕರಣಗಳ ಸಂಖ್ಯೆ ತುಸು ಹೆಚ್ಚಾಗಿದೆ. ಸೋಂಕು ಸಂಖ್ಯೆ ಕೊಂಚ ಹೆಚ್ಚಾದರೂ ಪಾಸಿಟಿವಿಟಿ ದರ ಇನ್ನಷ್ಟುಕಡಿಮೆಯಾಗಿದೆ. 1.45 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದ್ದು ಪಾಸಿಟಿವಿಟಿ ಶೇ.11.22ಕ್ಕೆ ಇಳಿಕೆಯಾಗಿದೆ.

ಇದೇ ದಿನ 21,199 ಮಂದಿ ಗುಣಮುಖರಾಗಿದ್ದು,ಸಕ್ರಿಯ ಪ್ರಕರಣಗಳ ಸಂಖ್ಯೆ 2.93 ಲಕ್ಷಕ್ಕೆ ಇಳಿದಿದೆ. ಆದರೆ, ಕೋವಿಡ್‌ ಸೋಂಕಿತರ ಮರಣ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಮಂಗಳವಾರ ಶೇ.2.82 ರಷ್ಟು ರಣ ಪ್ರಮಾಣ ದರ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಮರಣ ಸಂಖ್ಯೆ ಹೆಚ್ಚಿದ್ದು 307 ಮಂದಿ ಸಾವನ್ನಪ್ಪಿದ್ದಾರೆ.

'ಲಸಿಕೆ ತಗೊಂಡ್ರೆ ಮಕ್ಕಳಾಗಲ್ಲ' ವದಂತಿಗಳಿಂದ ದೊಡ್ಡ ಸಮಸ್ಯೆ

ರಾಜ್ಯದಲ್ಲಿ ಈವರೆಗೆ ಒಟ್ಟು 26.35 ಲಕ್ಷ ಮಂದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಈ ಪೈಕಿ 23.12 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಇದುವರೆಗಿನ ಒಟ್ಟು ಸಾವಿನ ಸಂಖ್ಯೆ 30,017ಕ್ಕೇರಿದೆ. ಇದುವರೆಗೆ ಒಟ್ಟು 2.99 ಕೋಟಿಗೂ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ 4095 ಪ್ರಕರಣಗಳು, ಮೈಸೂರಿನಲ್ಲಿ 1687, ಬೆಳಗಾವಿ 1006, ತುಮಕೂರು 882 ಪ್ರಕರಣಗಳು ದಾಖಲಾಗಿವೆ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 79ರಿಂದ ಗರಿಷ್ಠ 636 ಪ್ರಕರಣಗಳ ವರೆಗೆ ಸೋಂಕು ದೃಢಪಟ್ಟಿವೆ. ಇನ್ನು ಸಾವಿನ ಸಂಖ್ಯೆ ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಬೆಳಗಾವಿಯಲ್ಲಿ 17, ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ತಲಾ 12, ಶಿವಮೊಗ್ಗದಲ್ಲಿ 10 ಸಾವಿನ ಪ್ರಕರಣಗಳು ವರದಿಯಾಗಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios