Asianet Suvarna News Asianet Suvarna News

ರಾಷ್ಟ್ರೀಯ ಹೆದ್ದಾರಿಯ 24 ಸ್ಥಳಗಳಲ್ಲಿ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ: ಸಚಿವ ಸತೀಶ್‌ ಜಾರಕಿಹೊಳಿ

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ಯಲ್ಲಿ ಬರುವ 24 ಗ್ರಾಮಗಳ ವ್ಯಾಪ್ತಿಯಲ್ಲಿ ಪುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. 

Construction of foot over bridge at 24 places on National Highway Says Minister Satish Jarkiholi gvd
Author
First Published Dec 7, 2023, 9:08 PM IST

ಮಂಡ್ಯ (ಡಿ.07): ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ಯಲ್ಲಿ ಬರುವ 24 ಗ್ರಾಮಗಳ ವ್ಯಾಪ್ತಿಯಲ್ಲಿ ಪುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ರಸ್ತೆ ದಾಟಲು ತೀವ್ರ ಅನಾನೂಕುಲ ಆಗುತ್ತಿರುವುದು, ವಿವಿಧ ಸ್ಥಳಗಳಲ್ಲಿ ಪುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಬೆಳಗಾವಿ ಅಧಿವೇಶನದ ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡರು ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ರಾಮನಗರ ಜಿಲ್ಲೆಯ ಕಣಮಿಣಕಿ, ಮಂಚನಾಯಕನಹಳ್ಳಿ, ಕಲ್ಲುಗೊಪ್ಪಹಳ್ಳಿ, ಆಲತ್ತೂರು ಹೊಸದೊಡ್ಡಿ, ಮಾದಪುರ, ದಬನಗುಂಡಾ, ಮೊಬ್ಬಲಗೆರೆ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ, ಅಗರಲಿಂಗನದೊಡ್ಡಿ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ, ಗೆಜ್ಜಲಗೆರೆ, ಕೆ.ಎಂ.ಎಫ್. ಗೆಜ್ಜಲಗೆರೆ, ಮಂಡ್ಯ ತಾಲೂಕಿನ ಬಿ.ಗೌಡಗೆರೆ, ಬೂದನೂರು (2), ಕಾಳೇನಹಳ್ಳಿ (2), ರಾಗಿಮುದ್ದನಹಳ್ಳಿ, ಸಿದ್ದಾಪುರ, ಶ್ರೀರಂಗಪಟ್ಟಣದ ಗಣಂಗೂರು, ಗೌಡಹಳ್ಳಿ, ಮೈಸೂರು ಜಿಲ್ಲೆಯ ಬ್ರಹ್ಮಾಪುರ, ಕಳಸ್ತವಾಡಿ ಮತ್ತು ಸಿದ್ದಲಿಂಗಪುರ ಗ್ರಾಮಗಳಲ್ಲಿ ಪುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ್ದಾರೆ.

ಅಂಬೇಡ್ಕರ್ ಮೀಸಲು ಮಾತ್ರವಲ್ಲ, ಮೂಲಭೂತ ಹಕ್ಕು ನೀಡಿದ್ದಾರೆ: ಬರಗೂರು ರಾಮಚಂದ್ರಪ್ಪ

ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಇಕ್ಕೆಲಗಳಲ್ಲಿನ ಡ್ರೈನೇಜ್ ಕಾಮಗಾರಿಗಳು ಅಪೂರ್ಣ, ರೋಡ್ ಹಂಪ್ಸ್ ಅವೈಜ್ಞಾನಿಕ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಸರಿಪಡಿಸುವ ಕೆಲಸವನ್ನು ತ್ವರಿತವಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಮಂಡ್ಯ ಜಿಲ್ಲೆಯ ಕೋಡಿಶೆಟ್ಟಿಪುರ, ಗಣಂಗೂರು ಮತ್ತು ಇಂಡುವಾಳು ಗ್ರಾಮಗಳಲ್ಲಿ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಅಪೂರ್ಣವಾದ ಚರಂಡಿ ನಿರ್ಮಾಣ ಕಾಮಗಾರಿಯನ್ನು ರಿಯಾಯಿತಿದಾರರಿಂದ ಈಗಾಗಲೇ ಆರಂಭಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಅಲ್ಲದೇ ಅಂಡರ್ ಪಾಸ್ ಸ್ಥಳಗಳ ಬಳಿ ಸರ್ವೀಸ್ ರಸ್ತೆಯಲ್ಲಿನ ಅವೈಜ್ಞಾನಿಕ ರಸ್ತೆ ಹುಬ್ಬುಗಳನ್ನು ಗುರುತಿಸುವುದು ಮತ್ತು ಸರಿಪಡಿಸುವ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚಿಸಿ ಶೀಘ್ರದಲೇ ಆರಂಭಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ದಲಿತ ಸಿಎಂಗೆ ಜಾತಿ ವ್ಯವಸ್ಥೆಯೇ ಅಡ್ಡಗಾಲು: ಡಾ.ಪಿ.ಮೂರ್ತಿ ಬೇಸರ

ಮಂಡ್ಯ ಜಿಲ್ಲೆಯ ಮದ್ದೂರು, ಉಮ್ಮಡಹಳ್ಳಿ ಗೇಟ್, ಇಂಡುವಾಳು, ಸುಂಡಹಳ್ಳಿ, ರಾಗಿಮುದ್ದನಹಳ್ಳಿ, ಗರುಡನಉಕ್ಕಡ ಈ ಸ್ಥಳಗಳನ್ನು ಅಪಘಾತ ಸಂಭವಿಸಬಹುದಾದ ಸ್ಥಳಗಳು ಎನ್ನಲಾಗಿದೆ. ಈ ಸ್ಥಳಗಳಲ್ಲಿ ಸರಾಸರಿ ಎತ್ತರ ಹೆಚ್ಚಿಸುವುದರ ಜೊತೆಗೆ (raising of median height) ಹೆಚ್ಚುವರಿ ಸೂಚನಾ ಫಲಕಗಳು ಮತ್ತು ಇತರೆ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆಯನ್ನು 2023ರ ನವೆಂಬರ್ ನಲ್ಲಿ ನೀಡಲಾಗಿದೆ. 2024ರ ಜನವರಿಯಲ್ಲಿ ಕೆಲಸ ಆರಂಭಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪರಿಷತ್ ನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದರು.

Follow Us:
Download App:
  • android
  • ios