* ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ* ಸರ್ಕಾರದ ಕ್ರಮಕ್ಕೆ ಮಾಜಿ ಸಚಿವ ಯುಟಿ ಖಾದರ್ ಕಿಡಿ *  ಈ ರಾತ್ರಿ ಕರ್ಪ್ಯೂ ಲಾಜಿಕ್ ಏನು ಅನ್ನೋದೇ ಗೊತ್ತಾಗಲ್ಲ ಎಂದ ಖಾದರ್

ಬೆಂಗಳೂರು, (ಡಿ.29): ರಾಜ್ಯದಲ್ಲಿ ನೈಟ್ ಕರ್ಪ್ಯೂ(Night Curfew), 50-50 ರೂಲ್ಸ್ ವಿರುದ್ದ ಮಾಜಿ ಸಚಿವ ಯು.ಟಿ.ಖಾದರ್(UT Khadér) ಕಿಡಿಕಾರಿದ್ದು, ಒಮಿಕ್ರಾನ್ ಅನ್ನ ಸರ್ಕಾರ ತೋಳ ಬಂತು ತೋಳದ ರೀತಿ ಉಪಯೋಗಿಸ್ತಿದೆ ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರ ನೈಟ್ ಕರ್ಫ್ಯೂ ಹೇರಿಕೆ ಗೊಂದಲದ ಗೂಡಾಗಿದೆ.ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಾದ ಉರೂಸ್,ಭೂತದ ಕೋಲ,ಕ್ರಿಸ್ಮಸ್ ಸಂಭ್ರಮಾಚರಣೆ ಹಾಗೂ ಇದನ್ನೇ ಅವಲಂಬಿಸಿರುವ ವ್ಯಾಪಾರಸ್ಥರ ಮೇಲೆ ಪರಿಣಾಮ ಬೀರಿದೆ.ಕೋವಿಡ್ ನಿಯಂತ್ರಣ ಮಾಡಬೇಕು ನಿಜ. ಜೀವ ಕಾಪಾಡುವ ನೆಪವೊಡ್ಡಿ ಬಡವರ ಹೊಟ್ಟೆ ಮೇಲೆ ಹೊಡೆಯುವುದು ಎಷ್ಟು ಸರಿ. ಒಮೈಕ್ರಾನ್ ವೈರಸ್ ಅನ್ನ ತೋಳ ಬಂತು ತೋಳ ಎಂಬಂತೆ ಸರ್ಕಾರ ಉಪಯೋಗಿಸಿ ಕೊಳ್ಳುತ್ತಿರುವುದು ಜನರಿಗೇ ಮಾರಕ ಎಂದು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ.

Omicron Threat: ನೈಟ್‌ ಕರ್ಫ್ಯೂ ಅನಿವಾರ್ಯ: ಸಚಿವ ಆನಂದ್‌ ಸಿಂಗ್‌

ಇನ್ನು ಈ ಬಗ್ಗೆ ಖಾದರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದು, ಜನರನ್ನು ಭಯ ಮತ್ತು ಗೊಂದಲದಲ್ಲಿ ಜೀವಿಸುವಂತೆ ಮಾಡಿದ್ದಾರೆ. ವ್ಯಾಕ್ಸಿನೇಷನ್‌ ಮತ್ತು ಬೂಸ್ಟರ್ ಡೋಸ್ ಕಡೆಗೆ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ಕೆಲ ದಿನಗಳ ಹಿಂದೆ ಚುನಾವಣೆ, ರಾಜಕೀಯ ಸಭೆ ಎಲ್ಲವೂ ನಡೆದಿದೆ. ಆಗ ಯಾವುದೂ ಇರಲಿಲ್ಲ, ಈಗ ನಿರ್ಬಂಧ ವಿಧಿಸಿದ್ದಾರೆ. ಜನರು ವರ್ಷಾಂತ್ಯಕ್ಕೆ ತಿರುಗಾಡದಂತೆ, ಸುತ್ತಾಡದಂತೆ ತಡೆ ಮಾಡಿದ್ದಾರೆ. ಇದರ ಜೊತೆಗೆ ಹೊಟೇಲ್, ಕ್ಯಾಟರಿಂಗ್, ಲೈಟಿಂಗ್ ನವರು ಆದಾಯದ ಕಾಲದಲ್ಲಿ ರಾತ್ರಿ ಕರ್ಪ್ಯೂ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರಾತ್ರಿ ಕರ್ಪ್ಯೂ ಲಾಜಿಕ್ ಏನೂ ಅನ್ನೋದೇ ಗೊತ್ತಾಗಲ್ಲ. ಇದರ ಜೊತೆಗೆ ಉರೂಸ್, ಭೂತ ಕೋಲದ ವೇಳೆ ಅನೇಕ ಆರ್ಥಿಕ ಚಟುವಟಿಕೆ ನಡೆಯುತ್ತೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನ ಸರ್ಕಾರ ಅರ್ಥ ಮಾಡಿಕೊಳ್ಳಲಿ. ಲಾಜಿಕ್ ಮತ್ತು ಸೈಂಟಿಫಿಕ್ ವಿಷಯ ಅರ್ಥ ಮಾಡಿಕೊಳ್ಳಲಿ ಎಂದರು.

ಈ ಕರ್ಪ್ಯೂ ಈ ಒಂದು ಟೈಮ್ ನಲ್ಲಿ ಮಾತ್ರ ಯಾಕೆ? ಒಮಿಕ್ರಾನ್ ವಿಚಾರದಲ್ಲಿ ಜನರ ಬೆಂಬಲ ಇದೆ, ಆದ್ರೆ ಈಗ ಯಾಕೆ ಈ ನಿರ್ಬಂಧ? ವರ್ಷಾಂತ್ಯದ ಈ ಸಮಯದಲ್ಲೇ ಈ ನಿರ್ಬಂಧ ವಿಧಿಸಿರೋದು ಯಾಕೆ? ಹತ್ತು ದಿವಸದ ಹಿಂದೆಯೇ ಇವರು ಇದನ್ನು ಯಾಕೆ ಮಾಡಲಿಲ್ಲ?

ಮೊನ್ನೆ ತಾನೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದೆ, ರಾಜಕೀಯ ಪಕ್ಷದ ಕಾರ್ಯಕ್ರಮ ನಡೆದಿದೆ. ಆಗ ಸರ್ಕಾರ ಯಾವ ನಿರ್ಬಂಧವನ್ನೂ ತರಲಿಲ್ಲ ಯಾಕೆ? ಎಂದು ಪ್ರಶ್ನಿಸಿದರು.

ಸರ್ಕಾರ ಇವತ್ತು ಸಡನ್ ಕರ್ಪ್ಯೂ ಹಾಕಿರೋದು ಸರಿಯಲ್ಲ. ಜನಸಾಮಾನ್ಯರು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳ ಫೀಸ್ ಕಟ್ಟೋಕೂ ಅದೆಷ್ಟೋ ಜನರ ಕೈಯ್ಯಲ್ಲಿ ಆಗುತ್ತಿಲ್ಲ. ಅದೆಷ್ಟೋ ಸಂಸ್ಥೆಗಳಲ್ಲಿ ಕೆಲಸದವರ ಸಂಬಳ ಕೊಡಲು ಕೂಡ ಆಗುತ್ತಿಲ್ಲ ಎಂದು ಹೇಳಿದರು.

ಮೊದಲ ದಿನದ ನೈಟ್ ಕರ್ಫ್ಯೂ
ರಾಜ್ಯದಲ್ಲಿ ನಿನ್ನೆಯಿಂದ ನೈಟ್​ ಕರ್ಫ್ಯೂ ಜಾರಿಯಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ನೈಟ್​ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಟನ ನಡೆಸಿದ 39 ವಾಹನಗಳನ್ನು ಬೆಂಗಳೂರು ಪೊಲೀಸರು ಸೀಜ್​ ಮಾಡಿದ್ದಾರೆ.

ಮೊದಲು ವಾರ್ನಿಂಗ್ ನೀಡಿದರೂ ಮತ್ತೆ ರಸ್ತೆಗಿಳಿದವರ ಮೇಲೆ ಪೊಲೀಸರು ಗರಂ ಆಗಿದ್ದು, ಪಶ್ಚಿಮ ವಿಭಾಗದಲ್ಲಿ 37 ದ್ವಿಚಕ್ರ ವಾಹನಗಳು, 2 ಕಾರುಗಳನ್ನು ಜಪ್ತಿ ಮಾಡಿದ್ದಾರೆ.

ಇನ್ನು ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಇಂದಿನಿಂದ ಜಕ್ಕೂರು, ಕೆಆರ್ ಮಾರ್ಕೆಟ್ ಸೇರಿದಂತೆ ನಗರದ ಎಲ್ಲಾ ಫ್ಲೈ ಓವರ್ ಬಂದ್​ ಆಗಲಿದ್ದು, ಅಗತ್ಯವಿರುವ ವಾಹನಗಳು ನಿರ್ಧಿಷ್ಟ ಕಾರಣ ನೀಡಿ ಸರ್ವಿಸ್ ರೋಡ್ ಮುಖಾಂತರ ತೆರಳಲು ಅವಕಾಶ ನೀಡಲಾಗಿದೆ.