ಮೋದಿ ಸರ್ಕಾರದ ವಿರುದ್ಧ ಪರಮೇಶ್ವರ್ ಫುಲ್ ಗರಂ : ಸಿದ್ದರಾಮಯ್ಯ ಬಗ್ಗೆ ನೋ ರಿಯಾಕ್ಷನ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಮೋದಿ ಸರ್ಕಾರ ತಂದ ಕಾಯ್ದೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ (ಜ.17): ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರದ ಕಾಯ್ದೆಗಳ ವಿರುದ್ಧ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮೊದಲಾದವು ರೈತ ವಿರೋಧಿ ಕಾಯ್ದೆಗಳಾಗಿವೆ ಎಂದು ಕಾಂಗ್ರೆಸ್ ಮುಖಂಡ ಪರಮೇಶ್ವರ್ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್, ಕೇಂದ್ರ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ರೈತರಿಗೆ ಸಿಗುತ್ತಿಲ್ಲ. ಅದಾನಿ, ಅಂಬಾನಿ ಮೊದಲಾದ ವರು ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಬರಲು ಈ ಕಾಯ್ದೆ ಸಹಕಾರಿ ಆಗಿದೆ ಎಂದು ಪರಮೇಶ್ವರ್ ಹೇಳಿದರು.
ಎಪಿಎಂಸಿ, ಮಂಡಿ ವ್ಯವಸ್ಥೆ ಹಾಳು ಮಾಡಿ ಬಹು ರಾಷ್ಟ್ರೀಯ ಕಂಪನಿಯ ವ್ಯವಸ್ಥೆ ತರಲು ಹೊರಟಿದ್ದಾರೆ. ಆಹಾರ ಭದ್ರತೆ ಕಾಯ್ದೆಗೆ ಇದು ಮಾರಕವಾಗಿದೆ. ಇದೇ ತಿಂಗಳ 20 ರಂದು ರಾಜಭವನಕ್ಕೆ ತೆರಳಿ ಕೇಂದ್ರ ಸರ್ಕಾರದ ಕಾಯ್ದೆಗಳನ್ನು ವಾಪಸು ಪಡೆಯಲು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುತ್ತದೆ. ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಹೆಚ್ಚಳವಾಗಿದ್ದು ಕಚ್ಚಾ ತೈಲ ದ ಬೆಲೆ ಕಡಿಮೆ ಇದ್ದರೂ ಬೆಲೆ ಹೆಚ್ಚಳವಾಗಿದೆ. ತೈಲ ಉತ್ಪನ್ನದ ಮೇಲೆ 69% ತೆರಿಗೆ ವಿಧಿಸಲಾಗಿದೆ. ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಬೆಲೆ ನಿಗದಿ ಮಾಡಬೇಕಿತ್ತು. ರಾಜ್ಯದ ಭೂ ಸುಧಾರಣೆ ಕಾಯ್ದೆಯು ಕೂಡ ರೈತರಿಗೆ ಮಾರಕವಾಗಿದೆ ಎಂದು ಪರಮೇಶ್ವರ್ ಹೇಳಿದರು.
ಏಪ್ರಿಲ್ ಬಳಿಕ ಯಡಿಯೂರಪ್ಪನ್ನು ತೆಗೆಯುತ್ತಾರೆ : ಉನ್ನತ ಮೂಲದಿಂದ ಮಾಹಿತಿ .
ಉಳುವವನೇ ಹೊಲದೊಡೆಯ ಜಾರಿಗೆ ಬಂದ ಮೇಲೆ ಅತಿ ಸಣ್ಣ ರೈತರು ಹೆಚ್ಚಾಗಿದ್ದಾರೆ. ಇಂತಹ ರೈತರಿಗೆ ಅನುಕೂಲ ಮಾಡಿ ಕೊಡುವ ಬದಲು ಈ ಕಾಯ್ದೆ ಭೂಮಿ ಕಳೆದುಕೊಳ್ಳುವಂತೆ ಮಾಡುತ್ತದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ 33 ಸಾವಿರ ಕೋಟಿ ಜಿಎಸ್ ಟಿ ಹಣ ಇನ್ನೂ ಬಂದಿಲ್ಲ. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ತೀರಾ ಕೆಟ್ಟದಾಗಿದೆ ಎಂದು ಪರಮೇಶ್ವರ್ ಹೇಳಿದರು.
ದೇಶದಲ್ಲಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಹಣಕಾಸಿನ ಸ್ಥಿತಿ ಗತಿ ತಿಳಿಸಿ ಕೇಂದ್ರ ರೈತ ವಿರೋಧಿ ಸರ್ಕಾರ, ರೈತ ವಿರೋಧಿ ಕಾಯ್ದೆ ಹಿಂಪಡೆಯಬೇಕು. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು ದೇಶದಲ್ಲಿ ಗೋ ಮಾಂಸ ರಫ್ತು ನಿಷೇಧಿಸಬೇಕು. ಅತಿ ಹೆಚ್ಚು ಗೋಮಾಂಸ ರಪ್ತು ಮಾಡುವಲ್ಲಿ ಪ್ರಪಂಚದಲ್ಲಿ ನಾವು ಎರಡನೇ ಸ್ಥಾನ ದಲ್ಲಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಭದ್ರಾವತಿ ಗೆ RAF ಘಟಕ ಸ್ಥಾಪನೆ ಮಾಡಲು ನನ್ನ ಅಧಿಕಾರಾವಧಿಯಲ್ಲಿ ಭೂಮಿ ಮಂಜೂರು ಮಾಡಲಾಗಿತ್ತು. ಗೃಹ ಸಚಿವ ಅಮಿತ್ ಶಾರಿಗೆ ಮನವಿ ಸಲ್ಲಿಸಲು ಹೋದ ವಿಐಎಸ್ಎಲ್ ಕಾರ್ಮಿಕರನ್ನು ಬಂಧಿಸಲಾಯಿತು. ಇದು ಸರಿಯಾದ ಕ್ರಮ ಅಲ್ಲ ಎಂದರು.
ಸಿದ್ದರಾಮಯ್ಯ ವಿಚಾರ ಪ್ರಸ್ತಾಪ : ನಮ್ಮ ಪಕ್ಷದವರೇ ನನ್ನ ಸೋಲಿಸಿದರು ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಪರಮೇಶ್ವರ್ ಈಗ ಈ ವಿಚಾರದ ಬಗ್ಗೆ ಪ್ರಸ್ತಾಪ ಬೇಡ. ಜಿಪಂ, ತಾಪಂ ಚುನಾವಣೆ ಗೆ ಕಾಂಗ್ರೆಸ್ ಪಕ್ಷ ಸಕಲ ಸಿದ್ದತೆ ನಡೆಸಿದೆ. ಗ್ರಾಪಂ ಚುನಾವಣೆ ಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ್ದು ಕಾಂಗ್ರೆಸ್ ಪಕ್ಷ ಬಿಜೆಪಿ ಅಲ್ಲ ಎಂದು ಪರಮೇಶ್ವರ್ ಹೇಳಿದರು.