ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಬೆಲೆ ಏರಿಕೆ ಮಾಡುವುದಿಲ್ಲವೆಂದು ಭರವಸೆ ನೀಡಿತ್ತು, ಆದರೆ ಎರಡು ವರ್ಷಗಳಲ್ಲಿ ಹಾಲಿನ ದರವನ್ನು ಮೂರು ಬಾರಿ ಹೆಚ್ಚಿಸಿದೆ ಎಂದು ಆರ್. ಅಶೋಕ ಆರೋಪಿಸಿದ್ದಾರೆ. ಸರ್ಕಾರದಲ್ಲಿ ಕಳ್ಳರಿದ್ದಾರೆ, ಅಭಿವೃದ್ಧಿಗೆ ಹಣವಿಲ್ಲದೆ ಬೆಲೆ ಏರಿಕೆ ಮೂಲಕ ಲೂಟಿ ಮಾಡುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ 60% ಕಮಿಷನ್ ಪಡೆಯುತ್ತಿದೆ ಮತ್ತು ಸ್ಮಾರ್ಟ್ ಮೀಟರ್‌ನಲ್ಲಿ ಹಗರಣ ನಡೆದಿದೆ ಎಂದು ಅವರು ಟೀಕಿಸಿದ್ದಾರೆ. ವಕ್ಫ್ ತಿದ್ದುಪಡಿಯನ್ನು ಅವರು ಸ್ವಾಗತಿಸಿದ್ದಾರೆ.

ಬೆಂಗಳೂರು (ಏ.02): ಕಾಂಗ್ರೆಸ್ ಚುನಾವಣೆಗೆ ಮುನ್ನ ಬೆಲೆ ಏರಿಕೆ ಮಾಡಲ್ಲ, ಐದು ಗ್ಯಾರಂಟಿ ಕೊಡುತ್ತೇವೆ ಎಂದಿತ್ತು. ಆದರೆ ಎರಡು ವರ್ಷಗಳಲ್ಲಿ ಹಾಲಿನ ದರ ಮೂರು ಬಾರಿ ಏರಿಕೆ ಮಾಡಲಾಗಿದೆ. ಸರ್ಕಾರದಲ್ಲಿ 136 ಜನ ಕಳ್ಳರು ಇದ್ದಾರೆ. ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ. ಅದಕ್ಕಾಗಿ ಬೆಲೆ ಏರಿಕೆ ಮೂಲಕ ಲೂಟಿ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಆಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಜೆಟ್ ನಲ್ಲಿ ಯಾವುದೇ ತೆರಿಗೆ ತೋರಿಸದೆ ಇದೀಗ ಬೆಲೆ ಏರಿಕೆ ಮಾಡಲಾಗ್ತಿದೆ. ಐದು ಗ್ಯಾರಂಟಿಗಾಗಿ ಕರ್ನಾಟಕದ ಮನೆ ಮನೆ ಲೂಟಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಎಲ್ಲ ಸಚಿವರು ಅಂಗಡಿ ತೆರೆದಿದ್ದಾರೆ. ಇನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಸುಳ್ಳು ಆರೋಪ ಮಾಡಿದ್ದ 40% ಕಮೀಷನ್ ಆರೋಪಕ್ಕೆ ಸಾಕ್ಷಿ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಪಡೆದುಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್‌ನಲ್ಲಿ 15,000 ಕೋಟಿ ರೂ. ಹಗರಣ ನಡೆದಿದೆ. ಸಿದ್ದರಾಮಯ್ಯ ಹೆಸರಿಗೆ ಮಾತ್ರ ಮುಖ್ಯಮಂತ್ರಿ, ಆದರೆ ನಿಜವಾದ ಅಧಿಕಾರ ಬೇರೆಡೆ ಇದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಸತ್ತು ಸಂಸ್ಕಾರವಾಗಿದ್ದ ಹೆಂಡತಿ 5 ವರ್ಷದ ಬಳಿಕ ಎದ್ದು ಬಂದ್ಲು: ಆದರೆ ಸೆರೆಮನೆ ವಾಸ ಅನುಭವಿಸಿದ್ದು ಮಾತ್ರ ಗಂಡ!

ವಕ್ಫ್ ತಿದ್ದುಪಡಿಯನ್ನ ಸ್ವಾಗತಿಸುತ್ತೇವೆ: ಕಾಂಗ್ರೆಸ್ ಪಕ್ಷ ತನ್ನ ಓಲೈಕೆ ರಾಜಕಾರಣಕ್ಕಾಗಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಯಾವ ಜಮೀನನ್ನು ಬೇಕಾದರೂ ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಣೆ ಮಾಡಿಕೊಳ್ಳುವ ಅವಕಾಶ ಕೊಟ್ಟಿತ್ತು. ಇದರಿಂದ ರೈತರ ಜಮೀನು, ದೇವಸ್ಥಾನ, ಮಠ-ಮಂದಿರಗಳ ಆಸ್ತಿ ಎಲ್ಲ ಕಬಳಿಕೆ ಆಗುತ್ತಿತ್ತು. ಈಗ ಎನ್ ಡಿಎ ಸರ್ಕಾರ ತಂದಿರುವ ತಿದ್ದುಪಡಿಯಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಮಠ, ಮಾನ್ಯಗಳ ಜಮೀನು ಸುರಕ್ಷಿತವಾಗಿ ಉಳಿಯಲಿದೆ. ಇದಕ್ಕಾಗಿ ಪ್ರಧಾನಮಂತ್ರಿಗಳಿಗೆ, ಕೇಂದ್ರ ಗೃಹ ಸಚಿವರಿಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.