ಕರ್ನಾಟಕದಾದ್ಯಂತ 493 ನಿರ್ಜೀವ ಕೆರೆ ಜಾಗದಲ್ಲಿ 52,000 ಮನೆ ನಿರ್ಮಾಣ: ಸಚಿವ ಸೋಮಣ್ಣ
ಸರ್ಕಾರದಿಂದ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಸ್ಥಳೀಯವಾಗಿ ಲಭ್ಯವಿರುವ ಹಾಗೂ ವಸತಿ ಯೋಗ್ಯವಾಗಿರುವ ಸರ್ಕಾರಿ ಜಮೀನುಗಳನ್ನು ಉಚಿತವಾಗಿ ಮನೆ ನಿರ್ಮಾಣ ಯೋಜನೆಗೆ ಉಚಿತವಾಗಿ ಮಂಜೂರು ಮಾಡಲಾಗುವುದು: ವಸತಿ ಸಚಿವ ವಿ. ಸೋಮಣ್ಣ
ವಿಧಾನಪರಿಷತ್(ಫೆ.23): ರಾಜ್ಯಾದ್ಯಂತ 493 ನಿರ್ಜೀವ ಕೆರೆಗಳನ್ನು ವಶಕ್ಕೆ ಪಡೆದು 52 ಸಾವಿರ ಮನೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು. ಕಾಂಗ್ರೆಸ್ನ ಕೆ. ಅಬ್ದುಲ್ ಜಬ್ಬಾರ್, ಜೆಡಿಎಸ್ನ ಕೆ.ಎ. ತಿಪ್ಪೇಸ್ವಾಮಿ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದಿಂದ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಸ್ಥಳೀಯವಾಗಿ ಲಭ್ಯವಿರುವ ಹಾಗೂ ವಸತಿ ಯೋಗ್ಯವಾಗಿರುವ ಸರ್ಕಾರಿ ಜಮೀನುಗಳನ್ನು ಉಚಿತವಾಗಿ ಮನೆ ನಿರ್ಮಾಣ ಯೋಜನೆಗೆ ಉಚಿತವಾಗಿ ಮಂಜೂರು ಮಾಡಲಾಗುವುದು. ಆದರೆ ಮಂಜೂರು ಮಾಡಲಾದ ಸರ್ಕಾರಿ ಜಮೀನುಗಳ ಪೈಕಿ ವ್ಯಾಜ್ಯ ಮುಕ್ತ ಹಾಗೂ ತಾಂತ್ರಿಕವಾಗಿ ನಿರ್ಮಾಣಕ್ಕೆ ಯೋಗ್ಯವಾಗಿರುವ ಜಮೀನುಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದರು.
ವಿವಿಧ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಿಂದ ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಒಟ್ಟು 33 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಮಾಡುವ ಯೋಜನೆಯಡಿ 52 ಸಾವಿರ ಮನೆ ನಿರ್ಮಾಣವಾಗಿದ್ದು, ಉಳಿದ 48 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಾಚ್ರ್ ಅಂತ್ಯದ ವೇಳೆಗೆ 8 ಸಾವಿರ ಮನೆ ನೀಡಲಾಗುವುದು ಎಂದು ತಿಳಿಸಿದರು.
Bengaluru: ನಾಳೆ ಗೋವಿಂದರಾಜ ನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ
ಬಡ್ಡಿ ದರ ಕಡಿಮೆಗೆ ಯತ್ನ
ಮನೆ ನಿರ್ಮಾಣಕ್ಕೆ ಹಾಲಿ ನೀಡುತ್ತಿರುವ ಸಾಲಕ್ಕೆ ಬಡ್ಡಿ ಪ್ರಮಾಣ ಕಡಿಮೆ ಮಾಡಲು ಚರ್ಚಿಸಲಾಗಿದೆ. ಈಗಿನ ಬಡ್ಡಿ ದರಕ್ಕಿಂತ ಶೇ. 2ರಷ್ಟುಕಡಿಮೆ ಮಾಡಲು ಬ್ಯಾಂಕ್ಗಳ ಜೊತೆ ಚರ್ಚಿಸಲಾಗುತ್ತಿದೆ ಸಚಿವ ವಿ. ಸೋಮಣ್ಣ ತಿಳಿಸಿದರು.
ಜೆಡಿಎಸ್ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ 1.50 ಲಕ್ಷ ರು. ಸಹಾಯಧನ ನೀಡುತ್ತಿದೆ. ಈ ಹಿಂದೆ ಮೊತ್ತ ಹೆಚ್ಚಿಸುವಂತೆ ಮನವಿ ಮಾಡಿಕೊಂಡ ಸಂದರ್ಭದಲ್ಲಿ ಮೊತ್ತ ಹೆಚ್ಚಳ ಇಡೀ ದೇಶಕ್ಕೆ ಅನ್ವಯ ಮಾಡಬೇಕಾಗುತ್ತದೆ. ಆದ್ದರಿಂದ ಹೆಚ್ಚಳ ಕಷ್ಟಸಾಧ್ಯ ಎಂದು ಹೇಳಿತ್ತು. ಹೀಗಾಗಿ ನಗರ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳುವುದು ಕಷ್ಟಕರವಾಗಿದೆ. ಹೀಗಾಗಿ ಈ ಯೋಜನೆಯನ್ನು ರಾಜ್ಯ ಸರ್ಕಾರದ ವಿವಿಧ ನಗರ ವಸತಿ ಯೋಜನೆಗಳೊಂದಿಗೆ ಸಮನ್ವಯಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಆರ್ಥಿಕ ನೆರವು ನೀಡಲು ಇದ್ದ ನಿರ್ಬಂಧಗಳನ್ನು ಸರಳೀಕರಣ ಮಾಡಲಾಗಿದೆ. ಎಷ್ಟೇ ವಿಸ್ತೀರ್ಣದ ಮನೆ ನಿರ್ಮಾಣ ಮಾಡಿದರೂ ಅವರಿಗೆ ಆರ್ಥಿಕ ನೆರವು ಸಿಗಲಿದೆ ಎಂದು ಉತ್ತರಿಸಿದರು.