1 ಪೀಸ್ ಕುರಿ ಮಾಂಸ ತಿನ್ನಿ, ಕತೆಯೇ ಬೇರೆ : ಕಾಲೆಳೆದ ರಮೇಶ್ ಕುಮಾರ್
ಹೋಳಿಗೆ ತುಪ್ಪ ಎಂದುಕೊಂಡಿದ್ದೀರಿ. ಒಂದು ಪೀಸ್ ಕುರಿ ಮಾಂಸ ತಿಂದು ನೋಡಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ರಮೇಶ್ ಕುಮಾರ್ ಹೇಳಿದರು.
ವಿಧಾನಸಭೆ (ಫೆ.03): ಕುರಿ ಸಾಕಾಣಿಕೆ ಹಾಗೂ ಕುರಿ ಮಾಂಸ ಸೇವನೆ ಬಗೆಗಿನ ಪ್ರಸ್ತಾಪವು ಸದನದಲ್ಲಿ ಸ್ವಾರಸ್ಯಕರ ಚರ್ಚೆ ಹುಟ್ಟು ಹಾಕಿತು. ‘ನೀವು ಹೋಳಿಗೆ, ತುಪ್ಪ ಬಿಟ್ಟು ಒಂದು ಸಲ ಕುರಿ ಮಾಂಸದ ಪೀಸ್ ತಿನ್ನಿ. ಅದರ ಕತೆಯೇ ಬೇರೆ’ ಎಂದು ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರ ಕಾಲೆಳೆದರು.
ವಿಧಾನಸಭೆಯಲ್ಲಿ ಮಂಗಳವಾರ ಕುರಿ ಮೃತಪಟ್ಟರೆ ಪರಿಹಾರ ನೀಡುವ ಕುರಿತು ನಡೆದ ಚರ್ಚೆಯಲ್ಲಿ ಕೆ.ಆರ್. ರಮೇಶ್ ಕುಮಾರ್ ಅವರು, ಕುರಿ ಮೃತಪಟ್ಟರೆ ಅದಕ್ಕೆ ಪರಿಹಾರ ನೀಡುವುದರಿಂದ ಬಡ ರೈತರಿಗೆ ಅನುಕೂಲವಾಗಲಿದೆ. ನಾನು ಆ ವೃತ್ತಿಯಲ್ಲಿರುವವನಾಗಿ ಹೇಳುತ್ತಿದ್ದೇನೆ ಎಂದರು.
ನಾನು ಕೇಜ್ರಿವಾಲ್ ದೊಡ್ಡ ಅಭಿಮಾನಿ : ರಮೇಶ್ ಕುಮಾರ್ ...
ಈ ವೇಳೆ ಕಾಗೇರಿ ಅವರು, ರಮೇಶ್ಕುಮಾರ್ ಅವರಿಗೆ ಕುರಿ ಮೇಯಿಸುವ ಆಸಕ್ತಿ ಬಂದಿದ್ದು ಹೇಗೆ ಎಂಬುದು ಗೊತ್ತಾಗಲಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ಕುಮಾರ್, ‘ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿ ಇರುತ್ತದೆ. ನೀವು ಸಂಘಕ್ಕೆ ಹೋದಿರಿ. ನಾನು ಕುರಿ ಮೇಯಿಸಲು ಹೋದೆ ಎಂದರು.
ನೀವು ಬರೀ ಹೋಳಿಗೆ, ತುಪ್ಪ ಎಂದುಕೊಂಡು ಸುಮ್ಮನಿದ್ದೀರಿ. ಒಂದು ಪೀಸ್ ತಿಂದು ನೋಡಿ ಅದರ ಕತೆಯೇ ಬೇರೆ’ ಎಂದು ಕಿಚಾಯಿಸಿದರು.
ಇದಕ್ಕೂ ಮೊದಲು ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ಸಭಾಧ್ಯಕ್ಷರೇ ನಿಮ್ಮ ಪರವಾಗಿಯೇ ಮಾತನಾಡುತ್ತಿದ್ದೇನೆ. ಕುರಿಗೆ ಪರಿಹಾರ ನೀಡಬೇಕು ಎಂದರು. ಇದಕ್ಕೆ ಕಾಗೇರಿ ಅವರು ‘ನನ್ನ ಪರವಾಗಿ ಹೇಗೆ? ನಾನು ಮೇಯಿಸುವವನೂ ಅಲ್ಲ. ತಿನ್ನುವವನೂ ಅಲ್ಲ’ ಎಂದರು.