ರಾಜ್ಯದಲ್ಲಿ ಜಪಾನ್ ಮಾದರಿ ಟ್ರಕ್ ಟರ್ಮಿನಲ್ ನಿರ್ಮಾಣ: ವೀರಯ್ಯ
* ವಾಯು ಮಾಲಿನ್ಯ, ಅಪಘಾತ ತಡೆ ಉದ್ದೇಶ
* ಹೊಸಪೇಟೆ, ಹುಬ್ಬಳ್ಳಿ, ಮೈಸೂರು, ದಾಸನಪುರದಲ್ಲಿ ಹೊಸ ಟರ್ಮಿನಲ್ ನಿರ್ಮಾಣ
* 500 ಕೋಟಿ ರು. ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ
ದೆಹಲಿ(ಜು.10): ವಾಹನ ದಟ್ಟಣೆ, ರಸ್ತೆ ಅಪಘಾತ, ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಜಪಾನ್ ಮಾದರಿಯಲ್ಲಿ ರಾಜ್ಯ ವಿವಿಧೆಡೆ ಟ್ರಕ್ ಟ್ರರ್ಮಿನಲ್ ನಿರ್ಮಾಣ ಮಾಡಲಾಗುವುದು ಎಂದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ (ಡಿಡಿಯುಟಿಟಿಎಲ್) ಅಧ್ಯಕ್ಷ ಡಿ.ಎಸ್.ವೀರಯ್ಯ ತಿಳಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುವುದು ನಮ್ಮ ಉದ್ದೇಶ. ಬೆಂಗಳೂರಿನ ದಾಸನಪುರ ಟ್ರಕ್ ಟರ್ಮಿನಲ್ ನಿರ್ಮಾಣವಾಗಿದೆ. ವಾಹನ ದಟ್ಟಣೆ, ರಸ್ತೆ ಅಪಘಾತ ತಡೆಯುವುದು, ವಾಯುಮಾಲಿನ್ಯ ನಿಯಂತ್ರಣಕ್ಕೆ ಜಪಾನ್ ಮಾಡಲ್ ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ. ಈ ಬಗ್ಗೆ ಜಪಾನ್ ಪ್ರವಾಸದಲ್ಲಿ ಅಧ್ಯಯನ ಮಾಡಿದ್ದೇನೆ ಎಂದರು.
ಜೂ. 07 ರ ನಂತರ ಹೆದ್ದಾರಿಗಳಲ್ಲಿನ ಹೊಟೇಲ್ಗಳಿಗೆ ಷರತ್ತು ಬದ್ಧ ಅನುಮತಿ..?
ನಮ್ಮ ರಾಜ್ಯದಲ್ಲಿ ಮಾಡೆಲ್ ಟರ್ಮಿನಲ್ ನಿರ್ಮಾಣ ಮಾಡುವುದು ನಮ್ಮ ಮುಖ್ಯ ಉದ್ದೇಶ. ಹೊಸಪೇಟೆ, ಹುಬ್ಬಳ್ಳಿ, ಮೈಸೂರು, ದಾಸನಪುರದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಬೇಕು. ಒಂದು ಟರ್ಮಿನಲ್ನಲ್ಲಿ 1500 ಟ್ರಕ್ಗಳು ನಿಲುಗಡೆ ಆಗುತ್ತವೆ. ಈಗಾಗಲೇ ಜಮೀನು ಖರೀದಿ ಕೆಲಸ ಮುಗಿದಿದೆ. ಯಶವಂತಪುರ, ಮೈಸೂರು, ಧಾರವಾಡ, ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಣೆ ಆಗುತ್ತಿದೆ ಎಂದು ತಿಳಿಸಿದರು.
ಮುಂದಿನ ಹಂತಗಳಲ್ಲಿ ವಿಜಯಪುರ, ಹರಿಹರ, ಮಂಗಳೂರು, ಶಿವಮೊಗ್ಗ, ಹಿರಿಯೂರು, ಬೀದರ್, ಕಲಬುರಗಿ, ಚಿತ್ರದುರ್ಗಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶವಿದೆ. 500 ಕೋಟಿ ರು. ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅನುದಾನದ ಆಧಾರದ ಮೇಲೆ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.