ಕಾಂಗ್ರೆಸ್ಗೆ ಹೊಸ ಉತ್ಸಾಹ : ಸಿಕ್ಕಿದೆ ಲಾಭದ ಸಂದೇಶ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೂಡಿ ಮತವಿಭಜನೆ ತಡೆದು ಬಿಜೆಪಿಯನ್ನು ಬಗ್ಗುಬಡಿಯಬಹುದು ಎಂಬ ಆಶಾಭಾವನೆ ಕಾಂಗ್ರೆಸ್ ನಲ್ಲಿ ಇದೀಗ ಉಂಟಾಗಿದೆ.
ಬೆಂಗಳೂರು : ಉಪ ಚುನಾವಣೆ ನಡೆದ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಕೂಟವಾದ ಜೆಡಿಎಸ್ ಹಾಗೂ ಕಾಂಗ್ರೆಸ್ ನಿರೀಕ್ಷಿತ ಗೆಲುವು ಸಾಧಿಸಿರುವುದು ಮುಂದಿನ ಲೋಕಸಭಾ ಚುನಾವಣೆವರೆಗೂ ಈ ಸಮ್ಮಿಶ್ರ ಸರ್ಕಾರ ಸುರಕ್ಷಿತ ಎಂಬ ಸಂದೇಶ ರವಾನೆಯಾದ ಸಮಾಧಾನವನ್ನು ಉಪ ಚುನಾವಣಾ ಫಲಿತಾಂಶ ಕಾಂಗ್ರೆಸ್ ನಾಯಕತ್ವಕ್ಕೆ ನೀಡಿದೆ. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೂಡಿ ಮತವಿಭಜನೆ ತಡೆದು ಬಿಜೆಪಿಯನ್ನು ಬಗ್ಗುಬಡಿಯಬಹುದು ಎಂಬ ಆಶಾಭಾವನೆ ಉಂಟಾಗಿದೆ.
ಇದರ ತಕ್ಷಣದ ಲಾಭವೆಂದರೆ, ಬಿಜೆಪಿ ಆಪರೇಷನ್ ಕಮಲದ ಸೆಳತಕ್ಕೆ ಒಳಗಾಗುವ ಕಾಂಗ್ರೆಸ್ ಶಾಸಕರ ಸಂಖ್ಯೆ ಕಡಿಮೆಯಾಗುತ್ತದೆ. ಸಂಪುಟ ವಿಸ್ತರಣೆ ಮಾಡಿ ತಮಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷ ತ್ಯಾಗ ಮಾಡುವ ಬೆದರಿಕೆಯೊಡ್ಡುವ ಶಾಸಕರಲ್ಲಿ ಅಳುಕು ಉಂಟಾಗುತ್ತದೆ. ನಿಗಮ ಮಂಡಳಿ ನೇಮಕದ ವೇಳೆ ಶಾಸಕರು ಹೆಚ್ಚು ಸದ್ದು ಗದ್ದಲವಿಲ್ಲದೆ ಪಾಲಿಗೆ ಬಂದಿದ್ದನ್ನು ಸ್ವೀಕರಿಸುವ ಮನಸ್ಥಿತಿಗೆ ಬರಬಹುದು.
ಇದರ ಜತೆಗೆ, ಮೈತ್ರಿ ಕೂಟವು ಜತೆಯಲ್ಲಿ ಲೋಕಸಭಾ ಚುನಾವಣೆ ಎದುರಿಸಬೇಕು ಎಂಬ ವಾದಕ್ಕೆ ಮತ್ತಷ್ಟುಪುಷ್ಟಿದೊರೆಯುತ್ತದೆ. ಬಿಜೆಪಿಯನ್ನು ಸೋಲಿಸಬೇಕು ಎಂಬ ಏಕೈಕ ಉದ್ದೇಶವನ್ನು ಮುಂದಿಟ್ಟುಕೊಂಡು ಶಿವಮೊಗ್ಗ, ಬಳ್ಳಾರಿಯಲ್ಲಿ ಉಭಯ ಪಕ್ಷಗಳ ನಾಯಕರು ಒಗ್ಗೂಡಿ ಹೋರಾಟ ನಡೆಸಿದ್ದು ಫಲ ನೀಡಿದೆ. ಶಿವಮೊಗ್ಗದಲ್ಲಿ ಗೆಲುವು ದೊರೆಯದಿದ್ದರೂ ಸೋಲಿನ ಅಂತರ ಅತ್ಯಂತ ಕಡಿಮೆಯಾಗಿದೆ. ಇನ್ನು ಬಳ್ಳಾರಿಯಲ್ಲಿ ಭಾರಿ ಅಂತರದ ಜಯ ದೊರಕಿದೆ.
ಮಂಡ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಮತ ದೊರಕಿರುವುದರ ಹಿಂದೆ ಕಾಂಗ್ರೆಸ್ ಸ್ಥಳೀಯ ನಾಯಕತ್ವವು ಕಾರಣ ಎಂದು ಹೇಳಲಾಗುತ್ತಿದ್ದರೂ ಜೆಡಿಎಸ್-ಕಾಂಗ್ರೆಸ್ ಒಗ್ಗೂಡಿ ಲೋಕಸಭಾ ಚುನಾವಣೆ ಎದುರಿಸಿದರೆ ಬಿಜೆಪಿಯ ಆಶೋತ್ತರಗಳಿಗೆ ಬೆಂಕಿ ಹಚ್ಚಬಹುದು ಎಂಬ ಸ್ಪಷ್ಟಸಂದೇಶ ಈ ಚುನಾವಣೆ ನೀಡಿದೆ.
ಕಾಂಗ್ರೆಸ್ ತಾನು ಸ್ಪರ್ಧಿಸಿದ ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಿರುವುದು ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷಕ್ಕೆ ಆನೆ ಬಲ ದೊರಕಿದಂತಾಗಿದೆ.
ಬಳ್ಳಾರಿಯೆಂಬ ಒಂದು ಕಾಲದ ತನ್ನ ಭದ್ರಕೋಟೆಯನ್ನು ಬಿಜೆಪಿಯಿಂದ ಕಿತ್ತುಕೊಂಡು ಸಮಾಧಾನ ಕಾಂಗ್ರೆಸ್ಗೆ ದೊರಕಿದೆ. ಈ ಕ್ಷೇತ್ರದಲ್ಲಿ ಭಾರಿ ಜಯ ದೊರಕಿರುವುದು ಪ್ರಭಾವಿ ಸಚಿವ ಡಿ. ಕೆ. ಶಿವಕುಮಾರ್ ಅವರ ವೈಯಕ್ತಿಕ ವರ್ಚಸ್ಸು ಮತ್ತಷ್ಟುಹೆಚ್ಚಾಗಲು ಕಾರಣವಾಗಿದೆ.
ಪಕ್ಷದಲ್ಲಿ ವಿರೋಧವಿದ್ದರೂ ಉಗ್ರಪ್ಪ ಅವರನ್ನು ಬಳ್ಳಾರಿಯಲ್ಲಿ ಕಣಕ್ಕೆ ಇಳಿಸಿದ್ದು ಮಾತ್ರವಲ್ಲದೆ, ಅವರ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದರು. ಮಾತ್ರವಲ್ಲದೆ, ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಡೆ ಕ್ಷಣದಲ್ಲಿ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರುವಂತೆ ಮಾಡಿದ ತಂತ್ರಗಾರಿಕೆ ಸಹ ಮೆರೆದಿದ್ದರು. ಇದು ಶಿವಕುಮಾರ್ ಅವರಿಗೆ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರದ ಮಟ್ಟದಲ್ಲಿ ಶಕ್ತಿ ತುಂಬಲಿದೆ.
ಇನ್ನು ಜಮಖಂಡಿಯಲ್ಲಿ ಕಾಂಗ್ರೆಸ್ ನಿರೀಕ್ಷೆಯಂತೆಯೇ ಗೆದ್ದಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸತತ ಪ್ರಚಾರ ಹಾಗೂ ಉಸ್ತುವಾರಿ ಹೊತ್ತಿದ್ದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಶ್ರಮ ಫಲ ನೀಡಿದೆ.