ರಾಜ್ಯ ತೀವ್ರ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿದ್ದು ಇದೇ ಸಮಯದಲ್ಲಿ ಜಗದೀಶ್ ಶೆಟ್ಟರ್ ಕುಟುಂಬ ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. 

ಬೆಂಗಳೂರು [ನ.01] : ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹೊತ್ತಿನಲ್ಲಿಯೇ ಬೃಹತ್‌ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಕುಟುಂಬ ಸಮೇತರಾಗಿ ವಿದೇಶಕ್ಕೆ ತೆರಳಲು ಮುಂದಾಗಿರುವುದಕ್ಕೆ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಚೀನಾ ದೇಶದ ಎಂಟು ವಿವಿಧ ಕೈಗಾರಿಕೆಯ ಪ್ರತಿನಿಧಿಗಳು ರಾಜ್ಯದ ವಿವಿಧ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಬಂಧ ಜಗದೀಶ್‌ ಶೆಟ್ಟರ್‌ ಅವರನ್ನು ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಈ ವೇಳೆ ಚೀನಾ ದೇಶದ ಪ್ರತಿನಿಧಿಗಳು ಆಹ್ವಾನಿಸಿದ್ದರು. ಈ ಆಹ್ವಾನದ ಮೇರೆಗೆ ನ.5ರಿಂದ ಚೀನಾಕ್ಕೆ ತೆರಳಲು ನಿರ್ಧರಿಸಿದ್ದರು. ಅಲ್ಲಿಂದ ಬ್ರಿಟನ್‌ಗೂ ತೆರಳುವ ಉದ್ದೇಶವಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಸಚಿವರು ವಿದೇಶ ಪ್ರವಾಸ ಕೈಗೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ, ಅಂತಿಮವಾಗಿ ಶೆಟ್ಟರ್‌ ತಮ್ಮ ಪ್ರವಾಸ ಮುಂದೂಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.