ಅಸಮಾಧಾನದ ಪ್ರಹಸನ ಬೆನ್ನಲ್ಲೇ ರಾಜ್ಯದ ಮತ್ತೊಬ್ಬ ಸಚಿವರ ರಾಜೀನಾಮೆಗೆ ಆಗ್ರಹ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಇದರ ಬೆನ್ನಲ್ಲೇ ಇದೀಗ ರಾಜೀನಾಮೆ ಪ್ರಹಸನಗಳು ನಡೆಯುತ್ತಿದೆ. ಇದೇ ವೇಳೆ ಮತ್ತೋರ್ವ ಸಚಿವರ ರಾಜೀನಾಮೆಗೆ ಆಗ್ರಹಿಸಲಾಗಿದೆ.
ಬೆಂಗಳೂರು (ಜ.28): ದೆಹಲಿಯ ರೈತರ ಪ್ರತಿಭಟನೆಯಲ್ಲಿ ಭಯೋತ್ಪಾದಕರಿದ್ದರೆಂದು ಹೇಳಿಕೆ ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಸಿಕ ಸ್ಥಿಮಿತ ಕಳೆದುಕೊಂಡಿದ್ದು, ನಿಮ್ಹಾನ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಸಿ.ಪಾಟೀಲ್ ರೈತರನ್ನು ಭಯೋತ್ಪಾದಕರೆಂದು ಹೇಳಿ ಅವಮಾನಿಸಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಭಯೋತ್ಪಾದಕರು ಇದ್ದರೆನ್ನುವ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮಾಹಿತಿ ಇದ್ದರೆ ಸರ್ಕಾರಕ್ಕೆ ಕೊಡಲಿ ಎಂದರು.
'ಅನ್ನದಾತರನ್ನ ಭಯೋತ್ಪಾದಕರೆಂದ ಬಿ.ಸಿ.ಪಾಟೀಲ್ ರೈತರ ಕ್ಷಮೆಯಾಚಿಸಲಿ'
ಇಡೀ ರೈತ ಸಮುದಾಯವನ್ನ ಭಯೋತ್ಪಾದಕರು ಎಂಬ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ಬಿ.ಸಿ.ಪಾಟೀಲ ರೈತ ಸಮೂಹದ ಕ್ಷಮೆ ಕೇಳಬೇಕು. ತಮ್ಮ ಕೃಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.